ಮುಂಬಯಿ: ಬಿಎಸ್ಕೆಬಿ ಅಸೋಸಿಯೇಶನ್ ಸಯಾನ್ನಲ್ಲಿನ ತನ್ನ ಗೋಕುಲದಲ್ಲಿ ರಾಷ್ಟ್ರದ 80ನೇ ಸ್ವಾತಂತ್ರ ದಿನಾಚರಣೆಯನ್ನು ಸಂಭ್ರಮಿಸಿತು. ಪ್ರಾತಃಕಾಲ ಬಿಎಸ್ಕೆಬಿಎ ಅಧ್ಯಕ್ಷ ಡಾ| ಸುರೇಶ್ ಎಸ್.ರಾವ್ ಅವರು ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ, ಸಂಘದ ಸದಸ್ಯರನ್ನೊಳಗೊಂಡು ಧ್ವಜಾರೋಹಣಗೈದು ನೆರೆದ ಸರ್ವರಿಗೂ ಸ್ವಾತಂತ್ರ್ಯ ದಿನದ ಶುಭಾಶಯಗಳನ್ನು ಕೋರಿದರು.

ಬಳಿಕ ಡಾ| ಸುರೇಶ್ ಎಸ್.ರಾವ್ ಅವರ ಅಧ್ಯಕ್ಷತೆಯಲ್ಲಿ ಜರಗಿದ ಸಭಾ ಕಾರ್ಯಕ್ರಮದಲ್ಲಿ ಉಪಾಧ್ಯಕ್ಷರುಗಳಾದ ವೈ.ಮೋಹನ್ರಾಜ್ ಮತ್ತು ಚಿತ್ರಾ ಎ.ಮೇಲ್ಮನೆ, ಗೌರವ ಕಾರ್ಯದರ್ಶಿ ಎ.ಪಿ.ಕೆ ಪೋತಿ, ಕೋಶಾಧಿಕಾರಿ ಗಣೇಶ್ ಭಟ್, ಗೌರವ ಜೊತೆ ಕಾರ್ಯದರ್ಶಿಗಳಾದ ಪಿ.ವಿನೋದಿನಿ ರಾಜೇಶ್ ರಾವ್ ಮತ್ತು ಪ್ರಶಾಂತ್ ಆರ್.ಹೆಲೆ, ಗೋಕುಲ ಕಲಾವೃಂದ ಅಧ್ಯಕ್ಷೆ ಶೈಲಿನಿ ಎ.ರಾವ್ ಉಪಸ್ಥಿತರಿದ್ದರು.

ಧಾರ್ಮಿಕ ಶ್ರದ್ಧೆ ಹಾಗೂ ಸಾಮಾಜಿಕ ಜವಾಬ್ದಾರಿಗಳು ಒಂದಾಗಿದ್ದಾಗ ಮಾತ್ರ ನೈಜ ಸಮಾಜಮುಖಿ ಸೇವೆ ಸಿದ್ಧಿಸುತ್ತದೆ. ಧರ್ಮ ಎಂದರೆ ಕೇವಲ ಪೂಜೆ-ಪುನಸ್ಕಾರಗಳಷ್ಟೇ ಅಲ್ಲ, ದೀನ-ದಲಿತರ ಸೇವೆ ಮತ್ತು ಸಮಾಜದ ಏಳಿಗೆಗೆ ಕೈಜೋಡಿಸುವುದೇ ನಿಜವಾದ ಶ್ರೇಷ್ಠ ಕರ್ತವ್ಯವಾಗಿದೆ. ಇಂತಹ ಧರ್ಮನಿಷ್ಠೆ ರಾಷ್ಟ್ರಪ್ರೇಮದಲ್ಲೂ ಮೆರೆದಾಗ ಮನುಕುಲದ ಬದುಕು ಹಸನಾಗುವುದು. ಜೊತೆಗೆ ಭಕ್ತಾದಿಗಳಲ್ಲಿ ಆಧ್ಯಾತ್ಮಿಕ ಶಾಂತಿ ಮತ್ತು ನೈತಿಕ ಮೌಲ್ಯಗಳನ್ನು ಜಾಗೃತಗೊಂಡತೆ ನಮ್ಮ ಸಾಮಾಜಿಕ ಕಾಳಜಿ ಜವಾಬ್ದಾರಿತವಾಗಿ ಅವಶ್ಯಕರಿಗೆ ನೆರವಿನ ಹಸ್ತ ಚಾಚಿ ಪ್ರೀತಿ-ಸೌಹಾರ್ದತೆಗಳನ್ನು ಬಿತ್ತುತ್ತದೆ. ಈ ಮೂಲಕ ಧರ್ಮೋದ್ಧಾರ ಜೊತೆಗೆ ರಾಷ್ಟ್ರೋದ್ಧಾರ ಸಾಧ್ಯವಾಗುವುದು. ಆದ್ದದಿಂದ ಮಾನವೀಯ ಮೌಲ್ಯಗಳೊಂದಿಗೆ ಸಮೃದ್ಧ ಹಾಗೂ ಸಾಮರಸ್ಯದ ನವ ಸಮಾಜವನ್ನು ನಿರ್ಮಿಸೋಣ ಎಂದು ಡಾ| ಸುರೇಶ್ ಎಸ್.ರಾವ್ ತಿಳಿಸಿದರು.

ದಿ| ಬೈಲೂರು ಬಾಲಚಂದ್ರ ರಾವ್ ಅವರು ಗೋಕುಲದಲ್ಲಿ ಸ್ಥಾಪಿಸಿದ ಗೋಕುಲ ಕಲಾಶ್ರೀ ಪ್ರಶಸ್ತಿ-2026ನ್ನು, ಪ್ರತಿಭಾನ್ವಿತ ಸಾಹಿತಿ, ನಟ, ನಿರ್ದೇಶಕ, ಯಕ್ಷಗಾನ ಕಲಾವಿದ ಡಾ| ವೈ.ವಿ.ಮಧುಸೂದನ್ ರಾವ್ ಅವರಿಗೆ ಪ್ರದಾನಿಸಿ ಗೌರವಿಸಿ ಅಭಿನಂದಿಸಿದರು.
ಬಾಲಚಂದ್ರ ರಾವ್ ಅವರ ಧರ್ಮಪತ್ನಿ ಪ್ರಭಾವತಿ ರಾವ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದು, ಶೈಲಿನಿ ರಾವ್ ಪ್ರಶಸ್ತಿಯ ಬಗ್ಗೆ ಮಾತನಾಡಿದರು. ಪ್ರಶಾಂತ್ ಹೆರ್ಲೆ ಕಾರ್ಯಕ್ರಮ ನಿರೂಪಿಸಿದರು. ಐ.ಕೆ ಪ್ರೇಮಾ ಎಸ್.ರಾವ್ ಸನ್ಮಾನ ಪತ್ರ ವಾಚಿಸಿದರು. ಎ.ಪಿ.ಕೆ ಪೋತಿ ಧನ್ಯವದಿಸಿದರು.
