ಬಂಟ್ವಾಳ: ಹಣಕಾಸು ವಹಿವಾಟು ನಡೆಸುವ ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುವ ಸಿಬ್ಬಂದಿಗಳು ತಮ್ಮ ಗ್ರಾಹಕರಿಗೆ ನೀಡುವ ಪ್ರಾಮಾಣಿಕ ಸೇವೆಯಿಂದ ಆತ್ಮತೃಪ್ತಿ ಲಭಿಸಲಿದ್ದು, ಇದರಿಂದಾಗಿ ಗ್ರಾಹಕರು ಮತ್ತು ಬ್ಯಾಂಕ್ ನಡುವಿನ ಸಂಬಂಧ ಮತ್ತಷ್ಟು ವೃದ್ಧಿಸಲು ಸಹಕಾರಿಯಾಗುತ್ತದೆ ಎಂದು ಸಿದ್ದಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು ಅಭಿಪ್ರಾಯ ಪಟ್ಟಿದ್ದಾರೆ.

ಇತ್ತೀಚಿಗೆ ವರ್ಗಾವಣೆಗೊಂಡ ಕರ್ನಾಟಕ ಗ್ರಾಮೀಣ ಬ್ಯಾಂಕ್ ಸಿದ್ದಕಟ್ಟೆ ಶಾಖೆಯ ಶಾಖಾಧಿಕಾರಿ ರಘುಪ್ರಸಾದ್ ಹಾಗೂ ಬ್ಯಾಂಕ್ ಸಿಬ್ಬಂದಿ ಸ್ಮಿತಾರವರನ್ನು ಬೀಳ್ಕೊಡುವ ಸಮಾರಂಭದಲ್ಲಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ವರ್ಗಾವಣೆಗೊಂಡ ಬ್ಯಾಂಕ್ ಮೆನೇಜರ್ ರಘುಪ್ರಸಾದ್ ಮಾತನಾಡಿ ಸಿದ್ದಕಟ್ಟೆ ಪರಿಸರದ ಗ್ರಾಹಕರು ಅತ್ಯಂತ ಪ್ರಾಮಾಣಿಕ ಮತ್ತು ವಿಶ್ವಾಸದಾಯಕರಾಗಿದ್ದು, ಸಿದ್ದಕಟ್ಟೆಯ ವಾತಾವರಣವು ಹಣಕಾಸು ಸಂಸ್ಥೆಗಳ ಅಭಿವೃದ್ಧಿಗೆ ಪೂರಕವಾಗಿವೆ ಎಂದರು.
ಸಿದ್ದಕಟ್ಟೆಯ ಸ್ವಾಗತ ಕಾಂಪ್ಲೆಕ್ಸ್ ಮಾಲಕರರಾದ ಹರೀಶ್ ಶೆಟ್ಟಿ, ಬ್ಯಾಂಕ್ ಸಿಬ್ಬಂದಿ ಮಂಜುನಾಥ್, ಪದ್ಮಾವತಿ,ಉದ್ಯಮಿಗಳಾದ ರಾಜೇಶ್ ಶೆಟ್ಟಿ ಕೊನೆರಬೆಟ್ಟು,ಯೋಗೀಶ್ ಶೆಟ್ಟಿಗಾರ್, ಪ್ರಮುಖರಾದ ಸಂತೋಷ, ಕೇಶವ ಶಭರೀಶ ,ಪ್ರಕಾಶ್ ಶೆಟ್ಟಿ, ಗಣೇಶ್ ಹೊಳ್ಳ,ಸಂದ್ಯಾ ವಾರಿಜ, ಮೀನಾಕ್ಷಿ ಮತ್ತಿತರರ ಗ್ರಾಹಕರು ಉಪಸ್ಥಿತರಿದ್ದರು.
