ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯಾನಿರ್ವಾಹಕ ಅಧಿಕಾರಿಯಾಗಿ ಹಿರಿಯ ಕೆಎಎಸ್ ಅಧಿಕಾರಿ ಡಾ.ಎಂ.ಆರ್.ರವಿ ಗುರುವಾರ ಅಧಿಕಾರ ಸ್ವೀಕರಿಸಿದ್ದಾರೆ. ಪಿ.ಐ.ಶ್ರೀವಿದ್ಯಾ ಅವರ ವರ್ಗಾವಣೆಯಿಂದ ತೆರವಾದ ಸ್ಥಾನಕ್ಕೆ ಅವರನ್ನು ನೇಮಕ ಮಾಡಲಾಗಿದೆ.
ಮೈಸೂರು ಮೂಲದ ಅವರು ಇಂಗ್ಲೀಷ್ ಮತ್ತು ಇತಿಹಾಸ ವಿಭಾಗದಲ್ಲಿ ಸ್ನಾತಕೋತ್ತರ ಪದವಿ, ಪತ್ರಿಕೋದ್ಯಮದಲ್ಲಿ ಡಿಪ್ಲೊಮ, ಇತಿಹಾಸ ವಿಷಯದಲ್ಲಿ ಪಿಚ್ಡಿ ಮಾಡಿದವರು.ಮೈಸೂರಿನಲ್ಲಿ ಪತ್ರಕರ್ತರಾಗಿ, ನಂತರ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸಿ, ಬಳಿಕ ಕಾಲೇಜು ಶಿಕ್ಷಣ ಇಲಾಖೆ ಸಹಾಯಕ ನಿರ್ದೇಶಕರು, ಹುಣಸೂರು,ಕಾರವಾರ ಮತ್ತು ಮಡಿಕೇರಿ ಸಹಾಯಕ ಆಯುಕ್ತ, ಉನ್ನತ ಶಿಕ್ಷಣ ಸಚಿವ ಆಪ್ತ ಕಾರ್ಯದರ್ಶಿ, ಮಡಿಕೇರಿ ಹಿರಿಯ ಸಹಾಯಕ ಆಯುಕ್ತ, ಮೈಸೂರು ಮಹಾನಗರ ಪಾಲಿಕೆ ಆಯುಕ್ತರಾಗಿದ್ದರು. ಶಿವಮೊಗ್ಗ ನಗರಸಭೆ ಆಯುಕ್ತ, ಬೆಳಗಾವಿ ಭೂಸ್ವಾಧೀನ ವಿಶೇಷ ಜಿಲ್ಲಾಧಿಕಾರಿ, ಮೈಸೂರು ಪ್ರಾದೇಶಿಕ ಆಯುಕ್ತರ ಕಚೇರಿ ಹೆಚ್ಚುವರಿ ಆಯುಕ್ತ, ರಾಜ್ಯ ಪ್ರವಾಸೋಧ್ಯಮ ಅಭಿವೃದ್ಧಿ ನಿಗಮದ ಪ್ರಧಾನ ವ್ಯವಸ್ಥಾಪಕರಾಗಿದ್ದರು.
ಡಾ.ರವಿ ಅವರು, ಈ ಜೀವನ ನಮ್ಮದು, ಆಧುನಿಕ ಶಿಕ್ಷಣ ಮತ್ತು ಸಾಮಾಜಿಕ ಬದಲಾವಣೆ, ಯಾರನ್ನು ನಿರ್ಲಕ್ಷಿಸಬೇಡಿ ಪ್ಲೀಸ್, ನಮ್ಮ ಉದ್ಗಾರ ನಮ್ಮಿಂದಲೇ, ಅಂಬ್ಕೇಡ್ಕರ್ ಇಲ್ಲದ ಭಾರತ, ಬದುಕೋಣು ಬಾರಾ ಪುಸ್ತಕಗಳನ್ನು ಮತ್ತು ಪ್ರೇಮಲಾಲಿ ಕವನ ಸಂಕಲನ ರಚಿಸಿದ್ದಾರೆ. ಸೇವಾ ಚೇತನ ಪ್ರಶಸ್ತಿ, ಪ್ರೋ.ಎಚ್ಚೆಸ್ಕೆ ಸಾಹಿತ್ಯ ಪ್ರಶಸ್ತಿ, ಬಸವ ರತ್ನ ಪ್ರಶಸ್ತಿ, ಹೊಯ್ಸಳ ಪ್ರಶಸ್ತಿಗಳನ್ನು ಪಡೆದಿದ್ದಾರೆ.

