ಗುರುಪುರ : ಸೇವಾ ಬ್ರಿಗೇಡ್(ರಿ) ಗುರುಪುರ ಇದರ ದ್ವಿತೀಯ ವರ್ಷದ `ಆಟಿಡೊಂಜಿ ಕೂಟ’ ಭಾನುವಾರ ಬೆಳಿಗ್ಗೆ ಗುರುಪುರ ಹಿಂದೂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಕ್ಕಿ ತುಂಬಿದ ಕಳಸೆಯಲ್ಲಿಟ್ಟ ಹಿಂಗಾರ ಒಡೆಯುವುದರೊಂದಿಗೆ ಉದ್ಘಾಟನೆಗೊಂಡಿತು.

ವೇದಿಕೆಯಲ್ಲಿ ಉದ್ಯಮಿ ಯಶವಂತ ಕೋಟ್ಯಾನ್ ಮಾತನಾಡಿ, ಎರಡನೇ ವರ್ಷದ `ಆಟಿಡೊಂಜಿ ದಿನ’ ಮಕ್ಕಳಿಗೆ ತುಳುನಾಡ ಜಾನಪದ ಸಂಸ್ಕøತಿಯನ್ನು ಅರಿತುಕೊಳ್ಳುವಂತಾಗಲಿ ಹಾಗೂ ಇದೊಂದು ಪರಂಪರೆಯಾಗಿ ಪರಿಚಯವಾಗಲಿ ಎಂದರು.

ವೇದಿಕೆಯಲ್ಲಿ ಬ್ರಿಗೇಡಿನ ಗೌರವಾಧ್ಯಕ್ಷರಾದ ಪುರಂದರ ಮಲ್ಲಿ, ರಮಾನಂದ ಶೆಟ್ಟಿ ಹಾಗೂ ಬೆಳ್ಳೂರುಗುತ್ತು ರವೀಂದ್ರ ಶೆಟ್ಟಿ, ಮಹಿಳಾ ಸದಸ್ಯೆ ಜಲಜಾ ಉಪಸ್ಥಿತರಿದ್ದರು. ಬ್ರಿಗೇಡ್ ಸಂಚಾಲಕ ವಕೀಲ ಜಯಪ್ರಕಾಶ ಭಂಡಾರಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ತುಳುನಾಡ ಹಳೆ ಸಂಪ್ರದಾಯದಂತೆ ಓಲೆಬೆಲ್ಲ ಮತ್ತು ನೀರಿನೊಂದಿಗೆ ಸಭಿಕರನ್ನು ಸ್ವಾಗತಿಸಲಾದ ಈ ಕಾರ್ಯಕ್ರಮದಲ್ಲಿ ಮಹಿಳೆಯರು, ಮಕ್ಕಳು ಮತ್ತು ಪುರುಷರಿಗೆ ಪ್ರತ್ಯೇಕ ಸ್ಪರ್ಧೆ ಏರ್ಪಡಿಸಲಾಗಿತ್ತು. ಸಂಗೀತ ಕುರ್ಚಿ, ತೆಂಗಿನಕಾಯಿ ಕಟ್ಟುವುದು, ಮಡಕೆ ಒಡೆಯುವುದು, ಗುಂಡ ಕಟ್ಟುವುದು, ಹಗ್ಗ ಜಗ್ಗಾಟ, ಬಿಂದಿ ಇಡುವುದು, ತುಳು ಪದ್ಯ ಹಾಡುವುದು ಹಾಗೂ ದಂಪತಿಗಳಿಗೆ ವಿಶೇಷ ಸ್ಪರ್ಧೆ ಆಯೋಜಿಸಲಾಗಿತ್ತು.
ಕೂಟದಲ್ಲಿ ಪಾಲ್ಗೊಂಡವರಿಗೆ ತುಳುನಾಡ ವಿವಿಧ ಖಾದ್ಯಗಳ ರುಚಿ ಸವಿಯುವ ಅವಕಾಶವಿತ್ತು. ಮೂಡೆ, ಇಡ್ಲಿ, ಅಪ್ಪ, ಸೇವಿಗೆ, ಪತ್ರೋಡೆ, ಉಪ್ಪಡ್ಪಚ್ಚಿರ್, ಕಡ್ಲೆ-ಬಲ್ಯಾರ್, ಚಟ್ಟೆ ಸೊಪ್ಪು(ತಜಂಕ್) ಪಲ್ಯ, ವಿವಿಧ ಸೊಪ್ಪಿನ ಚಟ್ನಿ, ತೇಟ್ಲದ ಸಾಂಬಾರು ಮೊದಲಾದ ತಿಂಡಿ-ತಿನಸುಗಳು ಆಟಿಯ ಪರಂಪರೆ ಹೆಚ್ಚಿಸುವಂತೆ ಮಾಡಿತು.
ಬಳಿಕ ಸಾಂಸ್ಕøತಿಕ ಕಾರ್ಯಕ್ರಮವು ಪೊಳಲಿ ಅಶೋಕರಿಂದ ವಿವಿಧ ರೀತಿಯ ನೃತ್ಯ ಹಾಗೂ ಮಂಗಳೂರಿನ ಖ್ಯಾತ ವಿಶ್ವಾಸ ಮೆಲೋಡಿಸ್ನ ವಿಶ್ವಾಸ್ ಗುರುಪುರ ಅವರ ಸಂಗೀತ ಕಾರ್ಯಕ್ರಮ ಗಮನಸೆಳೆಯಿತು. ಸಂಜೆ ವಿಜೇತರಿಗೆ ಬಹುಮಾನ ವಿತರಿಸುವುದರ ಮೂಲಕ ಸಮಾರೋಪ ಸಮಾರಂಭ ಜರುಗಿತು.


