ವಿಟ್ಲ: ಉತ್ತಮ ಪ್ರಜೆಗಳು ಹಾಗೂ ಉತ್ತಮ ಸಮಾಜವನ್ನು ರೂಪಿಸುವುದೇ ಶಿಕ್ಷಣ. ಶಿಕ್ಷಣವು ಕೇವಲ ಉದ್ಯೋಗಾಧಾರಿತವಾಗಿರದೆ, ಉತ್ತಮ ಜ್ಞಾನ ಹಾಗೂ ಜೀವನದ ಮೌಲ್ಯಗಳನ್ನು ಕಲಿಸುವಂತಾಗಬೇಕು ಎಂದು ಇತಿಹಾಸ ತಜ್ಞರಾದ ಡಾ.ಪುಂಡಿಕಾಯಿ ಗಣಪಯ್ಯ ಭಟ್ ಅವರು ಹೇಳಿದರು.ಇವರು ವಿಠಲ ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘವನ್ನು ಉದ್ಘಾಟಿಸಿ ಮಾತನಾಡಿದರು.ವಿದ್ಯಾರ್ಥಿಗಳಲ್ಲಿ ಹುದುಗಿರುವ ಅದ್ಭುತ ಪ್ರತಿಭೆಗಳನ್ನು ಹುಡುಕಿ ಜೀವನದಲ್ಲಿ ಉನ್ನತಿಗೆ ಕೊಂಡೊಯ್ಯುವ ಶಕ್ತಿ ಶಿಕ್ಷಣಕ್ಕಿದೆ. ಆತ್ಮವಿಶ್ವಾಸದ ಕೊರತೆ, ಕೀಳರಿಮೆ, ದೌರ್ಬಲ್ಯ ಹಾಗೂ ಎಲ್ಲಾ ತೊಡಕುಗಳನ್ನು ಸವಾಲಾಗಿ ಸ್ವೀಕರಿಸಿ ಮುನ್ನಡೆದು ಸಾಧಕರಾಗಬೇಕು ಎಂದರು.
ವಿಠಲ ವಿದ್ಯಾ ಸಂಘದ ಅಧ್ಯಕ್ಷರಾದ ಶ್ರೀ ಮುಗುಳಿ ತಿರುಮಲೇಶ್ವರ ಭಟ್ ಸಭಾದ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ಪ್ರಾಂಶುಪಾಲರಾದ ಶ್ರೀ ಆದರ್ಶ ಎ. ಯಸ್.ರವರು ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಿಗೆ ಪ್ರಮಾಣವಚನ ಭೋದಿಸಿದರು. ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ರೋಹಿತ್, ಉಪಾಧ್ಯಕ್ಷರಾಗಿ ಚೈತ್ರೇಶ್,ಕಾರ್ಯದರ್ಶಿಯಾಗಿ ಚೈತ್ರ ಎ.ಬಿ. ,ಜತೆಕಾರ್ಯದರ್ಶಿಯಾಗಿ ಆಝಿಮತ್ ನೂರಿಯಾ ಆಯ್ಕೆಯಾದರು. 2017 ನೇ ಸಾಲಿನ ದ್ವಿತೀಯ ಪಿಯುಸಿ ಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಗೊಂಡ 35 ವಿದ್ಯಾರ್ಥಿಗಳು ಹಾಗೂ ವಿಷಯವಾರು 100 ಅಂಕಗಳನ್ನು ಗಳಿಸಿದ ಪ್ರತಿಭಾನ್ವಿತರನ್ನು ಸನ್ಮಾನಿಸಲಾಯಿತು.
ಕೋಶಾಧಿಕಾರಿಗಳಾದ ನಿತ್ಯಾನಂದ ನಾಯಕ್, ಕಾರ್ಯದರ್ಶಿ ಯಶವಂತ ವಿಟ್ಲ, ಐಟಿಐ ಪ್ರಾಂಶುಪಾಲರಾದ ರಘುರಾಮ ಶಾಸ್ತ್ರಿ, ನಿವೃತ್ತ ಪ್ರಾಂಶುಪಾಲರಾದ ಅನಂತಕೃಷ್ಣ ಹೆಬ್ಬಾರ್ ಉಪಸ್ಥಿತರಿದ್ದರು. ಪ್ರಾಂಶುಪಾಲರಾದ ಆದರ್ಶ ಎ.ಯಸ್ ಸ್ವಾಗತಿಸಿ, ಉಪನ್ಯಾಸಕಿ ರಶ್ಮಿಲ ಕೆ. ವಂದಿಸಿದರು. ಕಾಲೇಜಿನ ಸಮಾಜಶಾಸ್ತ್ರ ಉಪನ್ಯಾಸಕರಾದ ಶ್ರೀ ಪಿ ಶಂಕರನಾರಾಯಣ ಭಟ್ ಕಾರ್ಯಕ್ರಮ ನಿರೂಪಿಸಿದರು.
