ಸುಳ್ಯ: ರಾಜ್ಯ ಕಾರ್ಮಿಕ ಮಂಡಳಿ ಮಾಜಿ ಸದಸ್ಯೆ ಕಾಂಗ್ರೆಸ್ ನಾಯಕಿ ವಹಿದಾ ಇಸ್ಮಾಯಿಲ್ ಮತ್ತು ಅವರ ಪತಿ ಗ್ರಾ.ಪಂ. ಸದಸ್ಯ ನೇಲ್ಯಮಜಲು ಇಸ್ಮಾಯಿಲ್ ಅವರಿಗೆ ಸ್ಥಳೀಯ ಯುವಕನೊಬ್ಬ ಚೂರಿಯಿಂದ ಇರಿದು ಗಂಭೀರ ಗಾಯಗೊಳಿಸಿದ ಘಟನೆ ಬುಧವಾರ ನಗರದ ಗಾಂಧಿ ನಗರದಲ್ಲಿ ನಡೆದಿದೆ.

ಇಸ್ಮಾಯಿಲ್ ಅವರ ಮನೆ ಸಮೀಪದ ನಿವಾಸಿ ಎಂ.ಆರ್.ಸಿದ್ದೀಕ್(35) ಚೂರಿಯಿಂದ ಇರಿದ ಆರೋಪಿಯಾಗಿದ್ದು, ಪೊಲೀಸರು ಬಂಧಿಸಿದ್ದಾರೆ. ಗಂಭೀರ ಗಾಯಗೊಂಡ ವಹೀದಾ ಅವರನ್ನು ಸುಳ್ಯ ಕೆವಿಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಸುಮಾರು 3 ಗಂಟೆ ಸರ್ಜರಿ ನಡೆಸಿ ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಅದಕ್ಕೆ ಮುನ್ನ ಇಸ್ಮಾಯಿಲ್ ಅವರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ.
ಗಾಂಧಿ ನಗರದಲ್ಲಿಯ ಅಲ್ಪಸಂಖ್ಯಾತ ಸೊಸೆಟಿ ಆಡಳಿತ ಮಂಡಳಿ ಸಭೆ ಮುಗಿಸಿ ವಹೀದಾ ಅವರು ಕಾರು ಪಾರ್ಕಿಂಗ್ ಬಳಿ ಬರುತ್ತಿದ್ದಾಗ ಓಡಿ ಬಂದ ಆರೋಪಿ ತೋಳು, ಎದೆ ಭಾಗಕ್ಕೆ ಚೂರಿಯಿಂದ ಇರಿದಿದ್ದಾನೆ. ಬಳಿಕ ಸೊಸೆಟಿ ಬಳಿ ಇರುವ ತೆಂಗಿನಕಾಯಿ ಅಂಗಡಿಯಲ್ಲಿ ಕುಳಿತುಕೊಂಡಿದ್ದ ಅವರ ಪತಿ ಇಸ್ಮಾಯಿಲ್ ಅವರಿದ್ದಲ್ಲಿಗೆ ಓಡಿದ ಆತ ಅವರಿಗೂ ಹಲ್ಲೆ ಮಾಡಿದ್ದಾನೆ. ಜನ ಸೇರಿದಾಗ ಓಡಿ ಹೋಗದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಗೋವಾದಲ್ಲಿ ಸ್ವಂತ ಹೋಟೆಲ್ ನಡೆಸುತ್ತಿದ್ದು, ಚುನಾವಣೆ ಸಂದರ್ಭ ಅದನ್ನು ಮಾರಿ ಊರಿಗೆ ಬಂದಿದ್ದ ಸಿದ್ದೀಕ್ ಚೂರಿಯಿಂದ ಇರಿಯುವ ವೇಳೆ ನನ್ನ ಮೇಲೆ ವಿನಾ ಕಾರಣ ಗೂಂಡಾ ಕೇಸ್ ಹಾಕಿ ನನ್ನ ಕುಟುಂಬವೇ ಬದುಕದಂತೆ ಮಾಡಿದ್ದಿ, ನಿಮ್ಮನ್ನೂ ಬಿಡುವುದಿಲ್ಲ, ನಾನು ಬದುಕುವುದಿಲ್ಲ ಎಂದು ಹೇಳಿ ಸಿದ್ದಿಕ್ ಇರಿದ ಎಂದು ಸ್ಥಳೀಯರು ಹೇಳುತ್ತಾರೆ.
ಇಸ್ಮಾಯಿಲ್ ಮತ್ತು ಸಿದ್ದೀಕ್ ಕುಟುಂಬದ ಮಧ್ಯೆ ಹಲವು ವರ್ಷಗಳ ವೆಯಕ್ತಿಕ ದ್ವೇಷ ಇದೆ. ಇದುವೇ ಘಟನೆಗೆ ಕಾರಣ ಎಂದು ಪೊಲೀಸರು ಹೇಳುತ್ತಾರೆ. ಹಲವು ವಿವಾದಗಳಲ್ಲಿ ಇಸ್ಮಾಯಿಲ ಮತ್ತು ಸಿದ್ದಿಕ್ ಕುಟುಂಬ ವಿರೋಧಿ ಗುಂಪುಗಳಲ್ಲಿ ಗುರುತಿಸಿಕೊಂಡಿತ್ತು.
