ಬೆಳ್ತಂಗಡಿ: ಗುಡ್ಡ ಕುಸಿತದಿಂದಾಗಿ ಸಂಚಾರಕ್ಕೆ ತೊಡಕಾಗಿದ್ದ ರಾಜ್ಯದ ಪ್ರಮುಖ ರಾಷ್ಟ್ರೀಯ ಹೆದ್ದಾರಿ ಚಾರ್ಮಾಡಿಯಲ್ಲಿ ಶುಕ್ರವಾರದಿಂದ ಮತ್ತೆ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.
ಗುರುವಾರ ಸಂಜೆಯ ವೇಳೆ ಎರಡನೇ ತಿರುವಿನ ಬಳಿ ಹಲವಾರು ದ್ವಿಚಕ್ರ ವಾಹನ ಸವಾರರು ಗುಂಪಾಗಿ ಸೇರಿದ್ದು, ಅಲ್ಲಿ ನಿಂತಿದ್ದ ಪೊಲೀಸ್ ಸಿಬ್ಬಂದಿ ಮೇಲಕ್ಕೆ ಹೋಗಲು ಅನುಮತಿ ಯಾಚಿಸುತ್ತಿದ್ದರು. ಬಳಿಕ ಕೆಲ ಹೊತ್ತಿನ ಬಳಿಕ ದೂರವಾಣಿ ಕರೆಯನ್ವಯ ದ್ವಿಚಕ್ರ ವಾಹನಗಳಿಗೆ ಕೊಟ್ಟಿಗೆಹಾರಕ್ಕೆ ಹೋಗಲು ಮತ್ತು ಅಲ್ಲಿಂದ ಉಜಿರೆ ಕಡೆಗೆ ಬರಲು ಅನುಮತಿ ನೀಡಲಾಯಿತು.
ಶುಕ್ರವಾರ ಬೆಳಿಗ್ಗೆ 6 ಗಂಟೆಯಿಂದ ಬಹುತೇಕ ಲಾರಿಯಂತಹ ಘನವಾಹನಗಳನ್ನು ಹೊರತುಪಡಿಸಿ ಘಾಟಿ ರಸ್ತೆಯಲ್ಲಿ ಸಂಚರಿಸಲು ಪ್ರಾರಂಭಿಸಿದ್ದವು. ಸರಕಾರಿ, ಖಾಸಗಿ ಬಸ್ಸುಗಳು ಎಂದಿನಂತೆ ಸಂಚಾರ ಕೈಗೊಂಡವು.
ಕುಂಠಿತಗೊಂಡಿದ್ದ ವ್ಯಾಪಾರ-ವ್ಯವಹಾರ
ಕಳೆದ ನಾಲ್ಕೈದು ದಿನಗಳಿಂದ ಚಾರ್ಮಾಡಿ ರಸ್ತೆಯ ಸಂಚಾರ ನಿರ್ಬಂಧದಿಂದಾಗಿ ಹೋಟೆಲು ವ್ಯಾಪಾರ, ದಿನಸಿ ವ್ಯಾಪಾರ ಮಾಡುವರರಿಗೆ ತೊಂದರೆಯಾಗಿತ್ತು. ಅದಲ್ಲದೆ ರಮ್ಜಾನ್ ಸಮಯವಾದ್ದರಿಂದ ಅದನ್ನು ಆಚರಿಸುವವರಿಗೂ ಸಮಸ್ಯೆಯಾಗಿತ್ತು. ಘಟ್ಟ ಪ್ರದೇಶದಿಂದ ದಿನಂಪ್ರತಿ ಬರುತ್ತಿದ್ದ ತರಕಾರಿಗಳು ಬೆಳ್ತಂಗಡಿ ತಾಲೂಕಿಗೆ ಬಂದಿರಲಿಲ್ಲ. ಬಸ್ ಗಳ, ಖಾಸಗಿ ವಾಹನಗಳ ಸಂಚಾರ ಇಲ್ಲದ್ದರಿಂದ ಕಕ್ಕಿಂಜೆ, ಚಾರ್ಮಾಡಿ, ಕೊಟ್ಟಿಗೆ ಹಾರ ಪೇಟೆಗಳಲ್ಲಿನ ಹೋಟೆಲುಗಳಿಗೆ ವ್ಯಾಪಾರ ಇರಲಿಲ್ಲ

