ವಿಟ್ಲ: ಕಾರ್ಮಿಕ ವರ್ಗದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ವಿಟ್ಲದ ವಿವಿಧ ಕಾರ್ಮಿಕ ಸಂಘಟನೆಗಳು ವಿಟ್ಲ ಖಾಸಗಿ ಬಸ್ ನಿಲ್ದಾಣದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿತು.ಸಿಐಟಿಯು, ಫೆಡರೇಶನ್ ಅಫ್ ಕರ್ನಾಟಕ ಆಟೋ ರಿಕ್ಷಾ ಯೂನಿಯನ್, ಬಿಎಸ್ಎನ್ಎಲ್, ಮೆಸ್ಕಾಂ ಕಾರ್ಮಿಕ ಸಂಘಟನೆ, ಎಸ್ಎಫ್ಐ ವಿದ್ಯಾರ್ಥಿ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಸಿಐಟಿಯು ಮುಖಂಡ ರಾಮಣ್ಣ ವಿಟ್ಲ ಅವರು ರಸ್ತೆ ಸುರಕ್ಷಾ ಮಸೂದೆಯಿಂದ ವಾಹನ ಚಾಲಕರಿಗೆ ಸರ್ಕಾರ ಅನ್ಯಾಯ ಮಾಡುತ್ತಿದೆ. ದೇಶದಲ್ಲಿರುವ ಕಿರಿದಾದ ಹಾಗೂ ಹೊಂಡಗಳಿಂದ ಕೂಡಿದ ರಸ್ತೆಗಳನ್ನು ಅಭಿವೃದ್ಧಿಪಡಿಸಿದ ಬಳಿಕ ರಸ್ತೆ ಸುರಕ್ಷಾ ಮಸೂದೆಯನ್ನು ಜಾರಿಗೆ ತರಲ ಎಂದು ಆಗ್ರಹಿಸಿದರು. 
ಅಚ್ಚೆದಿನ್ ಬಡವರ ಕಾರ್ಮಿಕರಿಗೆ, ರೈತರಿಗೆ, ಬಂದಿಲ್ಲ. ಅದು ಶ್ರೀಮಂತ ಹಾಗೂ ಇಲ್ಲಿಯ ದೊಡ್ಡ ಮಟ್ಟದ ಕಂಪೆನಿಗಳಿಗೆ ಮಾತ್ರ ಬಂದಿದೆ. ಕೇಂದ್ರ ಸರ್ಕಾರ ವಿದೇಶಿ ಕಂಪೆನಿಗಳಿಗೆ ಬೆಂಬಲ ನೀಡುವ ಮೂಲಕ ಇಲ್ಲಿಯ ಬಡ ಕಾರ್ಮಿಕರಿಗೆ ಅನ್ಯಾಯ ಮಾಡುತ್ತಿದೆ ಎಂದು ಆರೋಪಿಸಿದರು. ಬಿಜೆಪಿಯ ಅಂಗಸಂಸ್ಥೆಯಾದ ಬಿಎಂಎಸ್ ಕಾರ್ಮಿಕರಿಗೆ ಬೆಂಬಲ ನೀಡದಂತೆ ವರ್ತಿಸುತ್ತಿದೆ ಎಂದ ಅವರು ಕೇಂದ್ರ ಸರ್ಕಾರ ಕಾರ್ಮಿಕ ಸಂಘಟನೆಗಳ 17 ಬೇಡಿಕೆಗಳನ್ನು ಈಡೇಸುವರೆಗೂ ನಮ್ಮ ಹೋರಾಟ ಮುಂದುವರೆಯಲಿದೆ ಎಂದು ತಿಳಿಸಿದರು.
ವಿಟ್ಲ ಫೆಡರೇಶನ್ ಅಫ್ ಕರ್ನಾಟಕ ಆಟೋ ರಿಕ್ಷಾ ಯೂನಿಯನ್ ಅಧ್ಯಕ್ಷ ವಸಂತ, ಶಿವಪ್ಪ ನಾಯ್ಕ, ಆಟೋ ರಿಕ್ಷಾ ಚಾಲಕ ಮಾಲಕರ ಸಂಘದ ಅಧ್ಯಕ್ಷ ಇಬ್ರಾಹಿಂ ಬಿ, ದಲಿತ್ ಸೇವಾ ಸಮಿತಿಯ ಚಂದ್ರಶೇಖರ, ಮೋಹನ್ದಾಸ, ಬಿಎಸ್ಎನ್ಎಲ್ ಕಾರ್ಮಿಕ ಸಂಘಟನೆಯ ಚಂದ್ರಹಾಸ, ವಿಜಯಕುಮಾರ್, ಎಸ್ಎಫ್ಐ ಜಿಲ್ಲಾ ಉಪಾಧ್ಯಕ್ಷ ತುಳಸೀದಾಸ್ ವಿಟ್ಲ, ಸಲೀಂ ಮೊದಲಾದವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.
