ವಿಟ್ಲ:`ಬದುಕು ಬರಹಗಳ ನಡುವೆ ಅಂತರವಿಲ್ಲದೆ ಇವರಡೂ ಒಂದೇ ಆದಾಗ ಆ ಕೃತಿ ಹಾಗೂ ಕೃತಿಗಾರ ಸಹೃದಯಿಯನ್ನು ತಲುಪಿ ಅವನೆದೆಯಲ್ಲಿ ಬಹುಕಾಲ ನೆಲೆ ನಿಲ್ಲುವಂತಾಗುತ್ತದೆ. ವಾಲ್ಮೀಕಿ, ವ್ಯಾಸ, ಪಂಪ, ವಚನಕಾರರು, ಕುಮಾರವ್ಯಾಸ, ದಾಸ ವರೇಣ್ಯರು ಇವರೆಲ್ಲರುಗಳೂ ಈ ಸಾಲಿಗೆ ಸೇರಿದವರು.
ಆಧುನಿಕ ಕನ್ನಡ ಸಾಹಿತ್ಯದಲ್ಲಿ ಮಾಸ್ತಿಯವರು ಇದಕ್ಕೊಂದು ಒಳ್ಳೆರ ನಿದರ್ಶನ. ಬಾಲ್ಯದ ಬಡತನ, ಯವ್ವನದ ಗಾಢ ಸಾಮಾಜಿಕ ಜೀವನಾನುಭವ ಸಾಹಿತ್ಯ – ಸಾಹಿತಿಗಳ ಒಡನಾಟ, ಸುಸಂಸ್ಕೃತ ಜೀವನ ಇವೆಲ್ಲವೂ ಅವರನ್ನು ಶ್ರೇಷ್ಠ ವ್ಯಕ್ತಿಯನ್ನಾಗಿಸುದಲ್ಲದೆ ಆದರ್ಶ ವ್ಯಕ್ತಿಯನ್ನಾಗಿಸಿತು. ಮಾಸ್ತಿ ಕನ್ನಡದ ಆಸ್ತಿ. ಮಾಸ್ತಿಗೆ ಸಮ ನಾಸ್ತಿ.’ ಎಂದು ವಿಠಲ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ಯು ಯಸ್ ವಿಶ್ವೇಶ್ವರ ಭಟ್ ಹೇಳಿದರು. ಇಲ್ಲಿನ ಸಾಹಿತ್ಯ ಸಂಘವು ನಡೆಸಿದ `ಮಾಸ್ತಿ-125 ವರ್ಷಾಚರಣೆ”ಯ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತಾಡಿದರು. ಆಂಗ್ಲ ಉಪನ್ಯಾಸಕ ಕೆ ರಘುವೀರ ಅವರು ಮಾಸ್ತಿಯವರ ಅನುವಾದ ಸಾಹಿತ್ಯದ ಕುರಿತು ಮಾಹಿತಿ ನೀಡಿದರು. ಪ್ರಾಂಸುಪಾಲ ಎ ಎಸ್ ಆದರ್ಶ ಅಧ್ಯಕ್ಷತೆ ವಹಿಸಿ ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳು ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಳ್ಳಲು ಹಿಂದೇಟು ಹಾಕುತ್ತಿರುವ ಬಗ್ಗೆ ಕಳವಳ ವ್ಯಕ್ತ ಪಡಿಸಿದರು. ನಿಕಿಲ್ ನಿರೂಪಿಸಿದರು. ಪವಿತ್ರ ವಂದಿಸಿದರು
