ಗುರುಪುರ : ಸಿಂಡಿಕೇಟ್ ಬ್ಯಾಂಕ್ ಗುರುಪುರ ಶಾಖೆಯ ಆಶ್ರಯದಲ್ಲಿ ಗುರುಪುರ ಶ್ರೀ ಸತ್ಯದೇವತಾ ಸಭಾಗೃಹದಲ್ಲಿ ಗ್ರಾಮೀಣ ಶೈಕ್ಷಣಿಕ ವಿಕಸನ ಕಾರ್ಯಕ್ರಮ ಆಯೋಜಿಸಲಾಯಿತು.ಸಿಂಡಿಕೇಟ್ ಬ್ಯಾಂಕ್ ಮಂಗಳೂರು ವಿಭಾಗದ ಜ್ಞಾನಜ್ಯೋತಿ ಆರ್ಥಿಕ ಸಾಕ್ಷರತಾ ಕೇಂದ್ರದ ಹಿರಿಯ ಸಲಹೆಗಾರ ಸತೀಶ್ ಅತ್ತಾವರ ಬ್ಯಾಂಕ್ ಮೂಲಕ ಸಾರ್ವಜನಿಕರಿಗೆ ಲಭ್ಯವಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರದ ಕಾರ್ಯಕ್ರಮಗಳ ನಿರ್ವಹಣೆ ಕುರಿತು ಮಾಹಿತಿ ನೀಡಿದರು.ವೀಸಾ ಕಾರ್ಡ್ ಶರಣಾಗತಿ ಮಾಡಿ ರೂಪೆ ಕಾರ್ಡು ಪಡೆಯಲು ಅವಕಾಶವಿದೆ. ರೂಪೆ ಲಾಭದಾಯಕ. ಬ್ಯಾಂಕ್ ಯಾವುದೇ ಕಾರಣಕ್ಕೂ ಮಾಹಿತಿಗಾಗಿ ಖಾತೆದಾರರಿಗೆ ಕರೆ ಮಾಡುವುದಿಲ್ಲ. ಮೋಸದ ಕರೆ ನಿರಾಕರಿಸಿ, ಸ್ಥಳೀಯ ಬ್ಯಾಂಕಿಗೆ ಮಾಹಿತಿ ನೀಡಿ ಎಂದವರು ಸಲಹೆ ನೀಡಿದರು.
ಪ್ರಧಾನಮಂತ್ರಿ ಸುರಕ್ಷಾ ವಿಮೆ ಯೋಜನೆಗೆ ವಾರ್ಷಿಕ 12 ರೂ ಹಾಗೂ ಪ್ರಧಾನಮಂತ್ರಿ ಜೀವನ ಜ್ಯೋತಿ ವಿಮೆ ಯೋಜನೆಗೆ 330 ರೂ ತುಂಬಬೇಕು. ಮೊದಲ ಯೋಜನೆಯಲ್ಲಿ, ವ್ಯಕ್ತಿ ಅಪಘಾತದಲ್ಲಿ ಮೃತಪಟ್ಟರೆ 14 ದಿನದಲ್ಲಿ ವಿಮೆ ಹಣ ಸಿಗುತ್ತದೆ. ಇದಕ್ಕೆ ಮರಣ ಪ್ರಮಾಣಪತ್ರ, ಎಫ್ಐಆರ್ ಅವಶ್ಯ. ಎರಡನೇ ಯೋಜನೆಯಲ್ಲಿ, ಪಾಲಿಸಿದಾರ ಯಾವುದೇ ರೀತಿಯಲ್ಲಿ ಮೃತಪಟ್ಟ 90 ದಿನದೊಳಗೆ ವಿಮೆ ಕ್ಲೇಮು ಮಾಡಬೇಕು. ಬಳಿಕ ಹಣ ಸಿಗುವುದಿಲ್ಲ. ಎರಡೂ ಯೋಜನೆಯಲ್ಲಿ ಹಣ ನಾಮಿನಿಗೆ ಸಿಗುತ್ತದೆ ಎಂದು ಸತೀಶ್ ವಿವರಿಸಿದರು.
ಉಳಿದಂತೆ, 18-40 ವಯಸ್ಸಿನೊಳಗಿನವರಿಗೆ ಲಭ್ಯವಿರುವ ಅಟಲ್ ಪಿಂಚಣಿ ಯೋಜನೆ ಹಾಗೂ ಪಿಎಂ ಸಾಮಾಜಿಕ ಭದ್ರತಾ ಯೋಜನೆ, ಪಿಎಂ ಮುದ್ರಾ ಯೋಜನೆ, ಶೈಕ್ಷಣಿಕ ಮತ್ತು ವಸತಿ ಸಾಲ, ವಿದ್ಯಾರ್ಥಿಗಳ ಬ್ಯಾಂಕ್ ಖಾತೆ, ಆಧಾರ್ ಜೋಡಣೆ ಮೊದಲಾದ ಬ್ಯಾಂಕಿಂಗ್ ವ್ಯವಹಾರಗಳ ಬಗ್ಗೆ ಮಾಹಿತಿ ನೀಡಿದರು.ಸಿಂಡಿಕೇಟ್ ಬ್ಯಾಂಕ್ ಗುರುಪುರ ಶಾಖೆ ಮ್ಯಾನೇಜರ್ ಪ್ರಭಾ ಪಿ. ರಾವ್ ವೇದಿಕೆಯಲ್ಲಿದ್ದು, ಗ್ರಾಮೀಣ ಮಹಿಳೆಯರೊಂದಿಗೆ ಸಂವಾದ ನಡೆಸಿದರು.
