ವಿಟ್ಲ: ಅಧ್ಯಾಪಕರ ಸಹಕಾರಿ ಸಂಘ ವಿಟ್ಲ ಇದರ ವಾರ್ಷಿಕ ಮಹಾಸಭೆಯು ವಿಟ್ಲದ ಮಾದರಿ ಶಾಲಾ ಸಭಾ ಭವನದಲ್ಲಿ ಸಂಘದ ಅಧ್ಯಕ್ಷ ಕೆ. ರಮೇಶ್ ನಾಯಕ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಮುಖ್ಯ ಅತಿಥಿಗಳಾಗಿ ಕ್ಷೇತ್ರ ಶಿಕ್ಷಣ ಅಧಿಕಾರಿ ಲೋಕೇಶ್, ಸಂಘದ ಸ್ಥಾಪಕ ಅಧ್ಯಕ್ಷ ಈಶ್ವರ ಭಟ್, ಬಂಟ್ವಾಳ ತಾಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷ ಉಮಾನಾಥ ರೈ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಶಿವಶಂಕರ ಭಟ್ ಮತ್ತು ಬಂಟ್ವಾಳ ತಾಲೂಕಿನ ಅಧ್ಯಕ್ಷ ಶಿಪ್ರಸಾದ್ ರೈ ಭಾಗವಹಿಸಿದ್ದರು. ಸಂಘದ ಎಲ್ಲಾ ನಿರ್ದೇಶಕರು ವೇದಿಕೆಯಲ್ಲಿದ್ದರು.

ಈ ಸಂದರ್ಭದಲ್ಲಿ ರಾಜ್ಯ ಪ್ರಶಸ್ತಿ ಪಡೆದ ಶಿಕ್ಷಕರಾದ ರಮೇಶ್ ಬಾಯಾರ್ ಮತ್ತು ಸಂಜೀವ ಹೆಚ್ ಹಾಗೂ ಜಿಲ್ಲಾ ಪ್ರಶಸ್ತಿ ಪಡೆದ ಶಿಕ್ಷಕರಾದ ನಯನಾ ವಿ ರೈ, ಮೋನಪ್ಪ ಎಂ, ಕುಂಞ ನಾಯ್ಕ, ಲಕ್ಷ್ಮಣ ಟಿ ನಾಯ್ಕ, ರಮಾನಂದ ಮತ್ತು ಜೋಯ್ಸ್ ಹೆನ್ರಿಟಾ ಇವರನ್ನು ಸನ್ಮಾನಿಸಲಾಯಿತು.

ಸಂಘದ ಸದಸ್ಯರ ಮಕ್ಕಳಿಗೆ 2015-16ನೇ ಸಾಲಿನಲ್ಲಿ ಎಸ್ಎಸ್ಎಲ್ಸಿ, ಪಿಯುಸಿ, ಅಂತಿಮ ವರ್ಷದ ಪದವಿ, ಡಿಪ್ಲೊಮಾ, ಇಂಜಿನೀಯರಿಂಗ್, ಮೆಡಿಕಲ್ ಹಾಗೂ ಸ್ನಾತಕೋತ್ತರ ತರಗತಿಗಳಲ್ಲಿ ಅತೀ ಹೆಚ್ಚು ಅಂಕ ಪಡೆದ ಐದು ವಿದ್ಯಾರ್ಥಿಗಳಿಗೆ ಪ್ರೋತ್ಸಾಹಕ ಬಹುಮಾನ ನೀಡಲಾಯಿತು. ಸಂಘವು 2015-016ನೇ ಸಾಲಿನಲ್ಲಿ 1.52 ಕೋಟಿ ರೂಪಾಯಿ ಲಾಭ ಗಳಿಸಿದ್ದು 20% ಡಿವಿಡೆಂಡ್ ಘೋಷಿಸಲಾಯಿತು. ಅಧ್ಯಕ್ಷ ಕೆ. ರಮೇಶ್ ನಾಯಕ್ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಜನರಲ್ ಮ್ಯಾನೇಜರ್ ಕೃಷ್ಣಪ್ರಕಾಶ್ ವರದಿ ಮತ್ತು ಲೆಕ್ಕಪತ್ರ ಮಂಡಿಸಿದರು. ಉಪಾಧ್ಯಕ್ಷ ಮೋನಪ್ಪ ಕೆ ವಂದಿಸಿದರು. ಅಕ್ಷತಾ ಭಟ್, ರಾಜೇಂದ್ರ ರೈ ಮತ್ತು ಜೆಸಿಂತಾ ಮಸ್ಕರೇನಸ್ ಸಹಕರಿಸಿದರು.
