ಸ್ವಾವಲಂಬನೆಯೊಂದಿಗೆ ಇತರರಿಗೆ ಸಹಾಯವಾದರೆ ವಿದ್ಯೆ ಸಾರ್ಥಕ: ಹರಿಕೃಷ್ಣ ಬಂಟ್ವಾಳ್
ಬಂಟ್ವಾಳ: ಸ್ವಶಕ್ತಿಯ ಮೇಲೆ ವಿಶ್ವಾಸವಿರಿಸಿ ಸ್ವಾವಲಂಬಿಗಳಾಗುವುದರ ಜತೆಗೆ ಇತರರಿಗೂ ಸಹಕಾರಿಯಾದರೆ ಮಾತ್ರ ಕಲಿತ ವಿದ್ಯೆ ಸಾರ್ಥಕ ಎಂದು ಬಿಜೆಪಿ ಜಿಲ್ಲಾ ವಕ್ತಾರ ಹರಿಕೃಷ್ಣ ಬಂಟ್ವಾಳ ಹೇಳಿದರು.
ಜವನೆರೆ ತುಡರ್ ಟ್ರಸ್ಟ್ ಸಿದ್ಧಕಟ್ಟೆ ವಲಯ ಇದರ ವತಿಯಿಂದ ರವಿವಾರ ಸಿದ್ಧಕಟ್ಟೆ ಬ್ರಹ್ಮಶ್ರೀ ನಾರಾಯಣ ಗುರು ಸಭಾಭವನದಲ್ಲಿ ಜರಗಿದ ಎಸೆಸೆಲ್ಸಿ ಹಾಗೂ ಕಾಲೇಜು ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಮಂಥನ ಶೈಕ್ಷಣಿಕ, ವೃತ್ತಿ ಮಾರ್ಗದರ್ಶನ ಹಾಗೂ ವ್ಯಕ್ತಿತ್ವ ವಿಕಸನ ತರಬೇತಿ ಶೈಕ್ಷಣಿಕ ಕಾರ್ಯಾಗಾರದ ಸಮಾರೋಪದಲ್ಲಿ ಮುಖ್ಯ ಭಾಷಣ ಮಾಡಿದರು.
ಜೀವನ ಸಾರ್ಥಕವಾಗಬೇಕಾದರೆ ಸಾಧನೆ ಮಾಡಬೇಕು.ಸೋಲನ್ನು ಸವಾಲಾಗಿ ಸ್ವೀಕರಿಸುವ ಮನೋಭಾವ ಬೇಕು. ದೊಡ್ಡ ಕನಸುಗಳಿರಬೇಕು. ಗುರಿ ಸ್ಪಷ್ಟವಾಗಿರಬೇಕು. ಆಗ ಯಾವುದೇ ಸಾಧನೆ ಮಾಡಬಹುದು ಎಂದು ಅವರು ಹೇಳಿದರು.

ಎಲ್ಲರೂ ಉದ್ಯೋಗಕ್ಕಾಗಿ ಹಾತೊರೆಯದೇ ಕೃಷಿ ಕ್ಷೇತ್ರದಲ್ಲೂ ತೊಡಗಿಸಕೊಳ್ಳಬೇಕು. ಕೃಷಿ ಸಂಪದ್ಬರಿತ ವೃತ್ತಿಯಾಗಿದ್ದು, ಉತ್ತಮ ಅವಕಾಶಗಳಿದೆ. ವಿದ್ಯಾರ್ಥಿಗಳು ಕೃಷಿಯಲ್ಲಿರುವ ಸಾಧ್ಯತೆಗಳ ಬಗ್ಗೆ ಅರಿತು ತೊಡಗಿಸಿಕೊಳ್ಳಬೇಕು ಎಂದರು.
ತಾ.ಪಂ. ಸದಸ್ಯ ಪ್ರಭಾಕರ ಪ್ರಭು, ತಾ.ಪಂ. ಮಾಜಿ ಸದಸ್ಯ ಕೆ.ರತ್ನಕುಮಾರ್ ಚೌಟ, ಯುವವಾಹಿನಿ ಬಂಟ್ವಾಳ ಘಟಕದ ಅಧ್ಯಕ್ಷ ಶಿವಾನಂದ ಪೂಜಾರಿ, ಕರೆಂಕಿ ಶ್ರೀ ದುರ್ಗಾ ಫ್ರೆಂಡ್ಸ್ ಅಧ್ಯಕ್ಷ ಪ್ರಕಾಶ್ ಅಂಚನ್, ಮೂಡಬಿದಿರೆ ಜೈನ್ ಹೈಸ್ಕೂಲ್ ಪ್ರಾಧ್ಯಾಪಕ ವಿನಯಚಂದ್ರ ಜೈನ್, ಪ್ರವೀಣ್ ಆಳ್ವ ಗುಂಡ್ಯ, ಉದ್ಯಮಿ ಹೇಮಚಂದ್ರ ಗೌಡ ಸಿದ್ಧಕಟ್ಟೆ, ಅರಳ ಗ್ರಾ.ಪಂ.ಸದಸ್ಯ ಡೊಂಬಯ ಅರಳ, ಜವನೆರೆ ತುಡರ್ ಟ್ರಸ್ಟ್ ಸಿದ್ಧಕಟ್ಟೆ ವಲಯ ಸಂಚಾಲಕರಾದ ಸುನಿಲ್, ಪ್ರಶಾಂತ್ ಸಿದ್ದಕಟ್ಟೆ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ವಿವಿಧ ಸ್ಪರ್ಧಾ ವಿಜೇತ ಶಿಬಿರಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಶಿಬಿರಾರ್ಥಿಗಳು ಅನಿಸಿಕೆ ವ್ಯಕ್ತ ಪಡಿಸಿದರು.
ದಿನೇಶ್ ಸುವರ್ಣ ಕುದ್ಕೋಳಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ರಂಗ ಕಲಾವಿದ ಸಂದೀಪ್ ಶೆಟ್ಟಿ ರಾಯಿ ವಂದಿಸಿದರು.
