ಕೈಕಂಬ : ಸತ್ಸಂಗದ ಮೂಲಕ ಮನೆ ಮನೆಯಲ್ಲಿ ಭಜನೆ ಮಾಡುತ್ತ, ಮಾನಸಿಕ ವ್ಯವಸ್ಥೆ ಸಂತುಲಿತಗೊಳಿಸಲು ಪ್ರಯತ್ನಿಸಲಾಗುತ್ತಿದೆ. ಇದರೊಂದಿಗೆ ರಾಷ್ಟ್ರದ ಪ್ರಸಕ್ತ ವ್ಯವಸ್ಥೆಯೂ ಸಂತುಲಿತವಾಗಬೇಕಿದೆ. ಇದಕ್ಕಾಗಿ ನಮ್ಮಿಂದ ವಿನೂತನ ಪ್ರಯತ್ನವಾಗಬೇಕು. ಆ ಪ್ರಯತ್ನವು ವಿಭಿನ್ನ ಮನಸ್ಸುಗಳ ಒಗ್ಗೂಡುವಿಕೆಯಲ್ಲಿ ಸಕಾರಾತ್ಮಕವಾದ ಸತ್ಕಾರ್ಯಗಳು ನಡೆಯಬೇಕು. ಭಜನೆಯ ಒಟ್ಟಿಗೆ ದೇಶಸ್ಮರಣೆ, ದೇಶಭಕ್ತಿ ಸಮರ್ಪಣೆ ಪ್ರಯತ್ನವೂ ಆಗಬೇಕೆಂಬ ಉದ್ದೇಶ ಈ ಸತ್ಸಂಗದಲ್ಲಿದೆ ಎಂದು ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮಿಜಿ ಅಭಿಪ್ರಾಯಪಟ್ಟರು.
ಗುರುಪುರ ಉಪ್ಪುಗೂಡಿನ ಧರ್ಮಣ ಪೂಜಾರಿಯ ಮನೆಯಲ್ಲಿ ನಡೆದ ವಿಶ್ವ ಹಿಂದೂ ಪರಿಷತ್, ಬಜರಂಗ ದಳ, ಮಾತೃಶಕ್ತಿ ದುರ್ಗಾವಾಹಿನಿ ವಜ್ರದೇಹಿ ಶಾಖೆ ಗುರುಪುರ ಇವುಗಳ ಕೂಡುವಿಕೆಯಲ್ಲಿ ನಡೆದ ಸತ್ಸಂಗ ಭಜನಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಸ್ವಾಮಿ, ರಾಷ್ಟ್ರೀಯ ಸ್ವಯಂ ಸೇವಕ ಸಂಘವು ತನ್ನೊಂದಿಗೆ ವಿಹಿಂಪದಂತಹ ಪರಿವಾರ ಸಂಘಟನೆಗಳನ್ನು ಬೆಳೆಸಿದೆ. ಅವುಗಳು ಉತ್ತಮ ಕೆಲಸ ಮಾಡುತ್ತಿವೆ. ಮಾತೃಶಕ್ತಿ ದುರ್ಗಾವಾಹಿನಿ ತಾಯಿಯ ಸ್ವರೂಪದಲ್ಲಿ ಬೆಳೆದು ಮನೆಮನೆಯಲ್ಲಿ ಭಜನಾ ಸಂಕೀರ್ತನೆ, ದೇಶಭಕ್ತಿ ನೆಲೆಗೊಳಿಸಲು ಪ್ರಯತ್ನಿಸುತ್ತಿದೆ. ಸಂಸಾರಕ್ಕಾಗಿ ಪ್ರಾರ್ಥನೆ ಮಾಡುತ್ತೇವೆ. ಆದರೆ ದೇಶಕ್ಕಾಗಿ ಪ್ರಾರ್ಥನೆ ಸಲ್ಲಿಸುವುದು ಕಡಿಮೆ. ಈ ನಿಟ್ಟಿನಲ್ಲಿ, ಎಲ್ಲರನ್ನೂ ಒಂದೆಡೆ ಸೇರಿಸುವ ಭಾವನಾತ್ಮಕ ಅಭಿವ್ಯಕ್ತಿಯ ಈ ಸತ್ಸಂಗ ಎಲ್ಲರಿಗೂ ಒಳ್ಳೆಯದು ಮಾಡಲಿ ಎಂದರು.
ಮಠದಲ್ಲಿ ಗುರುವಾರದಿಂದ ಮಠದಲ್ಲಿ ಚಾತುರ್ಮಾಸ್ಯ ವ್ರತಾಚರಣೆ ಆರಂಭಿಸಿರುವ ವಜ್ರದೇಹಿ ಸ್ವಾಮಿ, ಮಠದಲ್ಲಿ ವಿಶೇಷ ಪೂಜೆ ನೆರವೇರಿಸಿದ ಬಳಿಕ ಸತ್ಸಂಗ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಸತ್ಸಂಗ ಭಜನಾ ಕಾರ್ಯಕ್ರಮದಲ್ಲಿ ಜಿಲ್ಲಾ ಸತ್ಸಂಗ ಪ್ರಮುಖ ಕೃಷ್ಣ ಕಜೆಪದವು, ವಿಹಿಂಪ ಗುರುಪುರ ಪ್ರಖಂಡ ಅಧ್ಯಕ್ಷ ವಿಷ್ಣು ಕಾಮತ್, ಉಪಾಧ್ಯಕ್ಷ ಹರೀಶ್ ಕಾಜಿಲ, ಬಜರಂಗ ದಳ ಪ್ರಖಂಡ ಸಂಚಾಲಕ ನವೀನ್ ಮೂಡುಶೆಡ್ಡೆ, ದುರ್ಗಾವಾಹಿನಿ ಸಂಚಾಲಕಿ ವಿಜಯಾ ಗುರುಪುರ, ಬಿಜೆಪಿ ಗುರುಪುರ ಮುಖಂಡ ರಾಜೇಶ ಸುವರ್ಣ ಹಾಗೂ ಹಿಂದೂ ಸಂಘಟನೆಗಳ ಪದಾಧಿಕಾರಿಗಳಾದ ವಸಂತ ಸುವರ್ಣ, ರವಿ ಸುವರ್ಣ, ರಾಜೇಶ ಗಂಜಿಮಠ, ವಿಕ್ರಂ, ದಿನೇಶ ಕಂದಾವರಪದವು, ಸುಚೇತ ಕಾಜಿಲ, ಸಂದೇಶ ನೀರುಮಾರ್ಗ ಮೊದಲಾದವರಿದ್ದರು.

