ಮೂಡುಬಿದಿರೆ: ಪ್ರಕೃತಿಯನ್ನು ಸುಸ್ಥಿತರವಾಗಿ ಕಾಪಾಡಿಕೊಳ್ಳುವುದು ಅನಿವಾರ್ಯ. ಇಂದು ಅತಿಯಾದ ಜಾಗತೀಕರಣ, ನಗರೀಕರಣದಿಂದಾಗಿ ಪರಿಸರ ಹಾನಿಯಾಗುತ್ತಿದೆ, ಪ್ರಕೃತಿ ಉಳಿಸುವ ಕಾರ್ಯ ಮಾಡಬೇಕು ಎಂದು ಮೂಡುಬಿದಿರೆ ಉಪ ವಲಯಾರಣ್ಯಾಧಿಕಾರಿ ಮಂಜುನಾಥ ಗಾಣಿಗ ಹೇಳಿದರು.
ಮಹಾವೀರ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ, ರೋವರ್ಸ ರೇಂಜರ್ಸ್ ಹಾಗೂ ಮೂಡುಬಿದಿರೆ ಅರಣ್ಯ ಇಲಾಖೆ ಇವುಗಳ ಜಂಟಿ ಸಹಯೋಗದೊಂದಿಗೆ ರಸ್ತೆ ಬದಿ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಈ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು ತಮ್ಮ ತಮ್ಮ ಮನೆಯಲ್ಲಿ ಗಿಡ ನೆಡುವ ಮೂಲಕ ಪ್ರಕೃತಿಯನ್ನು ಉಳಿಸುವ ಕೆಲಸ ಮಾಡಬೇಕು, ರಾಷ್ಟ್ರೀಯ ಅರಣ್ಯ ನೀತಿಯ ಪ್ರಕಾರ ಸುಸ್ಥಿರ ಪರಿಸರದ ನಿರ್ಮಾಣಕ್ಕೆ 33% ಅರಣ್ಯ ಬೇಕು ಆದರೆ ಇಂದು ಅರಣ್ಯ ಸಂಪತ್ತು ನಾಶವಾಗುತ್ತಿರುವುದು ಬೇಸರದ ಸಂಗತಿ. ದುಡ್ಡನ್ನು ಮಾಡುವ ಉದ್ದೇಶದಿಂದ ಪ್ರಕೃತಿಯ ಮೇಲೆ ನಿರಂತರ ದೌರ್ಜನ್ಯ ಮಾಡುತ್ತಿದ್ದೇವೆ. ವಿದ್ಯಾರ್ಥಿಗಳಾದ ನೀವು ಗಿಡಗಳನ್ನು ಬೆಳಸಿ, ಪ್ಲಾಸ್ಟಿಕ್ನ್ನು ತ್ಯಜಿಸುವ ಹಾಗೂ ಅವುಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.

ಕಾಲೇಜಿನ ಪ್ರಾಂಶುಪಾಲ ರಮೇಶ್ ಭಟ್ ಮಾತನಾಡಿ, ಮೂಡುಬಿದಿರೆ ಅರಣ್ಯ ಇಲಾಖೆಯು ಮಂಜುನಾಥ್ ಗಾಣಿಗ ಇವರ ನೇತೃತ್ವದಲ್ಲಿ ಸುಮಾರು 2,000ಕ್ಕೂ ಅಧಿಕ ಗಿಡಗಳನ್ನು ಎಲ್ಲಾ ಶಾಲಾ ಕಾಲೇಜಿನ ಆಸುಪಾಸಿನಲ್ಲಿ ನೆಡುವ ಮೂಲಕ ತಮ್ಮ ಸೇವೆ ಮಾಡಿದ್ದಾರೆ, ಈ ರೀತಿಯಾಗಿ ಪರಿಸರ ಉಳಿಸಿ ಬೆಳೆಸುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಈ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ರಮೇಶ್ ಭಟ್, ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಪ್ರಮೀಳಾ ಚೋಕ್ಕಾಡಿ, ರೋವರ್ಸ್ ರೇಜಂರ್ಸ್ ವಿಭಾಗದ ಅಧಿಕಾರಿ ರಿಯೋನಾ ಪ್ರೀಮಾ ಉಪಸ್ಥಿತರಿದ್ದರು.

ರಾಷ್ಟ್ರೀಯ ಸೇವಾ ಯೋಜನಾ ವಿದ್ಯಾರ್ಥಿಗಳಾದ ಪ್ರಜ್ವಲ್ ಶೆಣೈ ಕಾರ್ಯಕ್ರಮ ನಿರೂಪಣೆ ಹಾಗೂ ಸುಕೇಶ್ ಸ್ವಾಗತಿಸಿದರು.


