ಬಂಟ್ವಾಳ:ಧರ್ಮ ಮತ್ತು ಸಂಸ್ಕೃತಿ ಎಂಬುದು ಒಂದೇ ನಾಣ್ಯದ ಎರಡು ಮುಖಗಳು. ಅದು ಒಟ್ಟಾಗಿ ಹೋದಾಗ ಮಾತ್ರ ಸಂಸ್ಕಾರಯುತ ಸಮಾಜ ನಿರ್ಮಾಣ ಸಾಧ್ಯ. ದೇಶ ಉಳಿವಿಗೆ ದೇಶೀಯ ಸಂಸ್ಕೃತಿ ಕೂಡಾ ಉಳಿಯಬೇಕು ಎಂದು ಒಡಿಯೂರು ಶ್ರೀ ಗುರುದೇವಾನಂದ ಸ್ವಾಮಿಜಿ ಹೇಳಿದರು.ತಾಲ್ಲೂಕಿನ ಶಂಭೂರು ಗ್ರಾಮದ ಬೈಪಾಡಿಯಲ್ಲಿ ಶಿರ್ಡಿ ಸಾಯಿ ಮಂದಿರಕ್ಕೆ ಬುಧವಾರ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು. ಶ್ರೀ ಸಾಯಿ ಟ್ರಸ್ಟ್ ಅಧ್ಯಕ್ಷ ಸೂರಜ್ ಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಶಿರ್ಡಿ ಸಾಯಿ ಮಂದಿರದ ಪ್ರಧಾನ ಅರ್ಚಕ ಚಂದ್ರಶೇಖರ ಗುರೂಜಿ ಆಶೀರ್ವಚನ ನೀಡಿದರು. ಆರ್ಎಸ್ಎಸ್ ಮುಖಂಡ ಡಾ.ಕೆ.ಪ್ರಭಾಕರ ಭಟ್ ಮಾತನಾಡಿ,
ಜಗತ್ತಿಗೆ ಒಂದೇ ಧರ್ಮ ಅದು ಹಿಂದೂ ಧರ್ಮ. ನ್ಯಾಯಾಲಯವೇ ಹಿಂದು ಧರ್ಮವನ್ನು ಒಂದು ಜೀವನ ಪದ್ದತಿ ಎಂದು ತಿಳಿಸಿದೆ ಎಂದರು.
ನರಿಕೊಂಬು ಶ್ರೀ ಲಕ್ಷ್ಮೀನರಸಿಂಹ ದೇವಸ್ಥಾನದ ಆಡಳಿತ ಮೊಕ್ತೇಸರ ಜನಾರ್ದನ ಭಟ್, ಮಾಜಿ ಸಚಿವ ಬಿ.ರಮಾನಾಥ ರೈ, ಶಾಸಕ ಉಳಿಪಾಡಿಗುತ್ತು ರಾಜೇಶ ನಾಯ್ಕ್, ಜಿಲ್ಲಾ ಬಿಜೆಪಿ ವಕ್ತಾರ ಕೆ. ಹರಿಕೃಷ್ಣ ಬಂಟ್ವಾಳ್ ಶುಭ ಹಾರೈಸಿದರು.
ನರಿಕೊಂಬು ಗ್ರಾಮ ಪಂಚಾಯಿತಿ ಅಧ್ಯಕ್ಷ ಯಶೋಧರ ಕರ್ಬೆಟ್ಟು, ತಾಲ್ಲೂಕು ಪಂಚಾಯಿತಿ ಸದಸ್ಯೆ ಗಾಯತ್ರಿ ರವೀಂದ್ರ ಸಪಲ್ಯ, ಪ್ರಮುಖರಾದ ಸಂತೋಷ್ ಕುಮಾರ್ ಬೋಳಿಯಾರ್, ಲೀಲಾಕ್ಷ ಬಿ. ಕರ್ಕೇರ, ಸತ್ಯಜಿತ್ ಸುರತ್ಕಲ್, ಕೇಶವ ಶಾಂತಿ, ವಕೀಲ ಪ್ರಶಾಂತ್ ಪೂಜಾರಿ ಎ., ಪ್ರಗತಿಪರ ಕೃಷಿಕ ಎನ್. ಪ್ರಕಾಶ್ ಕಾರಂತ, ಚಂದ್ರಶೇಖರ ಗುರೂಜಿ, ಕೆ. ಅಶ್ವಿನ್ ರಾವ್, ಆನಂದ ಎ. ಶಂಭೂರು ಮತ್ತಿತರರು ಇದ್ದರು.
ಟ್ರಸ್ಟಿನ ಸದಸ್ಯ ಸತ್ಯ ಪ್ರಾಸ್ತಾವಿಕ ಮಾತನಾಡಿದರು. ಜಗದೀಶ್ ಕುಂದರ್ ಶಂಭೂರು ಸ್ವಾಗತಿಸಿ, ಶೋಭಾ ಶೆಟ್ಟಿ ವಂದಿಸಿದರು. ದಿನೇಶ್ ಸುವರ್ಣ ಕುದ್ಕೋಳಿ ಕಾರ್ಯಕ್ರಮ ನಿರೂಪಿಸಿದರು.
