ಬಂಟ್ವಾಳಃ ಸರಕಾರಿ ಶಾಲೆ ಉಳಿಸಿ ಆಂದೋಲನ ಹಾಗೂ ಹೊಸ ಶಿಕ್ಷಣ ನೀತಿಯನ್ನು ಜಾರಿಗೊಳಿಸುವಂತೆ ಆಗ್ರಹಿಸಿ ಸೆ. 8ರಂದು ಬೆಂಗಳೂರಿನಲ್ಲಿ ನಡೆಯುವ ಕಾಲ್ನಡಿಗೆ ಜಾಥಕ್ಕೆ ಈಗಾಗಲೇ ಸಿದ್ದತೆ ಆರಂಭವಾಗಿದೆ. ಇದಕ್ಕೆ ಪೂರ್ವಭಾವಿಯಾಗಿ ಕರೆಂಕಿ ಶ್ರೀ ದುರ್ಗಾ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಪ್ರಕಾಶ್ ಅಂಚನ್ ಹಾಗೂ ಶಿಕ್ಷಣ ಪ್ರೇಮಿ ಅನಿಲ್ ಶೆಟ್ಟಿ ಬೆಂಗಳೂರು ನೇತೃತ್ವದ ತಂಡ ಸೋಮವಾರ ಹಾಸನ ಜಿಲ್ಲೆಯ ಸರಕಾರಿ ಶಾಲೆಗಳಿಗೆ ಭೇಟಿ ನೀಡಿ ಅಲ್ಲಿನ ಸ್ಥಿತಿಗತಿಗಳ ಬಗ್ಗೆ ಅಧ್ಯಯನ ನಡೆಸಲಾಯಿತು.

ಸಕಲೇಶಪುರದ ಬಾಳ್ಳುಪೇಟೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಸ.ಹಿ.ಪ್ರ.ಶಾಲೆ ಬೆಳಗೋಡು, ಸ.ಹಿ.ಪ್ರಾ.ಶಾಲೆ ಪಾಳ್ಯ, ಸ.ಹಿ.ಪ್ರಾ.ಶಾಲೆ ಆಲೂರು ಇಲ್ಲಿಗೆ ಭೇಟಿ ನೀಡಲಾಯಿತು. ಅಲ್ಲಿ ಪೋಷಕರ ಸಭೆ ನಡೆಸಿ ಸರಕಾರಿ ಶಾಲೆ ಉಳಿಸುವ ಬಗ್ಗೆ ಚರ್ಚೆ ನಡೆಸಲಾಯಿತು. ಸೆ. 8 ರಂದು ನಡೆಯಲಿರುವ ಕಾಲ್ನಡಿಗೆ ಜಾಥಕ್ಕೆ ಬೆಂಬಲ ನೀಡುವಂತೆ ಮನವಿ ಮಾಡಿಕೊಳ್ಳಲಾಯಿತು.
ನಂತರ ಆಲೂರು ಶಾಸಕ ಎಚ್.ಕೆ.ಕುಮಾರಸ್ವಾಮಿಯವರನ್ನು ಭೇಟಿ ಮಾಡಿ ಸರಕಾರಿ ಶಾಲೆ ಉಳಿಸುವ ಅಂಗವಾಗಿ ಹಮ್ಮಿಕೊಂಡ ಮಿಸ್ಡ್ ಕಾಲ್ ಅಭಿಯಾನದ ಉದ್ದೇಶದ ಬಗ್ಗೆ ತಿಳಿಸಲಾಯಿತು. ವಿಶೇಷವೆಂದರೆ ಸ್ವತಃ ಶಾಸಕರು ಮಿಸ್ ಕಾಲ್ ನೀಡುವ ಮೂಲಕ ಅಭಿಯಾನಕ್ಕೆ ಬೆಂಬಲ ವ್ಯಕ್ತಪಡಿಸಿದರಲ್ಲದೆ ಈ ಬಗ್ಗೆ ವಿಧಾನಸಭೆಯಲ್ಲಿ ಧ್ವನಿ ಎತ್ತುವ ಬಗ್ಗೆ ಭರವಸೆ ನೀಡಿದರು.
ಈ ಸಂದರ್ಭ ಶ್ರೀ ದುರ್ಗಾ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಪ್ರಕಾಶ್ ಅಂಚನ್, ಸದಸ್ಯರಾದ ಪುರುಷೋತ್ತಮ ಅಂಚನ್, ಮಹೇಶ್, ಅನಿಲ್ ಶೆಟ್ಟಿ, ರಾಮಚಂದ್ರ ಪೂಜಾರಿ ಕರೆಂಕಿ, ದೀಪಕ್ ಸಾಲ್ಯಾನ್, ಸಕಲೇಶಪುರ ತಾ.ಪಂ.ಉಪಾಧ್ಯಕ್ಷ ಮಂಜುನಾಥ್, ಜಗನ್ನಾಥ ಸಕಲೇಶ್ ಪುರ, ಸುರೇಶ್, ಫಾಲಾಕ್ಷ, ವನಜ, ಮತ್ತಿತರರು ಉಪಸ್ಥಿತರಿದ್ದರು.
