ಬಂಟ್ವಾಳ:ತಾಲ್ಲೂಕಿನ ಭಂಡಾರಿಬೆಟ್ಟು ನಿವಾಸಿ, ಹಿರಿಯ ಸ್ಯಾಕ್ಸೋಫೋನ್ ವಾದಕ ಬಿ.ಗಣೇಶ ಶೇರಿಗಾರ್(79) ಇವರು ಅಸೌಖ್ಯದಿಂದ ಭಾನುವಾರ ಸಂಜೆ ಸ್ವಗೃಹದಲ್ಲಿ ನಿಧನರಾದರು. ಮೃತರಿಗೆ ಪತ್ನಿ ಮತ್ತು ಪುತ್ರ ಇದ್ದಾರೆ.

ಕಳೆದ 40ವರ್ಷಗಳ ಹಿಂದೆ ಬಂಟ್ವಾಳ, ಮಂಜೇಶ್ವರ, ತಂಜಾವೂರಿನಲ್ಲಿ ಕ್ಲಾರಿನೆಟ್, ನಾಗಸ್ವರ, ಸ್ಯಾಕ್ಸೋಫೋನ್ ತರಬೇತಿ ಪಡೆದು, ಇಲ್ಲಿನ ತಿರುಮಲ ಶ್ರೀ ವೆಂಕಟರಮಣ ಸ್ವಾಮಿ ದೇವಸ್ಥಾನದಲ್ಲಿ ಕಳೆದ 30ವರ್ಷಗಳಿಂದ ವಿವಿಧ ವಾದ್ಯ ನುಡಿಸುತ್ತಿದ್ದರು. ಬಂಟ್ವಾಳ ಶ್ರೀ ಸೀತಾರಾಮ ದೇವಸ್ಥಾನ, ಮಂಜೇಶ್ವರ ಶ್ರೀ ಅನಂತೇಶ್ವರ ದೇವಸ್ಥಾನ ಸಹಿತ ಜಿಲ್ಲೆಯ ವಿವಿಧೆಡೆ ಸ್ಯಾಕ್ಸೋಫೋನ್ ನುಡಿಸಿದ್ದಾರೆ. ಇವರಿಗೆ ಎರಡು ಬಾರಿ ಸ್ವರ್ಣಪದಕ ಗೌರವ ಸಂದಿದ್ದು, ನಾಲ್ಕು ಬಾರಿ ಧ್ವನಿಸುರುಳಿ ಬಿಡುಗಡೆಗೊಂಡಿದೆ.
ಮೃತರ ಅಂತ್ಯಕ್ರಿಯೆ ಬಡ್ಡಕಟ್ಟೆ ಸ್ಮಶಾನದಲ್ಲಿ ಸೋಮವಾರ ಮಧ್ಯಾಹ್ನ ನೆರವೇರಿತು.
ಸಂತಾಪ:
ಬಂಟ್ವಾಳ ತಾಲ್ಲೂಕು ಗಾಣಿಗರ ಸೇವಾ ಸಂಘದ ಅಧ್ಯಕ್ಷ ಬಿ.ರಘು ಸಪಲ್ಯ ಸಹಿತ ಅಪಾರ ಮಂದಿ ಮೃತರಿಗೆ ಅಂತಿಮ ನಮನ ಸಲ್ಲಿಸಿದರು.
