ವೈಜ್ಞಾನಿಕ ಅನುವಾದದಲ್ಲಿ ಮಡಿವಂತಿಕೆ ಸಲ್ಲದು: ಡಾ| ನಿಂಜೂರು
ಮುಂಬಯಿ : ರೂಪಾಂತರ ಅನ್ನುವುದು ವಿಶಿಷ್ಟ ಅನುವಾದ ಪ್ರಕಾರವಾಗಿದೆ. ಶಬ್ದಕೋಶ ಭಾಷಾಂತರದ ಆಸ್ತ್ರವಾಗಿದ್ದು, ನಿಘಂಟುಗಳ ಅನುವಾದದಿಂದ ಪೇಚಿಗೆ ಬೀಳುವ ಸಂಭವಗಳೇ ಹೆಚ್ಚಾಗಿರುತ್ತವೆ. ಅನುವಾದಕರು ಮೂಲ ಸಾಹಿತ್ಯಕ್ಕೆ ದಕ್ಕೆ ತರದೆ ರಾಷ್ಟ್ರಕ್ಕೂ ಅಪ್ರಚಾರಗೈಯದೆ ಸೃಜನಶೀಲತೆ ಮೆರೆಯಬೇಕು. ಭಾಷಾಂತರ, ಅನುವಾದ ಮತ್ತು ರೂಪಾಂತರ ಇವುಗಳೆಲ್ಲವೂ ವಿಭಿನ್ನವಾಗಿದ್ದು, ರೂಪಾಂತರದಲ್ಲಿ ಅನುವಾದಕರಿಗೆ ಪೂರ್ಣ ಸ್ವಾತಂತ್ರ್ಯವಿದೆ. ಅನುವಾದಕನು ಭಾವವನ್ನು ಗ್ರಹಿಸಿ ಮೂಲಕೃತಿಗೆ ಧಕ್ಕೆ ತಾರದೆ ತುರ್ಜುಮೆಯಲ್ಲಿ ವಸ್ತುನಿಷ್ಠನಾಗಿರಬೇಕು. ಅನುವಾದಕರು ವ್ಯಾಕರಣದ ಬಗ್ಗೆ ಜಾಗೃತರಾಗಿದ್ದು, ತನ್ನ ಭಾಷೆಯ ಸೊಗಡು ಬಣಿಯಲ್ಲಿ ಪ್ರವೀಣ್ಯನಾಗಿರಬೇಕು. ವೈಜ್ಞಾನಿಕ ಅನುವಾದದಲ್ಲಿ ಮಡಿವಂತಿಕೆಸಲ್ಲದು ಎಂದು ನಾಡಿನ ಹಿರಿಯ ಸಾಹಿತಿ, ವಿಜ್ಞಾನಿ, ಸಂಶೋಧಕ ಡಾ| ವ್ಯಾಸರಾಯ ನಿಂಜೂರು ನುಡಿದರು. ಕನ್ನಡ ವಿಭಾಗ ಮುಂಬಯಿ ವಿಶ್ವವಿದ್ಯಾಲಯವು ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಇದರ ಸಹಯೋಗದೊಂದಿಗೆ ಇಂದಿಲ್ಲಿ ಶನಿವಾರ ಅಪರಾಹ್ನ ಸಾಂತಾಕ್ರೂಜ್ ಪೂರ್ವದ ಕಲೀನಾ ವಿದ್ಯಾನಗರಿ ಅಲ್ಲಿನ ಜೆ.ಪಿ ನಾಯಕ್ ಭವನದ ಸಭಾಗೃಹದಲ್ಲಿ ಆಯೋಜಿಸಿದ್ದ `ಅನುವಾದ ಅವಕಾಶ-ಸಾಹಿತ್ಯ ಚಿಂತನ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಡಾ|ನಿಂಜೂರು ತಿಳಿಸಿದರು. ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥ ಡಾ| ಜಿ.ಎನ್.ಉಪಾಧ್ಯ ಅವರ ಸಮನ್ವಯಕತ್ವದಲ್ಲಿ ನಡೆಸಲ್ಪಟ್ಟ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಡಾ| ಜೀವಿ ಕುಲಕರ್ಣಿ, ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಇದರ ಅಧ್ಯಕ್ಷ ಚಂದ್ರಶೇಖರ ಪಾಲೆತ್ತಾಡಿ, ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಅನುವಾದಕಿ ಶ್ಯಾಮಲಾ ಮಾಧವ್ ಸಂಪನ್ಮೂಲ ವಿದ್ವಾಂಸರುಗಳಾಗಿ ಪಾಲ್ಗೊಂಡು ಸಾಹಿತ್ಯ ಚಿಂತನೆ ನಡೆಸಿದರು. ಜಿ.ಎನ್.ಉಪಾಧ್ಯ ಪ್ರಸ್ತಾನಿಕ ನುಡಿಗಳನ್ನಾಡಿ ಇದು ಕಿರು ಚಿಂತನಾ ಕಾರ್ಯಕ್ರಮ.


ರಾಷ್ಟ್ರದ ವಾಣಿಜ್ಯ ನಗರಿಯಲ್ಲಿ ಮುಂಬಯಿಯಲ್ಲಿನ ಕನ್ನಡಿಗರು ಬಹುಭಾಷಿಗರು ಎಂದು ಗುರುತಿಸಿ ಕೊಂಡಿರುವುದು ಅಭಿಮಾನದ ವಿಚಾರ. ಪಂಚಭಾಷಾ ಪ್ರವೀಣರಾದ ಕನ್ನಡಿಗರು ಕನ್ನಡದ ಕಾಯಕವನ್ನು ಭವಿಷ್ಯತ್ತಿನ ಪೀಳಿಗೆಗೆ ದಾಟಿಸುವ ಕೆಲಸ ಆಗಬೇಕಾಗಿದೆ. ಕನ್ನಡದ ಸಾಹಿತ್ಯವನ್ನಿ ಇತರೇ ಭಾಷೆಗೆ ಅನುವಾದಗೈದು ಆ ಮುಖೇನ ಉಸಿರಾಡಿದರೆ, ಅನುವಾದದಿಂದ ಕನ್ನಡದ ಬದುಕು ಕಟ್ಟಿಕೊಳ್ಳಬಹುದು ಎಂದು ಆಶಯ ವ್ಯಕ್ತಪಡಿಸಿದರು. ಪ್ರಸಕ್ತ ಜಗತ್ತು ಭಾಷಾಂತರದಲ್ಲಿ ಮುನ್ನಡೆಯುತ್ತದೆ. ಅನುವಾದಕ್ಕೆ ಅದರದ್ದೇ ಆದ ಭಾಷೆ ಇದ್ದು, ಯುಗ ಬದಲಾಗುತ್ತಿದ್ದಂತೆಯೇ ಜಾಗತೀಕರಣದಲ್ಲಿ ಭಾಷಾಂತರದ ಹಾವಳಿ ವಿಪರೀತವಾಗಿದೆ. ಆದರೆ ಮಾನವ ಬದುಕು ಬದಲಾಗಿಲ್ಲ. ಅನುವಾದದ ಮುಖಾಂತರ ಪತ್ರಕರ್ತರಿಗೆ ಭಾಷಾಂತರದ ಅಗತ್ಯವಿದೆಯೇ..? ಎಂದು ಕಾಡುತ್ತಿದ್ದು, ಶಬ್ದಶುದ್ಧವಾದಗ ಭಾಷಾಂತರವು ಅರ್ಥಗರ್ಭಿತವಾಗುತ್ತದೆ ಎಂದು ಚಂದ್ರಶೇಖರ ಪಾಲೆತ್ತಾಡಿ ನುಡಿದರು. ಶ್ಯಾಮಲಾ ಮಾಧವ್ ಮಾತನಾಡಿ ಸಾಹಿತ್ಯ ಕೃತಿಗಳು ಶ್ರೇಷ್ಠತನ ಕಳಕೊಳ್ಳಬಾರದು. ಪಾತ್ರ ಚಿಂತನೆ, ವರ್ಣನೆ ಉಳಿಸಿಕೊಳ್ಳುವುದು ಮುಖ್ಯವಾದದ್ದು ಎಂದು ತನ್ನ ಅನುವಾದ ಕೃತಿಗಳ ಬಗ್ಗೆ ಭಿತ್ತರಿಸಿದರು. ಸಾಹಿತ್ಯ ಲೋಕದ ರೂಪಾಂತರಿತ ಬರವಣಿಗೆಯ ಹಂಬಲ ವ್ಯಕ್ತಪಡಿಸಿ ಅಭಿರುಚಿ ಅನುವಾದಕ್ಕೆ ಸಹಕಾರಿಯಾಗಿದೆ ಎಂದು ಅಭಿಪ್ರಾಯ ಪಟ್ಟರು. ಅನುವಾದ ಕಷ್ಟಕರ ವಿಚಾರ. ಭಾಷಾ ಪ್ರಾವೀಣ್ಯತೆ ತರ್ಜುಮೆದಾರರಿಗೆ ಅಸ್ತ್ರವಾಗಿದೆ. ಅನುವಾದದ ಎಡವಟ್ಟು ಮೂಲ ಲೇಖನಕ್ಕೆ ಭಂಗತರಬಹುದಾಗಿದ್ದು, ಅನುವಾದಕರೂ ತಾಳ್ಮೆಯಿಂದ ಗ್ರಹಿಸಿಕೊಳ್ಳಬೇಕು ಎಂದು ಡಾ| ಜೀವಿ ಕುಲಕರ್ಣಿ ತಿಳಿಸಿದರು. ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಮಾಧ್ಯಮ ಅಕಾಡೆಮಿ ಪುರಸ್ಕೃತ ರೋನ್ಸ್ ಬಂಟ್ವಾಳ್, ಡಾ| ಪೂರ್ಣಿಮಾ ಎಸ್.ಶೆಟ್ಟಿ, ಕ್ರೀಡಾರಂಗದ ಪ್ರತಿಭಾನ್ವಿತೆ ಸುರೇಖಾ ದೇವಾಡಿಗ, ಕು| ದೀಪ ಪ್ರಭು ಅವರನ್ನು ಮುಂಬಯಿ ವಿವಿ ಕನ್ನಡ ವಿಭಾಗದ ಪರವಾಗಿ ಸನ್ಮಾನಿಸಿ ಅಭಿನಂದಿಸಿದರು. ಪತ್ರಕರ್ತರ ಸಂಘದ ಉಪಾಧ್ಯಕ್ಷ ದಯಾ ಸಾಗರ್ ಚೌಟ, ಕಾರ್ಯದರ್ಶಿ ಹರೀಶ್ ಕೆ.ಹೆಜ್ಮಾಡಿ, ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ಬಾಬು ಕೆ.ಬೆಳ್ಚಡ, ಗುರುದತ್ತ್ ಎಸ್.ಪೂಂಜಾ ಮುಂಡ್ಕೂರು, ವಿಶೇಷ ಆಮಂತ್ರಿತ ಸದಸ್ಯ ನ್ಯಾ| ವಸಂತ ಎಸ್.ಕಲಕೋಟಿ, ಸಲಹಾಗಾರ್ತಿ ಡಾ| ಸುನೀತಾ ಎಂ.ಶೆಟ್ಟಿ, ಸದಸ್ಯರುಗಳಾದ ಅಶೋಕ್ ಎಸ್. ಸುವರ್ಣ, ರತ್ನಾಕರ ಆರ್.ಶೆಟ್ಟಿ, ನಿತ್ಯಾನಂದ ಡಿ.ಕೋಟ್ಯಾನ್, ಸತೀಶ್ ಎನ್.ಬಂಗೇರ, ಬಾಬು ಶಿವಪೂಜಾರಿ, ಹರೀಶ್ ಜಿ.ಪೂಜಾರಿ, ತೋನ್ಸೆ ಸಂಜೀವ ಪೂಜಾರಿ ಮತ್ತಿತರ ಅನೇಕರು ಉಪಸ್ಥಿತರಿದ್ದರು. ಪತ್ರಕರ್ತರ ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ರೋನ್ಸ್ ಬಂಟ್ವಾಳ್ ಸ್ವಾಗತಿಸಿದರು. ಕನ್ನಡ ವಿಭಾಗದ ಸಂಶೋಧನಾ ಸಹಾಯಕಿ ಡಾ| ಪೂರ್ಣಿಮಾ ಎಸ್.ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿ ಅತಿಥಿಗಳನ್ನು ಪರಿಚಯಿಸಿದರು. ವಿದುಷಿ ಶ್ಯಾಮಲ ಪ್ರಕಾಶ್ ಸ್ವಾಗತ ಗೀತೆ ಯನ್ನಾಡಿ ಧನ್ಯವದಿಸಿದರು.










