ಮಂಗಳೂರು: ಬೈಂದೂರು ಪೊಲೀಸ್ ಠಾಣಾ ವ್ಯಾಪ್ತಿಯ ಯಡ್ತರೆ ಗ್ರಾಮದ ಆಲಂದೂರು-ಕೋಣಮಕ್ಕಿ ಎಂಬಲ್ಲಿಂದ ಕಳೆದ ಜುಲೈ ಆರರಂದು ಸಂಜೆ ನಾಪತ್ತೆಯಾಗಿದ್ದ ಬಾಲಕಿ ರತ್ನಾ ಕೊಠಾರಿ(17) ಎಂಬಾಕೆಯ ಶವ ಶಿರೂರು-ಸಾವಂತಗುಡ್ಡೆ ಎಂಬಲ್ಲಿ ಶನಿವಾರ ಮುಂಜಾನೆ ಪತ್ತೆಯಾಗಿದೆ. ಶವ ಸಂಪೂರ್ಣ ಕೊಳೆತಿದ್ದು, ಆಕೆಯ ಪಕ್ಕ ಕಾಲೇಜ್ನ ಬ್ಯಾಗ್ ಪತ್ತೆಯಾಗಿದೆ. ಶವದ ಮೇಲೆ ಗಾಯದ ಗುರುತುಗಳಿದ್ದು, ಅತ್ಯಾಚಾರಗೈದು ಕೊಲೆಗೈದಿರುವುದು ಪ್ರಾಥಮಿಕ ತನಿಖೆಯಲ್ಲಿ ದೃಢಪಟ್ಟಿದೆ.
ಶಿರೂರು ಸರಕಾರಿ ಪದವಿಪೂರ್ವ ಕಾಲೇಜ್ನ ಕಲಾ ವಿಭಾಗದ ವಿದ್ಯಾರ್ಥಿನಿಯಾಗಿದ್ದ ರತ್ನಾ ಜುಲೈ ಆರರಂದು ಕಾಲೇಜ್ ಮುಗಿಸಿ ಮನೆಗೆ ಬರುವ ದಾರಿಯಲ್ಲಿ ನಿಗೂಢ ರೀತಿಯಲ್ಲಿ ನಾಪತ್ತೆಯಾಗಿದ್ದಳು. ಆಲಂದೂರು-ತೂದಳ್ಳಿ ರಸ್ತೆಯಲ್ಲಿ ಆಕೆ ಮನೆಕಡೆ ಹೋಗುವುದನ್ನು ಸಾರ್ವಜನಿಕರು ಕಂಡಿದ್ದರು. ಆದರೆ ಆನಂತರ ಆಕೆ ನಿಗೂಢ ರೀತಿಯಲ್ಲಿ ನಾಪತ್ತೆಯಾಗಿರುವುದು ಆಕೆಯನ್ನು ಕೊಲೆಗೈದಿರುವ ಶಂಕೆ ವ್ಯಕ್ತವಾಗಿತ್ತು.
ವಿದ್ಯಾರ್ಥಿನಿ ನಾಪತ್ತೆಯಾದ ಬಳಿಕ ಆಕೆಗಾಗಿ ಕಾಡಿನಲ್ಲಿ ಹುಡುಕಾಟ ನಡೆದಿತ್ತು. ಆದರೆ ಆಕೆ ಎಲ್ಲೂ ಪತ್ತೆಯಾಗಿರಲಿಲ್ಲ. ಇದೀಗ ಆಕೆಯ ಮೃತದೇಹ ಪತ್ತೆಯಾಗಿರುವುದು ಸಂಶಯಗಳಿಗೆ ಕಾರಣವಾಗಿದೆ. ವಿದ್ಯಾರ್ಥಿನಿಯನ್ನು ಅಪಹರಿಸಿ ಬೇರೆಡೆಗೆ ಕರೆದೊಯ್ದು ಅತ್ಯಾಚಾರಗೈದು ಕೊಲೆಗೈದ ಬಳಿಕ ಆಕೆಯ ಮೃತದೇಹವನ್ನು ಎಸೆದಿರಬೇಕೆಂದು ಶಂಕಿಸಲಾಗಿದೆ. ಸ್ಥಳಕ್ಕೆ ಶ್ವಾನದಳ, ಪೊಲೀಸ್ ಹಿರಿಯ ಅಧಿಕಾರಿಗಳು ಹಾಗೂ ಬೆರಳಚ್ಚು ದಳ ಭೇಟಿ ನೀಡಿದ್ದು ತನಿಖೆ ನಡೆಯುತ್ತಿದೆ.



