ಬಂಟ್ವಾಳ:ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಪೂಜ್ಯ ಹೆಗ್ಗಡೆ ಅವರ ಆಶಯದಂತೆ ಜ್ಞಾನವಿಕಾಸ ಕಾರ್ಯಕ್ರಮದಡಿ ಪ್ರತಿ ತಿಂಗಳು ಮಹಿಳೆಯರಿಗೆ ಉಚಿತ ಆರೋಗ್ಯ ಮಾಹಿತಿ ನೀಡಲಾಗುತ್ತಿದೆ. ಅರೋಗ್ಯ ಸಂರಕ್ಷಣೆ ಬಗ್ಗೆ ಎಲ್ಲರೂ ಕಾಳಜಿ ವಹಿಸುವ ಅಗತ್ಯವಿದೆ ಎಂದು ಯೋಜನೆ ಜಿಲ್ಲಾ ನಿರ್ದೇಶಕ ದಿನೇಶ್ ಡಿ. ಹೇಳಿದ್ದಾರೆ.

ಇಲ್ಲಿನ ವಗ್ಗ ಸಮೀಪದ ಕಾಡಬೆಟ್ಟು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾನುವಾರ ಏರ್ಪಡಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಅವರು ಮಾತನಾಡಿದರು.
ಒಕ್ಕೂಟದ ಅಧ್ಯಕ್ಷ ಉಮೇಶ್ ಕಾರ್ಯಕ್ರಮ ದ ಅಧ್ಯಕ್ಷತೆ ವಹಿಸಿದ್ದರು.
ಕಾಡಬೆಟ್ಟು ಒಕ್ಕೂಟ ಮತ್ತು ಮಂಗಳೂರು ಕುಂಟಿಕಾನ ಎ. ಜೆ. ಆಸ್ಪತ್ರೆ ಸಹಭಾಗಿತ್ವದಲ್ಲಿ ನಡೆದ ಈ ಕಾರ್ಯಕ್ರಮಕ್ಕೆ ಕಾವಳ ಪಡೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪ್ರಮೋದ್ ಕುಮಾರ್ ರೈ ಕಾಡಬೆಟ್ಟು ಚಾಲನೆ ನೀಡಿ ಶುಭ ಹಾರೈಸಿದರು.

ಕಾರಿಂಜ ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವೀರೇಂದ್ರ ಅಮೀನ್, ಬಂಟ್ವಾಳ ಯೋಜನಾಧಿಕಾರಿ ಜಯಾನಂದ, ಹಾಸನ ಜಿಲ್ಲಾ ನಿರ್ದೇಶಕ ಮಹಾಬಲ ಕುಲಾಲ್, ಡಾ ಶ್ರೇಯಸ್, ಜನಜಾಗೃತಿ ಸದಸ್ಯ ಪ್ರವೀಣ್, ವಗ್ಗ ವಲಯ ಮೇಲ್ವಿಚಾರಕ ಸುರೇಶ್, ಜ್ಞಾನ ದೀಪ ಶಿಕ್ಷಕಿ ಹರಿಣಾಕ್ಷಿ, ಒಕ್ಕೂಟ ಮತ್ತು ಶೌರ್ಯ ಘಟಕದ ಸದಸ್ಯರು ಇದ್ದರು.
ಇದೇ ವೇಳೆ 100ಕ್ಕೂ ಮಿಕ್ಕಿ ಮಂದಿ ಅರೋಗ್ಯ ತಪಾಸಣೆ ಮಾಡಿಕೊಂಡರು.
ಸೇವಾ ಪ್ರತಿನಿಧಿ ರೇಖಾ ಪ್ರಾರ್ಥಿಸಿ, ಲೀಲಾವತಿ ಸ್ವಾಗತಿಸಿದರು. ಶಿಕ್ಷಕ ರಾಮಕೃಷ್ಣ ಪ್ರಭು ವಂದಿಸಿದರು. ಜ್ಞಾನ ವಿಕಾಸ ಸಮನ್ವಯ ಅಧಿಕಾರಿ ಸವಿತಾ ಕಾರ್ಯಕ್ರಮ ನಿರೂಪಿಸಿದರು.
