ಉಳ್ಳಾಲ: ಪಂಚಾಯತ್ರಾಜ್ ವ್ಯವಸ್ಥೆಯಡಿ ಹೊಸ ನೀತಿಗಳ ಜಾರಿಯಿಂದಾಗಿ ಗ್ರಾಮ ಪಂಚಾಯಿತಿಗೆ ಯಾವುದೇ ಅಧಿಕಾರವಿಲ್ಲದೇ ಆಡಳಿತ ವ್ಯವಸ್ಥೆ ಸಂಪೂರ್ಣ ನಿರ್ಲಕ್ಷ್ಯಕ್ಕೆ ಒಳಪಟ್ಟಿದೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಸತೀಶ್ ಕುಂಪಲ ಹೇಳಿದ್ದಾರೆ. ಅವರು ಕೋಟೆಕಾರು ಪಂಚಾಯಿತಿ ವತಿಯಿಂದ ಬೀರಿ ಜಂಕ್ಷನ್ನಿನಲ್ಲಿ ನಿರ್ಮಿಸಲಾದ ವಾಣಿಜ್ಯ ಸಂಕೀರ್ಣವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು.

9/11 ಹೊಸ ನೀತಿ ಜಾರಿಯಿಂದ ಗ್ರಾಮಪಂಚಾಯಿತ್ ಆಡಳಿತದಲ್ಲಿ ಯಾವುದೇ ಅಧಿಕಾರವಿಲ್ಲ. ಗ್ರಾಮೀಣ ಭಾಗದವರು ಲೈಸನ್ಸ್ ಪಡೆಯಬೇಕಾದರೂ, ತಾಲೂಕು ಯೋಜನಾ ಪ್ರಾಧಿಕಾರ ಮೂಡ ಕಚೇರಿಗೆ ಅಲೆದಾಡಬೇಕಿದೆ. ಕುಡಿಯುವ ನೀರಿನ ಯೋಜನೆ, ಪಡಿತರ ಚೀಟಿ ಹಾಗೂ ಇನ್ನಿತರ ಮೂಲಭೂತ ಸೌಕರ್ಯ ಪಡೆಯಲು ಮನೆ ನಂಬರ್ ಪಡೆಯಬೇಕಿದೆ.
ಆದರೆ ಅದನ್ನು ನೀಡಲು ಪಂಚಾಯಿತಿಗೆ ಅಧಿಕಾರವಿಲ್ಲದಂತಾಗಿದ್ದು, ಕೂಡಲೇ ಸೂಕ್ತ ದಾಖಲೆಗಳನ್ನು ಪಡೆದು ಹಿಂದಿನಂತೆ ಪಂಚಾಯಿತಿನಲ್ಲೇ ಜನರ ಹಕ್ಕು ದೊರೆಯುವಂತಾಗಬೇಕು.ಕೋಟೆಕಾರು ಭಾಗದಲ್ಲಿ ಜಿಲ್ಲಾ ಪಂಚಾಯಿತಿ ವತಿಯಿಂದ ಮೂಲಭೂತ ಸೌಕರ್ಯಗಳಿಗೆ ಹೆಚ್ಚಿನ ಒತ್ತು ನೀಡಲಾಗಿದ್ದು, ಮುಂದಿನ ದಿನಗಳಲ್ಲಿ ರಸ್ತೆ, ಕುಡಿಯುವ ನೀರಿನ ಯೋಜನೆಯತ್ತ ಹೆಚ್ಚಿನ ಒಲವು ಹರಿಸಲಾಗುವುದು ಎಂದರು.
ಈ ಸಂದರ್ಭ ಕೋಟೆಕಾರು ಗ್ರಾಮ ಪಂಚಾಯಿತಿ ಅಧ್ಯಕ್ಷ ಶೇಖರ್ ಕನೀರುತೋಟ , ಉಪಾಧ್ಯಕ್ಷೆ ಶಶಿಕಲಾ ಮೋಹನ್, ಸೋಮೇಶ್ವರ ಪಂ. ಅಧ್ಯಕ್ಷೆ ರಮಣಿ, ತಾಲೂಕು ಪಂಚಾಯಿತಿ ಸದಸ್ಯೆ ರಾಜೀವಿ ಕೆಂಪುಮಣ್ಣು, ಮಾಜಿ ಅಧ್ಯಕ್ಷೆ ರೇಣುಕಾ, ಪಂ ಸದಸ್ಯರಾದ ಕೃಷ್ಣ ಗಟ್ಟಿ ಕೋಟೆಕಾರು, ಇಂಜಿನಿಯರ್ ಜಿ.ಕೆ.ನಾಯಕ್, ಸುಂದರ್ ಉಪಸ್ಥಿತರಿದ್ದರು.

