ಸುದ್ದಿ9ಮಂಗಳೂರು: ವ್ಯಕ್ತಿಯೋರ್ವನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದ ಘಟನೆ ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯ ಮೂಡುಶೆಡ್ಡೆ ಜಂಕ್ಷನ್ನಲ್ಲಿ ಶುಕ್ರವಾರ ಸಂಜೆ 5:35ರ ಸುಮಾರಿಗೆ ಸಂಭವಿಸಿದೆ. ಕೊಲೆಯಾದವನನ್ನು ಮೂಡುಶೆಡ್ಡೆ ನಿವಾಸಿ ಭರತ್ ಅಲಿಯಾಸ್ ಪ್ರಭು(30) ಎಂದು ಗುರುತಿಸಲಾಗಿದೆ.
ಭರತ್ ಅಲಿಯಾಸ್ ಪ್ರಭು ಶುಕ್ರವಾರ ಸಂಜೆ 5:30ಕ್ಕೆ ಮೂಡುಶೆಡ್ಡೆ ಜಂಕ್ಷನ್ನಲ್ಲಿ ನಡೆದುಕೊಂಡು ಹೋಗುತ್ತಿದ್ದ ಸಂದರ್ಭ ಆಕ್ಟಿವಾದಲ್ಲಿ ಆಗಮಿಸಿದ ಇಬ್ಬರು ಹಂತಕರು ತಲವಾರಿನಿಂದ ಕೊಚ್ಚಿ ಪರಾರಿಯಾಗಿದ್ದಾರೆ. ರಕ್ತದ ಮಡುವಲ್ಲಿ ಬಿದ್ದಿದ್ದ ಭರತ್ನನ್ನು ವೆನ್ಲಾಕ್ ಆಸ್ಪತ್ರೆಯಲ್ಲಿ ಸೇರಿಸಲಾಗಿದ್ದು ವೈದ್ಯರು ಆತ ಮೃತಪಟ್ಟಿದ್ದಾನೆ ಎಂದು ತಿಳಿಸಿದ್ದಾರೆ. ಶವವನ್ನು ಶವಾಗಾರದಲ್ಲಿರಿಸಲಾಗಿತ್ತು.
ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸ್ ಹಿರಿಯ ಅಧಿಕಾರಿಗಳು, ಬೆರಳಚ್ಚು ತಂಡ ಹಾಗೂ ಶ್ವಾನದಳ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದೆ.
ಕಡ್ಲೆ ಮಂಜು ಕೊಲೆಗೆ ರೆವೆಂಜ್?
ಕೊಲೆಗೀಡಾದ ಭರತ್ ಅಲಿಯಾಸ್ ಪ್ರಭು ಕೆಲವರ್ಷಗಳ ಹಿಂದೆ ನಗರದ ಕಾಸ್ಟ್ರರ್ೀಟ್ನಲ್ಲಿ ನಡೆದಿದ್ದ ಕಡ್ಲೆ ಮಂಜು ಅಲಿಯಾಸ್ ಮಂಜುನಾಥನ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ ಎಂದು ಪೊಲೀಸರು ತಿಳಸಿದ್ದಾರೆ. ಕಡ್ಲೆ ಮಂಜನ ಸಹಚರರು ಈತನ ವಿರುದ್ಧ ಕಣ್ಣಿಟ್ಟಿದ್ದು ಹೊಂಚು ಹಾಕಿ ಕೊಲೆ ನಡೆಸಿರುವ ಸಾಧ್ಯತೆ ಇದೆ ಎಂದು ಪೊಲೀಸ್ ಮೂಲ ತಿಳಿಸಿವೆ.
ಕಡ್ಲೆ ಮಂಜು ಅಲಿಯಾಸ್ ಮಂಜುನಾಥ್ ಹಿಂದೂ ಸಂಘಟನೆಗಳಲ್ಲೂ ಸಕ್ರಿಯವಾಗಿದ್ದ. ಈತನ ಜೊತೆಗಿದ್ದವರೇ ಕ್ಷುಲ್ಲಕ ಕಾರಣಕ್ಕೆ ಕೊಲೆಗೈದಿದ್ದರು. ಇದರ ಪ್ರತಿಕಾರವಾಗಿಯೇ ಪ್ರಭು ಕೊಲೆಗೀಡಾಗಿರುವ ಸಾಧ್ಯತೆ ಇದೆ ಎನ್ನಲಾಗಿದೆ.







