ಬಂಟ್ವಳ:ತಾಲ್ಲೂಕಿನ ಪಾಣೆಮಂಗಳೂರು ಸಮೀಪದ ನೆಹರೂನಗರ ರಾಷ್ಟ್ರೀಯ ಹೆದ್ದಾರಿ ಬಳಿ ನೂತನವಾಗಿ ನಿರ್ಮಾಣಗೊಂಡ ಸಭಾಂಗಣಕ್ಕೆ ಬಂದಿದ್ದ ಹಲವಾರು ವಾಹನಗಳು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸಲು ಅಡ್ಡಿಪಡಿಸಿದ ಆರೋಪದಲ್ಲಿ ಸಭಾಂಗಣ ಮಾಲೀಕ ಮತ್ತು ಸಿಬ್ಬಂದಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡ ಘಟನೆ ಭಾನುವಾರ ನಡೆದಿದೆ.
ಇಲ್ಲಿನ ನೆಹರೂನಗರ ‘ಸಾಗರ್’ ಸಭಾಂಗಣದ ಬಳಿ ಸಾಕಷ್ಟು ಸ್ಥಳಾವಕಾಶ ಇದ್ದರೂ ಹೆದ್ದಾರಿ ಎರಡೂ ಬದಿ ಭಾನುವಾರ ಬೆಳಿಗ್ಗೆಯಿಂದ ಮಧ್ಯಾಹ್ನತನಕ ವಾಹನಗಳನ್ನು ನಿಲ್ಲಿಸಿ ಇತರ ವಾಹನ ಸಂಚಾರಕ್ಕೆ ಅಡ್ಡಿಪಡಿಸಿರುವ ಬಗ್ಗೆ ಸ್ಥಳೀಯರಿಂದ ನಗರ ಠಾಣೆ ಪೊಲೀಸರಿಗೆ ದೂರು ಬಂದಿತ್ತು. ಇದರಿಂದಾಗಿ ನಗರ ಠಾಣಾಧಿಕಾರಿ ಚಂದ್ರಶೇಖರ್ ನೇತತ್ವದಲ್ಲಿ ಸಂಚಾರಿ ಠಾಣೆ ಪೊಲೀಸರು ವಾಹನ ತೆರವುಗಳಿಸಿದ ಬಳಿಕ ಸಭಾಂಗಣ ಮಾಲೀಕ ಮಹಮ್ಮದ್ ಸಾಗರ್ ಮತ್ತು ಮೆನೇಜರ್ ಸುಲೇಮಾನ್ ವಿರುದ್ಧ ಸಾರ್ವಜನಿಕರಿಗೆ ಅಪಾಯ ಮತ್ತು ಅಡ್ಡಿ ಉಂಟು ಮಾಡಿದ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವುದಾಗಿ ಪೊಲೀಸು ತಿಳಿಸಿದ್ದಾರೆ.
