ಪೊಳಲಿ : ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಗುರುವಾರ ಮುಸ್ಸಂಜೆ ಶ್ರೀ ಅಮ್ಮನವರ ಮಹಾರಥೋತ್ಸವ ಸಾವಿರಾರು ಭಕ್ತರ ಜಯಘೋಷ, ಸುಡುಮದ್ದಿನ ಆರ್ಭಟದೊಂದಿಗೆ ಸಡಗರದಿಂದ ಜರುಗಿತು. 
ಜೀರ್ಣೋದ್ಧಾರ ಹಂತದಲ್ಲಿರುವ ಶ್ರೀಕ್ಷೇತ್ರದಲ್ಲಿ ಐದು ದಿನಗಳ ಚೆಂಡಿನ ಸಹಿತ ಉಳಿದ ದಿಗಳಲ್ಲಿ ಜಾತ್ರೆ ಸಾಂಕೇತಿಕವಾಗಿ ದೇವಸ್ಥಾನದ ಹೊರಾಂಗಣದಲ್ಲಿ ನಡೆದಿದೆ. ರಥ ಎಳೆಯುವ ಹೊತ್ತಿಗೆ ದೇವಸ್ಥಾನದ ಹೊರಾಂಗಣದಲ್ಲಿ ಸಾವಿರಾರು ಭಕ್ತರು ನೆರೆದಿದ್ದರು. ಸಂಪ್ರದಾಯದಂತೆ ಮಧ್ಯಾಹ್ನ ರಥದಲ್ಲಿ ಶ್ರೀ ರಾಜರಾಜೇಶ್ವರಿ ದೇವರು ರಥದಲ್ಲಿ ಆದ ಬಳಿಕ ದೇವಸ್ಥಾನದ ಹೊರ ಭಾಗದಲ್ಲಿ ಸಾಂಕೇತಿಕವಾಗಿ ರಥ ಎಳೆಯಲಾಗಿತ್ತು.
ಬಳಿಕ ಸಂಜೆ ಹೊತ್ತಿಗೆ ರಥದಲ್ಲಿ ಶ್ರೀ ರಾಜರಾಜೇಶ್ವರಿ ದೇವರ ಕುಳ್ಳಿರಿಸಿ, ಪೂಜೆ ನಡೆದ ಬಳಿಕ, ತೆಂಗಿನಕಾಯಿ ಹೊಡೆದು ರಥಬೀದಿಯಿಂದ ಚೆಂಡಿನ ಗದ್ದೆಯವರೆಗೆ ರಥ ಎಳೆದು ಯಥಾಸ್ಥಳಕ್ಕೆ ತಂದು ನಿಲ್ಲಿಸಲಾಯಿತು. ಹಿಂದೆ ರಥವು ದೇವಸ್ಥಾನದ ಸುತ್ತ ಎಳೆಯಲಾಗಿ ಚೆಂಡಿನ ಗದ್ದೆಯತ್ತ ಸಾಗುತ್ತಿತ್ತು.

ಗದ್ದೆಯಲ್ಲಿ ಮಹಾರಥ ನಿಂತ ಬಳಿಕ ಒಂದೇ ಸಮನೆ ಸುಡುಮದ್ದು ಸುಡಲಾಯಿತು. ಆಕಾಶದೆತ್ತರಕ್ಕೆ ಏರಿ, ಸ್ಫೋಟಗೊಂಡ ಬಿರುಸು-ಬಾಣಗಳು ಬೆಳಕಿನಿಂದ ಕೂಡಿದ ಬಣ್ಣದ ಮಳೆಗರೆಯಿತು ; ಆಕಾಶದಲ್ಲಿ ಚಿತ್ತಾರ ಬರೆಯಿತು. ಚೆಂಡಿನ ಗದ್ದೆಯ ಒಂದು ಕಡೆಯಲ್ಲಿ ಅವ್ಯಾಹತ ಸುಡ್ಡುಮದ್ದು ಸ್ಫೋಟಗೊಳ್ಳುತ್ತಿದ್ದಾಗ ಭಕ್ತಜನರು ಆಕಾಶದೆತ್ತರಕ್ಕೆ ದೃಷ್ಟಿ ನೆಟ್ಟಿದ್ದರು. ಆದಾಗ್ಯೂ ಈ ವರ್ಷ ಜಾತ್ರೆಯ ಎಲ್ಲ ಆಚರಣೆಗಳು ಸಾಂಕೇತಿಕವಾಗಿ ನಡೆದುದರಿಂದ ರಥೋತ್ಸವಕ್ಕೂ ಭಕ್ತರ ಸಂಖ್ಯೆ ಕ್ಷೀಣಿಸಿತ್ತು ಮತ್ತು ಹಿಂದಿನಂತೆ ಅದ್ದೂರಿ ಕಂಡು ಬಂದಿಲ್ಲ. ಆದರೆ ಈ ಸಂದರ್ಭದಲ್ಲಿ ದೇವಳದ ತಂತ್ರಿಗಳು, ಅರ್ಚಕರು, ಅಮ್ಮುಂಜೆಗುತ್ತಿನವರು ,ಉಳಿಪಾಡಿಗಿತ್ತಿನವರು,ಮೊಗರುಗುತ್ತಿನವರು ,ಆಡಳಿತಮೋಕ್ತೇಸರ, ಮೊಕ್ತೇಸರರು, ಕಾರ್ಯನಿರ್ವಹಣಾಧಿಕಾರಿ,ಸಾವಿರ ಸೀಮೆಯ ಭಕ್ತಾಧಿಗಳು ಪಾಲ್ಗೊಂಡಿದ್ಡದರು.
