ಬದಿಯಡ್ಕ: ಈ ಮಣ್ಣಿನ ಮೂಲ ಸಾಂಸ್ಕೃತಿಕ ಬೇರುಗಳಾದ ಕೊರಗ ಜನಾಂಗದ ಸಮಗ್ರ ಅಭಿವೃದ್ದಿಗೆ ಯೋಜನೆಗಳು ಉದ್ದೇಶಿತ ಗುರಿ ಸಾಧಿಸದಿರುವುದು ಖೇದಕರ. ತುಳು ಭಾಷೆಯ ಅಭಿವೃದ್ದಿ, ಮಾನ್ಯತೆಗಳು ಶಕ್ತಿ ಪಡೆಯದಿರಲು ಕೊರಗ ಜನಾಂಗದ ಹಿಂದುಳಿಯುವಿಕೆಯೇ ಪ್ರಧಾನ ಕಾರಣವೆಂದು ವಿಶ್ವ ತುಳುವೆರೆ ಆಯನೊದ ಪ್ರಧಾನ ಸಂಚಾಲಕ ಡಾ.ರಾಜೇಶ್ ಆಳ್ವ ಬದಿಯಡ್ಕ ಅಭಿಪ್ರಾಯ ವ್ಯಕ್ತಪಡಿಸಿದರು.
ಕಾಸರಗೋಡು ಜಿಲ್ಲಾ ಕೊರಗ ಅಭಿವೃದ್ದಿ ಸಂಘ ಹಾಗೂ ಪರಿಶಿಷ್ಟ ಅಭಿವೃದ್ದಿ ಇಲಾಖೆಯ ನೇತೃತ್ವದಲ್ಲಿ ಭಾನುವಾರ ಬೇಳ ಸಂತ ಬಾರ್ತಲೋಮಿಯಾ ಶಾಲೆಯಲ್ಲಿ ನಡೆದ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ವಿಶ್ವ ತುಳುವೆರೆ ಆಯನೊದ ಸಂದರ್ಭ ತುಳುನಾಡ ಒತ್ತರ್ಮೆ ಕಾರ್ಯಕ್ರಮದ ಭಾಗವಾಗಿ ಕೊರಗ ಸಮುದಾಯಕ್ಕೆ ಅಧಿಕೃತ ಆಹ್ವಾನ ನೀಡಿ ಅವರು ಮಾತನಾಡುತ್ತಿದರು. ಸಂಸ್ಕೃಂತಿ,ಜೀವನ ಕ್ರಮಗಳಲ್ಲಿ ವಿಶಿಷ್ಟರಾದ ಕೊರಗ ಜನಾಂಗ ಆಧುನಿಕತೆಯ ಮಧ್ಯೆಯೂ ತನ್ನತನವನ್ನು ಉಳಿಸಿ ಬೆಳೆಸಿರುವುದು ತುಳು ಭಾಷೆ ಸಂಸ್ಕೃಂತಿ ಸಂವರ್ಧನೆಯ ಪ್ರಮುಖ ಹೆಗ್ಗುರುತುಗಳಾಗಿದ್ದು,ಇತರರ ಸ್ವಾರ್ಥ ಲಾಲಸೆಗಳ ಕಾರಣ ಸಮಗ್ರ ಅಭಿವೃದ್ದಿಯಲ್ಲಿ ಹಿಂದುಳಿಯುವಂತಾದರು ಎಂದು ಅವರು ತಿಳಿಸಿದರು.ವಿಶ್ವ ತುಳುವೆರೆ ಆಯನೊದಲ್ಲಿ ಕೊರಗ ಸಮುದಾಯದ ಅಧ್ಯಯನ ಮತ್ತು ತುರ್ತು ನಡೆಯಬೇಕಾದ ಕಾರ್ಯಚಟುವಟಿಕೆಗಳ ಬಗ್ಗೆ ಅಗತ್ಯ ನಿರ್ಣಯ ಕೈಗೊಳ್ಳಲಾಗುವುದೆಂದು ಅವರು ತಿಳಿಸಿದರು.
ಕೊರಗ ಅಭಿವೃದ್ದಿ ಸಂಘದ ಅಧ್ಯಕ್ಷೆ ಸುಮತಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಜಿಲ್ಲಾ ಹಿಂದುಳಿದ ವರ್ಗಗಳ ಅಭಿವೃದ್ದಿ ಅಧಿಕಾರಿ ಟ್ರೈಬಲ್ ಡೆವೆಲಪ್ಮೆಂಟ್) ಕೃಷ್ಣ ಪ್ರಕಾಶ್ ಮಾತನಾಡಿ,ತುಳುವೆರೆ ಆಯನೊದ ಕಾರ್ಯಕ್ರಮದಲ್ಲಿ ಕೊರಗ ಸಮುದಾಯದ ಎಲ್ಲಾ ಬಾಧ್ಯತೆಗಳನ್ನು ಇಲಾಖೆ ವಹಿಸುವುದೆಂದು ಭರವಸೆ ನೀಡಿದರು.
ಬದಿಯಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷ ಕೆ.ಎನ್ ಕೃಷ್ಣ ಭಟ್,ಬದಿಯಡ್ಕ ಠಾಣಾಧಿಕಾರಿ ದಾಮೋದರನ್,ಗ್ರಾಮ ಪಂಚಾಯತ್ ಸದಸ್ಯೆ ಅನಿತಾ ಕ್ರಾಸ್ತಾ,ಧನಲಕ್ಷ್ಮೀ,ಹರಿದಾಸ್,ಕೊರಗ ಸಮುದಾಯ ಕೇರಳ-ಕರ್ನಾಟಕ ಒಕ್ಕೂಟಗಳ ಅಧ್ಯಕ್ಷ ಸುಂದರ,ಪದ್ಮಾವತಿ ಟೀಚರ್,ಗೌರಿ,ಬೇಳ ಶಾಲಾ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ನಿವೇದಿತಾ,ರಮೇಶ್ ಕೊಗ್ಗ,ಸಂಜೀವ ಪುಳ್ಕೂರು,ಕೊರಗ ಅಭಿವೃದ್ದಿ ಸಂಘದ ಕೋಶಾಧಿಕಾರಿ ಮಾರ್ಟಿನ್,ತುಳುವೆರೆ ಆಯನೊದ ಬುಭಾಷಾ ಸಂಗಮದ ರವಿಕಾಂತ ಕೇಸರಿ ಕಡಾರು ಮೊದಲಾದವರು ಉಪಸ್ಥಿತರಿದ್ದರು.

