ಮಂಗಳೂರು: ತನಗೆ ನೀಡಲಾಗಿರುವ ಡೀಲರ್ಶಿಪ್ ಮೇಲೆ ಮತ್ತೊಬ್ಬರಿಗೆ ಸಾಲ ನೀಡಿದ ಎಚ್ಪಿಸಿಎಲ್, ಸಾಲ ಪಡೆದಾತ ಮರುಪಾವತಿ ಮಾಡುತ್ತಿಲ್ಲವಾದ್ದರಿಂದ ತನಗೆ ತೈಲ ಪೂರೈಕೆ ಮಾಡದೆ ಅನ್ಯಾಯವೆಸಗಿದ್ದಾರೆ ಎಂದು ಆರೋಪಿಸಿ ಎಚ್ಪಿಸಿಎಲ್ ಡೀಲರ್ ನ್ಯಾಯಕ್ಕಾಗಿ ಕಂಪನಿ ಕಚೇರಿ ಮುಂದೆ ಉಪವಾಸ ಸತ್ಯಾಗ್ರಹ ನಡೆಸಿದ ಘಟನೆ ಬುಧವಾರ ನಡೆದಿದೆ.
ಆದರೆ ಕಂಪನಿ ಈ ಆರೋಪವನ್ನು ತಳ್ಳಿ ಹಾಕಿದ್ದು, ಡೀಲರ್ ಸಾಲವನ್ನು ಪಡೆದುಕೊಂಡು ಮರು ಪಾವತಿ ಮಾಡದೆ ಬಾಕಿ ಉಳಿಸಿಕೊಂಡಿದ್ದು, ಈ ಕಾರಣದಿಂದ ತೈಲ ಪೂರೈಕೆ ತಡೆಹಿಡಿಯಲಾಗಿದೆ ಎಂದು ತಿಳಿಸಿದೆ. ಇದಲ್ಲದೆ ಸಾಲ ಮರುಪಾವತಿಗೆ ಕಾಲಾವಕಾಶ ನೀಡುವುದಾಗಿ ತಿಳಿಸಿದರೂ ಅವರು ಒಪ್ಪದೆ ಇರುವ ಕಾರಣದಿಂದ ತೈಲಪೂರೈಕೆ ನಡೆಸಿಲ್ಲ ಎಂದು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ಅಧಿಕಾರಿಗಳು ತಿಳಿಸಿದ್ದಾರೆ. ಚಿಕ್ಕಮಗಳೂರಿನಲ್ಲಿ ಪೆಟ್ರೋಲ್ ಬಂಕ್ ನಡೆಸುತ್ತಿರುವ ಪ್ರಕಾಶ್ ಎಂ.ಬಿ ಮತ್ತವರ ಕುಟುಂಬ ಎಚ್ಪಿಸಿಎಲ್ ಮುಂದೆ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದು ಎಸ್ಸಿ/ಎಸ್ಟಿ ಕೋಟಾ ಅಡಿಯಲ್ಲಿ ಪ್ರಕಾಶ್ ಅವರಿಗೆ 2007ರಲ್ಲಿ ಎಚ್ಪಿಸಿಎಲ್ ಪೆಟ್ರೋಲ್ ಬಂಕನ್ನು ಮಂಜೂರು ಮಾಡಿತ್ತು. ಇದಕ್ಕಾಗಿ ಸಾಲದ ವ್ಯವಸ್ಥೆಯನ್ನು ಸರಕಾರದ ಕಾನೂನಿನ ಅಡಿಯಲ್ಲಿ ಕಂಪನಿಯೇ ಒದಗಿಸಿಕೊಟ್ಟಿತ್ತು. 2013ರವರೆಗೆ ಎಲ್ಲವೂ ಸರಿಯಾಗಿ ನಡೆದಿದ್ದರೆ ಆ ಬಳಿಕದಿಂದ ಎಚ್ಪಿಸಿಎಲ್ ತೈಲ ಪೂರೈಕೆ ಸ್ಥಗಿತಗೊಳಿಸಿತ್ತು. ಕಂಪೆನಿಯಿಂದ ಪಡೆದಿರುವ 25 ಲಕ್ಷ ಮರುಪಾವತಿ ಮಾಡದ ಕಾರಣದಿಂದ ತ್ಯೆಲ ಪೂರೈಕೆ ಮಾಡುವುದಿಲ್ಲ ಎಂದು ಸೂಚಿಸಿತು. ಒಂದು ವೇಳೆ ಅವಶ್ಯಕತೆ ಇದ್ದರೆ ಒಮ್ಮೆಗೆ ತ್ಯೆಲ ಪೂರ್ತಕೆ ನಡೆಸುವುದಾಗಿಯೂ ಇದರ ಮೊತ್ತವನ್ನು ಕೂಡಲೇ ಪಾವತಿಸಬೇಕಾಗಿ ತಿಳಿಸಿತು. ಆದರೆ ಪ್ರಕಾಶ್ ಅವರು ಇದಕ್ಕೆ ಬದ್ದರಾಗಿಲ್ಲ ಎನ್ನಲಾಗಿದೆ.
