ಮಂಗಳೂರು: ಕ್ರೈಸ್ತರು ಧಾರ್ಮಿಕವಾಗಿ ತಮ್ಮ ವಿಶ್ವಾಸವನ್ನು ಬಲಪಡಿಸುವ ಜತೆಗೆ ಸಾಮುದಾಯಿಕವಾಗಿ ಎಲ್ಲ ಧರ್ಮೀಯರ ಜತೆಗೆ ಸಹಕಾರ, ಪ್ರೀತಿ, ವಿಶ್ವಾಸದಿಂದ ಬಾಳುವೆ ನಡೆಸಬೇಕು ಎಂದು ಮಂಗಳೂರು ಬಿಷಪ್ ರೈ| ರೆ| ಡಾ. ಅಲೋಶಿಯಸ್ ಪಾವ್ ಡಿ’ಸೋಜಾ ಸಲಹೆ ನೀಡಿದ್ದಾರೆ.
ತಾಲೂಕಿನ ನೀರುಮಾರ್ಗ ಶ್ರಮಿಕ ಸಂತ ಜೋಸೆಫ್ ಚರ್ಚ್ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ತಾವು ಕ್ರೈಸ್ತರು ಎಂದು ಹೇಳಿಕೊಳ್ಳಲು ಯಾವುದೇ ಮುಜುಗರ – ಭಯ ಬೇಡ ಎಂದರು.
ಮುಖ್ಯ ಅತಿಥಿಯಾಗಿದ್ದ ಕೋಲ್ಕತಾದ ಆರ್ಚ್ ಬಿಷಪ್ ನೀರುಮಾರ್ಗ ಮೂಲದ ರೆ| ಡಾ| ಥಾಮಸ್ ಡಿ’ಸೋಜಾ ಅವರು ಸುವರ್ಣ ಮಹೋತ್ಸವದ ಶುಭಾಶಯ ಸಲ್ಲಿಸಿದರು.
ಮಂಗಳೂರು ಧರ್ಮಪ್ರಾಂತದ ಕಾರ್ಯದರ್ಶಿ ಎಂ.ಪಿ. ನೊರೋನ್ಹಾ ಮಾತನಾಡಿ, ಚರ್ಚ್ಗಳು ಕೇವಲ ಧರ್ಮ ಬೋಧನೆ ಮಾತ್ರ ಮಾಡುತ್ತಿಲ್ಲ; ಶಿಕ್ಷಣ, ಆರೋಗ್ಯ ಮತ್ತು ಇತರ ಸೇವೆಗಳ ಮೂಲಕ ರಾಷ್ಟ್ರ ನಿರ್ಮಾಣದ ಕೆಲಸ ಮಾಡುತ್ತಿವೆ ಎಂದು ಅವರು ಹೇಳಿದರು.
ಮಂಗಳೂರು ಧರ್ಮ ಪ್ರಾಂತದ ನಗರ ವಲಯದ ಮುಖ್ಯಸ್ಥ ಫಾ| ವಿಕ್ಟರ್ ಮಚಾದೊ (ಕುಲಶೇಖರ ಚರ್ಚ್) ಮತ್ತು ಹೋಲಿ ಕ್ರಾಸ್ ಧರ್ಮ ಭಗಿನಿಯರ ಸಂಸ್ಥೆಯ ಪ್ರಾಂತೀಯ ಮುಖ್ಯಸ್ಥರಾದ ಸಿ| ಫ್ಲೋರಿ ಡಿ’ಸೋಜಾ ಸುವರ್ಣ ಮಹೋತ್ಸವದ ಶುಭಾಶಯ ಸಲ್ಲಿಸಿದರು.
ಸುವರ್ಣ ಮಹೋತ್ಸವ ಸಮಿತಿಯ ಸಂಚಾಲಕ ಅರುಣ್ ಡಿ’ಸೋಜಾ ಸ್ವಾಗತಿಸಿದರು. ಚರ್ಚ್ನ ಧರ್ಮಗುರು ಫಾ| ಅನಿಲ್ ಡಿ’ಮೆಲ್ಲೊ ವಂದಿಸಿದರು. ಉಪಾಧ್ಯಕ್ಷ ಪ್ರಕಾಶ್ ಪಿರೇರಾ, ಕಾರ್ಯದರ್ಶಿ ಜೆರಾಲ್ಡ್ ಲೋಬೊ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರಸಾದ್ ವಾಸ್ ಕಾರ್ಯಕ್ರಮ ನಿರ್ವಹಿಸಿದರು.

