ಮುಂಬಯಿ : ಭಾರತದ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಕೋಟ್ಯಾಂತರ ಭಾರತೀಯರಲ್ಲಿ ರಾಷ್ಟ್ರಭಕ್ತಿ, ಏಕತೆ, ತ್ಯಾಗ ಮತ್ತು ದೇಶಪ್ರೇಮದ ಪ್ರೇರಣೆಯನ್ನು ಮೂಡಿಸಿದ ಅಮರ ಗೀತೆ ವಂದೇ ಮಾತರಂ ರಚನೆಯ 150ನೇ ವರ್ಷಾಚರಣೆಯ ಅಂಗವಾಗಿ ನವಿಮುಂಬಯಿಯಲ್ಲಿ ವಿಶಿಷ್ಟ ರಾಷ್ಟ್ರಭಕ್ತಿ ಕಾರ್ಯಕ್ರಮ ಆಯೋಜಿಸಲಾಗಿದೆ. ಕವಿ ಬಂಕಿಮಚಂದ್ರ ಚಟ್ಟೋಪಾಧ್ಯಾಯ ಅವರ ಅಮರ ಕೃತಿ ವಂದೇ ಮಾತರಂ ಕೇವಲ ಒಂದು ಗೀತೆಯಾಗಿರದೆ, ಸ್ವಾತಂತ್ರ್ಯಕ್ಕಾಗಿ ಎಚ್ಚೆತ್ತ ಭಾರತದ ಹೃದಯದ ಮಿಡಿತವಾಗಿತ್ತು. ಬ್ರಿಟಿಷರ ಆಳ್ವಿಕೆಯ ವಿರುದ್ಧ ನಡೆದ ಹೋರಾಟದಲ್ಲಿ ಈ ಗೀತೆ ಲಕ್ಷಾಂತರ ಭಾರತೀಯರಲ್ಲಿ ಧೈರ್ಯ, ಒಗ್ಗಟ್ಟು, ತ್ಯಾಗ ಮತ್ತು ದೇಶಪ್ರೇಮದ ಮನೋಭಾವವನ್ನು ಮೂಡಿಸಿತ್ತು. ಇಂದಿಗೂ ವಂದೇ ಮಾತರಂ ಎಂಬ ಘೋಷ ಪ್ರತಿಯೊಬ್ಬ ಭಾರತೀಯನ ಹೃದಯದಲ್ಲಿ ತಾಯ್ನಾಡಿನ ಬಗ್ಗೆ ಹೆಮ್ಮೆ ಮತ್ತು ಭಕ್ತಿಯನ್ನು ಮೂಡಿಸುತ್ತಿದೆ.

ಈ ಐತಿಹಾಸಿಕ ಗೀತೆಯ 150ನೇ ವರ್ಷಾಚರಣೆಯನ್ನು ಸ್ಮರಣೀಯವಾಗಿಸುವ ಉದ್ದೇಶದಿಂದ ವಂದೇ ಮಾತರಂ ಪ್ರತಿಷ್ಠಾನ, ನವಿಮುಂಬಯಿ ವತಿಯಿಂದ ಸ್ವಾತಂತ್ರ್ಯ ದಿನಾಚರಣೆಯಾದ  ಇದೇ ಆಗಸ್ಟ್. 15ರ ಶನಿವಾರ ಪಾಮ್ ಬೀಚ್ ರಸ್ತೆಯಲ್ಲಿ ಬೃಹತ್ ಮಾನವ ಸರಪಳಿ ಹಾಗೂ ಸಾಮೂಹಿಕ ವಂದೇ ಮಾತರಂ ಗಾಯನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಅಂದು ಬೆಳಿಗ್ಗೆ 10ರಿಂದ 11:30ರವರೆಗೆ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ನಾಗರಿಕರು ಹಾಗೂ ದೇಶಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಒಗ್ಗಟ್ಟಿನ ಧ್ವನಿಯಲ್ಲಿ ವಂದೇ ಮಾತರಂ ಗಾಯನ ಮಾಡುವ ಮೂಲಕ ರಾಷ್ಟ್ರೀಯ ಏಕತೆ, ಸಾಮಾಜಿಕ ಸಾಮರಸ್ಯ ಹಾಗೂ ವಿಶ್ವಶಾಂತಿಯ ಸಂದೇಶವನ್ನು ಸಾರಲಿದ್ದಾರೆ.

ಒಂದು ರಾಷ್ಟ್ರ  ಒಂದು ಧ್ವನಿ ಎಂಬ ಆಶಯದೊಂದಿಗೆ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಪಾಮ್ ಬೀಚ್ ರಸ್ತೆಯಲ್ಲಿ ಮಾನವ ಸರಪಳಿ ನಿರ್ಮಿಸಿ, ಸಾಮೂಹಿಕವಾಗಿ ವಂದೇ ಮಾತರಂ ಗಾಯನ ಮಾಡುವುದರ ಜೊತೆಗೆ ರಾಷ್ಟ್ರದ ಏಕತೆ, ಸಾಮಾಜಿಕ ಸೌಹಾರ್ದತೆ ಮತ್ತು ವಿಶ್ವಶಾಂತಿಗಾಗಿ ಪ್ರಾರ್ಥನೆ ಸಲ್ಲಿಸಲಾಗುವುದು. ತಾಯ್ನಾಡಿನ ಸೌಂದರ್ಯ, ಶಕ್ತಿ, ಸಮೃದ್ಧಿ ಹಾಗೂ ಅಮರ ಚೈತನ್ಯವನ್ನು ಕೊಂಡಾಡುವ ಈ ಪವಿತ್ರ ಗೀತೆಯೊಂದಿಗೆ ದೇಶಭಕ್ತಿಯ ಭಾವನೆಯನ್ನು ಮತ್ತೊಮ್ಮೆ ಜಾಗೃತಗೊಳಿಸುವುದು ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ.

ಆಗಸ್ಟ್ ೧೫ರಂದು ನಡೆಯಲಿರುವ ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ಎಲ್ಲರೂ ಕುಟುಂಬ ಸಮೇತರಾಗಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು, ತಮ್ಮ ಧ್ವನಿಯನ್ನು ದೇಶದ ಧ್ವನಿಯೊಂದಿಗೆ ಬೆರೆಸುವಂತೆ ವಂದೇ ಮಾತರಂ ಪ್ರತಿಷ್ಠಾನ, ನವಿಮುಂಬಯಿ ಮನವಿ ಮಾಡಿದೆ. ಕಾರ್ಯಕ್ರಮದ ಕುರಿತು ಹೆಚ್ಚಿನ ಮಾಹಿತಿಗಾಗಿ ಹಾಗೂ ಸ್ಥಳ ಕಾಯ್ದಿರಿಸಲು ನಿತ್ಯಾನಂದ ನಾಯ್ಡು (೯೬೯೯೧೫೫೧೮೯) ಅವರನ್ನು ಸಂಪರ್ಕಿಸಬಹುದು. ಸೀವೂಡ್ ಹಾಗೂ ನೆರೂಲ್ ಭಾಗದ ನಾಗರಿಕರು ಸೇರಿದಂತೆ ನವಿಮುಂಬಯಿ ಎಲ್ಲ ದೇಶಪ್ರೇಮಿಗಳು ಈ ರಾಷ್ಟ್ರಭಕ್ತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಆಯೋಜಕರಲ್ಲೋರ್ವರಾದ ಕೆ.ರಘುರಾಮ ಆಚಾರ್ಯ  ಈ ಮೂಲಕ ತಿಳಿಸಿದ್ದಾರೆ.

By Suddi9

Leave a Reply

Your email address will not be published. Required fields are marked *