ಮಂಗಳೂರು: ಗೋಹತ್ಯಾ ನಿಯಂತ್ರಣ ವಿಧೇಯಕ ಹಿಂತೆಗೆತದ ನಿರ್ಧಾರವು ಗೋ ಕಳ್ಳತನವನ್ನು ಸಕ್ರಮಗೊಳಿಸುವ ಪ್ರಯತ್ನವಾಗಿದ್ದು, ಹಿಂದೂ ಭಾವನೆಗಳನ್ನು ಘಾಸಿಗೊಳಿಸುವ ದುರುದ್ದೇಶದಿಂದ ಕೂಡಿದೆ. ರಾಜ್ಯ ಸರಕಾರದ ದುರಾಡಳಿತದ ವಿರುದ್ಧ ಬಿಜೆಪಿ ರಾಜ್ಯ ಘಟಕವು ಪ್ರತೀ ವಿಧಾನ ಸಭಾ ಕ್ಷೇತ್ರದಲ್ಲಿ ಜನಜಾಗೃತಿ ಕಾರ್ಯಕ್ರಮವನ್ನು ಸಂಘಟಿಸಲಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ದ.ಕ.ಜಿಲ್ಲಾ ಪ್ರಭಾರಿ ಶಾಸಕ ಸುನೀಲ್ ಕುಮಾರ್ ಹೇಳಿದರು.

sunil
ಅವರು ದಿನಾಂಕ 30.12.2014ರಂದು ಜಗನ್ನಾಥರಾವ್ ಜೋಷಿ ಸೌಧ, ಮಂಗಳೂರು ಇಲ್ಲಿ ಜರಗಿದ ಭಾರತೀಯ ಜನತಾ ಪಾರ್ಟಿ ದಕ್ಷಿಣಕನ್ನಡ ಮತ್ತು ಉಡುಪಿ ಜಿಲ್ಲೆಯ ಸದಸ್ಯತಾ ಅಭಿಯಾನದ ಪ್ರಮುಖ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಕಳೆದ 9 ತಿಂಗಳಿಂದ ರಾಜ್ಯದ ಗ್ರಾಮ ಪಂಚಾಯತ್‍ಗಳಿಗೆ ಯಾವುದೇ ಅನುದಾನವನ್ನು ಬಿಡುಗಡೆ ಮಾಡಿಲ್ಲ. ಕಳೆದ ಅವಧಿಯ ಬಿಜೆಪಿ ಆಡಳಿತದಲ್ಲಿ ವಿಧಾನಸಭಾ ಕ್ಷೇತ್ರವೊಂದಕ್ಕೆ ವರ್ಷಕ್ಕೆ 100 ಆಶ್ರಯ ವಸತಿ ಮನೆಗಳನ್ನು ನೀಡುತ್ತಿದ್ದರೆ, ಪ್ರಸ್ತುತ ಸರಕಾರವು 20 ಆಶ್ರಯ ಮನೆಗಳನ್ನು ಘೋಷಿಸಿದ್ದರೂ ಯಾವುದೇ ಅನುದಾನವನ್ನು ಒದಗಿಸಿರುವುದಿಲ್ಲ. ರಾಜ್ಯಾದ್ಯಂತ ರೇಷನ್ ಕಾರ್ಡ್ ಸಮಸ್ಯೆ ಬಿಗಡಾಯಿಸುತ್ತಿದ್ದು, ಜನಸಾಮಾನ್ಯರು ರೋಸಿ ಹೋಗಿದ್ದಾರೆ. ಕುಮ್ಕಿ ಭೂಮಿ ಮತ್ತು ಡೀಮ್ಡ್ ಅರಣ್ಯ ಬಗ್ಗೆ ಸ್ಪಷ್ಟ ನಿಲುವು ಇಲ್ಲದಿದ್ದರೂ ಭೂಮಿ ಒತ್ತುವರಿ ಮಾಡಿದ ಭೂ ರಹಿತರಿಗೆ ಸರಕಾರ ನೋಟೀಸು ನೀಡಿದೆ. ಮರಳುಗಾರಿಕೆ ದಂಧೆ ವ್ಯಾಪಕವಾಗಿದೆ ಎಂದವರು ಆಕ್ರೋಶ ವ್ಯಕ್ತಪಡಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಶ್ರೀ ನಳಿನ್ ಕುಮಾರ್ ಕಟೀಲ್ ಮಾತನಾಡಿ ಸದಸ್ಯತ್ವ ಅಭಿಯಾನದಲ್ಲಿ ಕಾರ್ಯಕರ್ತರು ಹಬ್ಬದ ವಾತವರಣದಲ್ಲಿ ಭಾಗವಹಿಸಿ ನಿರೀಕ್ಷೆಯನ್ನು ಸಾಕಾರಗೊಳಿಸಬೇಕೆಂದೂ, ರಾಜ್ಯ ಸರಕಾರದ ದುರಾಡಳಿತದ ಬಗ್ಗೆ ಜನಾಭಿಪ್ರಾಯ ರೂಪಿಸಲು ಕಾರ್ಯೋನ್ಮುಖರಾಗಬೇಕೆಂದೂ ಮುಂಬರುವ ಸಹಕಾರಿ ಸಂಸ್ಥೆಗಳ ಚುನಾವಣೆಯಲ್ಲಿ ಪಕ್ಷದ ಬಲ ವೃದ್ಧಿಯಾಗುವಂತೆ ನೋಡಿಕೊಳ್ಳಬೇಕೆಂದು ಕರೆಯಿತ್ತರು.
ಬಿಜೆಪಿಯ ಅಖಿಲ ಭಾರತೀಯ ಸಹ ಸಂಘಟನಾ ಕಾರ್ಯದರ್ಶಿ ಶ್ರೀ ಬಿ.ಎಲ್ ಸಂತೋಷ್, ಉಡುಪಿ ಸಾಂಸದೆ ಕು| ಶೋಭಾ ಕರಂದ್ಲಾಜೆ, ಉಭಯ ಜಿಲ್ಲೆಗಳ ಪಕ್ಷದ ಅಧ್ಯಕ್ಷರಾದ ಶ್ರೀ ಕೆ.ಪ್ರತಾಪಸಿಂಹ ನಾಯಕ್ ಮತ್ತು ಶ್ರೀ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ರಾಜ್ಯ ಬಿಜೆಪಿ ಕಾರ್ಯದರ್ಶಿ ಶ್ಯಾಮಲ ಕುಂದರ್, ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಶಾಸಕ ಲಾಲಾಜಿ ಮೆಂಡನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *