ಕಾಸರಗೋಡು: ಕಾಸರಗೋಡಿನಲ್ಲಿ ಮತ್ತೆ ಆರ್ರೆಸ್ಸೆಸ್ ಕಾರ್ಯಕರ್ತ ಮನೋಜ್ ಎಂಬವರ ಕೊಲೆ ನಡೆದಿದ್ದು, ಘಟನೆಯನ್ನು ಖಂಡಿಸಿ ಆರ್ಎಸ್ಎಸ್ ಕೇರಳ ಬಂದ್ಗೆ ಕರೆ ನೀಡಿದೆ. ಆದರೆ ಕಾಸರಗೋಡಿನಲ್ಲಿ ಗಣೇಶೋತ್ಸವ ಹಬ್ಬದ ಸಡಗರವಿರುವುದರಿಂದ ಅದನ್ನು ಬಂದ್ನಿಂದ ಹೊರಗಿಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಇಂದು ಬೆಳಗ್ಗಿನಿಂದಲೇ ವಾಹನಗಳು ರಸ್ತೆಗಿಳಿಯಲಿಲ್ಲ. ಅಲ್ಲದೆ ಅಂಗಡಿಮುಂಗಟ್ಟುಗಳು ಸಂಪೂರ್ಣವಾಗಿ ಮುಚ್ಚಿದ್ದವು. ಬಿಗಿ ಮುಂಜಾಗೃತಕ್ರಮವಾಗಿ ಪೊಲೀಸ್ ಸರ್ಪಗಾವಲು ವಿಧಿಸಲಾಗಿದ್ದು, ಅಹಿತಕರ ಘಟನೆ ನಡೆಯದಂತೆ ಸೂಚನೆ ನೀಡಲಾಗಿದೆ. ಇಂದು ಶಾಲಾಕಾಲೇಜ್ಗಳಿಗೆ ರಜೆ ಘೋಷಿಸಲಾಗಿದೆ.

ಘಟನೆಯ ಹಿನ್ನೆಲೆ: ಕಣ್ಣೂರಿನ ಡಯಮಂಡ್ ಮುಕ್ಕಿನಲ್ಲಿ ಊಂಟಾದ ಸಿಪಿಎಂ-ಆರ್ಎಸ್ಎಸ್ ಸಂಘರ್ಷದಿಂದಾಗಿ ಆರ್ಎಸ್ಎಸ್ ಕಾರ್ಯಕರ್ತ ತಲಶ್ಶೆರಿ ನಿವಾಸಿ ಮನೋಜ್ ಎಂಬವರ ಕೊಲೆ ನಡೆದಿದೆ. ಮನೋಜ್ ಸಂಚರಿಸುತ್ತಿದ್ದ ಒಮ್ನಿ ಗಾಡಿಗೆ ನಾಡಬಾಂಬ್ ಎಸೆಯಲಾಗಿತ್ತು. ಇದರಿಂದ ಮನೋಜ್ ಅವರ ವಾಹನ ನಿಯಂತ್ರಣ ತಪ್ಪಿ ಮರವೊಂದಕ್ಕೆ ಡಿಕ್ಕಿಹೊಡೆದು ನಿಂತಿತ್ತು. ಆಗ ವಾಹನದಿಂದ ಹೊರಬಂದ ಮನೋಜ್ ಅವರನ್ನು ದುಷ್ಕರ್ಮಿಗಳು ಮಚ್ಚನಿಂದ ಯದ್ವಾತದ್ವಾ ಕೊಚ್ಚಿ ಕೊಲೆ ಮಾಡಿದ್ದರು.
ಮನೋಜ್ ಅವರು ಆರ್ಎಸ್ಎಸ್ನ ಶಾರೀರಿಕ್ ಪ್ರಮುಖ ಆಗಿದ್ದರು. ಇವರ ಕೊಲೆಯ ಹಿನ್ನೆಲೆಯಲ್ಲಿ ಕಣ್ಣೂರಿನಲ್ಲಿ ನೂರಾರು ಮಂದಿ ಜಮಾಯಿಸಿದ್ದರು.





