
ಬಂಟ್ವಾಳ: ವಿಕಸಿತ ಭಾರತ ಉದ್ಯೋಗ ಖಾತರಿ ಮತ್ತು ಜೀವನೋಪಾಯ ಮಿಷನ್ (ಎಬಿ-ಜಿ-ರಾಮ್-ಜಿ)ಯೋಜನೆಯಿಂದಾಗಿ ಗ್ರಾಮ ಪಂಚಾಯಿತ್ ನ ಅಧಿಕಾರ ಮತ್ತಷ್ಟು ಬಲಗೊಳ್ಳುತ್ತದೆ, ಈ ಯೋಜನೆಯ ಬಗ್ಗೆ ಕಾಂಗ್ರೆಸ್ ಪಕ್ಷ ಅಪಪ್ರಚಾರ ನಡೆಸುವ ಮೂಲಕ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದೆ ಎಂದು
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ ಉಳಿಪ್ಪಾಡಿ ಹೇಳಿದ್ದಾರೆ. ಶನಿವಾರ ಬಿ.ಸಿ.ರೋಡಿನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಯೋಜನೆಯಿಂದ ಗ್ರಾಮ ಪಂಚಾಯಿತಿಯ ಸ್ವಾಯತ್ತೆ ಮೊಟಕುಗೊಳಿಸುವ ವಿಷಯವೇ ಇಲ್ಲ ಎಂದು ಸ್ಪಷ್ಟಪಡಿಸಿದರು ಗ್ರಾಮಗಳಲ್ಲಿ ಶಾಶ್ವತ ಆಸ್ತಿ ನಿರ್ಮಾಣ, ಮಹಿಳೆಯರು ಮತ್ತು ಯುವಕರಿಗೆ ಉದ್ಯೋಗ ಸೃಷ್ಟಿ, ಕೇಂದ್ರ ಮತ್ತು ರಾಜ್ಯ ಸಹಕಾರದೊಂದಿಗೆ ಬಲಿಷ್ಠ ಹಣಕಾಸು ವ್ಯವಸ್ಥೆ, ಉದ್ಯೋಗದೊಂದಿಗೆ ಕೌಶಲ್ಯಾಭಿವೃದ್ಧಿಯೊಂದಿಗೆ ಗ್ರಾಪಂಗಳಿಗೆ ಸಶಕ್ತ ಅಧಿಕಾರ ನಿರ್ಮಾಣ ಇದರ ಗುರಿಯಾಗಿದ್ದು, ರಾಜ್ಯಗಳ ಆರ್ಥಿಕ ಹೊಡೆತವಾಗುತ್ತಿದೆ ಎಂಬುದು ಶುದ್ಧ ಸುಳ್ಳು, ಕೇಂದ್ರದ ಕೊಡುಗೆ ಇನ್ನೂ ಹೆಚ್ಚಲಿದೆ ಎಂದರು. ಯುಪಿಎ ಸರಕಾರ ಇದ್ದಾಗಲೇ ಇದನ್ನು ಆಗಿನ ಕೇಂದ್ರ ಕೃಷಿ ಸಚಿವ ಶರದ್ ಪವಾರ್ ಕೃಷಿ ಕ್ಷೇತ್ರಕ್ಕೆ ಒತ್ತು ನೀಡುವ ಕುರಿತು ಪ್ರಸ್ತಾವಿಸಿದ್ದರು ಎಂದ ಶಾಸಕರು, ಯೋಜನೆ ದುರುಪಯೋಗ ವಾಗುವುದನ್ನು ತಡೆಯಲು ಮತ್ತು ಆರ್ಹ ಫಲಾನುಭವಿಗಳಿಗೆ ಪ್ರಯೋಜನವಾಗುವ ನಿಟ್ಟಿನಲ್ಲಿ ಮಾರ್ಪಾಡು ಮಾಡಲಾಗಿದೆ. ಈಗಾಗಲೇ ಹಲವು ಬಾರಿ ಯೋಜನೆಯ ಹೆಸರು ಬದಲಾವಣೆ ಯಾಗಿದ್ದು, ಪ್ರತಿಪಕ್ಷಗಳು ವಿನಾ ಕಾರಣ ಆರೋಪ ಮಾಡುತ್ತಿವೆ ಎಂದರು. 2013 ರ ಸಿಎಜಿ ವರದಿಯನ್ವಯ ಈ ಯೋಜನೆಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಉಲ್ಲೇಖಿಸಲಾಗಿದ್ದು, 4.33 ಲಕ್ಷಕ್ಕೂ ಹೆಚ್ಚು ನಕಲಿ ಜಾಬ್ ಕಾರ್ಡ್ಗಳನ್ನು ಗುರುತಿಸಿತ್ತು.ಭ್ರಷ್ಟಾಚಾರ ಮತ್ತು ಹಣದ ಸೋರಿಕೆಯನ್ನು ತಡೆಯುವ ನಿಟ್ಟಿನಲ್ಲಿ ಕೇಂದ್ರಸರಕಾರ ಈ ಯೋಜನೆಗೆ ಅಮೂಲಾಗ್ರ ಬದಲಾವಣೆ ತಂದಿದೆ ಎಂದರು. ಕೆಲಸದ ಅವಧಿ ಹೆಚ್ಚಳ ಮಾಡುವ ಹಾಗೂ ಹೆಚ್ಚು ಸಂಪಾದನೆ ನೀಡುವ ಯೋಜನೆಯಿಂದ ಕಾಂಗ್ರೆಸ್ ಗೆ ಯಾಕೆ ಸಮಸ್ಯೆಯಾಗುತ್ತಿದೆ ಎಂದು ಅವರು ಪ್ರಶ್ನಿಸಿದ ಅವರು ರಾಮನ ಹೆಸರು ಬಂದಿರುವುದು ಕಾಂಗ್ರೆಸ್ ಗೆ ಅಲರ್ಜಿಯಾಗಿ ಕಾಣಿಸಿದೆ ಎಂದು ಶಾಸಕ ರಾಜೇಶ್ ನಾಯ್ಕ್ ಹೇಳಿದರು. ರಾಜ್ಯ ಸರ್ಕಾರದ 27 ಯೋಜನೆಗಳು ರಾಜೀವ್ ಗಾಂಧಿ, ಇಂದಿರಾ ಗಾಂಧಿ ಹೆಸರಿನಲ್ಲಿವೆ,ಹಲವಾರು ಶಿಕ್ಷಣ ಸಂಸ್ಥೆ ,ಕ್ರೀಡೆ ಅಥವಾ ಟೂರ್ನ್ ಮೆಂಟ್ , ರಸ್ತೆ, ಕಟ್ಟಡಗಳು ಕೂಡ ಗಾಂಧಿ ಕುಟುಂಬದ ಹೆಸರಿನಲ್ಲಿರುವುದರಿಂದಮಹಾತ್ಮಗಾಂಧಿ ಹೆಸರಿನ ಬಗ್ಗೆ ಪ್ರಶ್ನಿಸುವ ನೈತಿಕತೆ ಕಾಂಗ್ರೆಸ್ ಗೆ ಇಲ್ಲ ಎಂದರು. ಬಿಜೆಪಿ ಕ್ಷೇತ್ರ ಅಧ್ಯಕ್ಷ ಆರ್.ಚೆನ್ನಪ್ಪ ಕೋಟ್ಯಾನ್ ಮಾತನಾಡಿಶೀಘ್ರದಲ್ಲೇ ಕ್ಷೇತ್ರದ ಪ್ರತಿಗ್ರಾ.ಪಂ.ವ್ಯಾಪ್ತಿಯಲ್ಲಿ ಪಕ್ಷದ ವತಿಯಿಂದ ಈ ಯೋಜನೆಯ ಬಗ್ಗೆ ಅರಿವು ಮೂಡಿಸುವ ಕಾರ್ಯ ನಡೆಸಲಾಗುವುದು ಎಂದರು. ಬಂಟ್ವಾಳ ಕ್ಷೇತ್ರದಲ್ಲಿ ಸುಮಾರು 25 ಕ್ಕು ಹೆಚ್ಚು ಗ್ರಾ.ಪಂ.ಗಳಲ್ಲಿ ಎಬಿ-ಜಿ-ರಾಮ್-ಜಿ ಯೋಜನೆಯ ಪರವಾಗಿ ನಿರ್ಣಯವನ್ನು ತೆಗೆದು ಕೊಂಡಿದ್ದು,ಕೆಲ ಗ್ರಾ.ಪಂ.ವ್ಯಾಪ್ತಿಯಲ್ಲು ಜನರು ಈ ಯೋಜನೆಯ ಪರವಾಗಿದ್ದಾರೆ.ಬೆರಳೆಣಿಕೆಯ ಗ್ರಾ.ಪಂ.ಗಳು ಮಾತ್ರ ತೋರಿಕೆಗೆ ವಿರೋಧ ವ್ಯಕ್ತಪಡಿಸಿದೆ ಎಂದರು.
ರಾಜ್ಯ ಮುಖಂಡ ವಿಕಾಸ್ ಪುತ್ತೂರು ಮಾತನಾಡಿ, ಇತ್ತೀಚಿಗೆ ಹೊರಬಿದ್ದಿರುವ ಸಮೀಕ್ಷೆಯಿಂದ ಕಾಂಗ್ರೆಸ್ ಪಕ್ಷ ವಿಚಲಿತವಾದದ್ದರಿಂದಲೇ ಈ ರೀತಿ ಆಪಾದನೆಗಳನ್ನು ಮಾಡಿ ಅರಾಜಕತೆ ಸೃಷ್ಠಿಸಲು ಯತ್ನಿಸುತ್ತಿದೆ ಇದರಲ್ಲಿ ಅವರು ಯಶಸ್ವಿಯಾಗುವುದಿಲ್ಲ ಎಂದರು.
ಮಹಾತ್ಮಾ ಗಾಂಧೀಜಿ ಅವರು ಗೋಹತ್ಯೆ ಮಹಾಪಾಪ ಎಂದಿದ್ದರು, ಬಿಜೆಪಿ ಸರಕಾರ ಗೋಹತ್ಯೆ ನಿಷೇಧ ಕಾಯ್ದೆ ತಂದದ್ದನ್ನು ಏಕೆ ವಿರೋಧಿಸಿದರು ಎಂದು ಪ್ರಶ್ನಿಸಿದ ಅವರು, ಕಾಂಗ್ರೆಸ್ ಗೆ ಗಾಂಧೀಜಿ, ಅಂಬೇಡ್ಕರ್ ಹೆಸರು ಹೇಳುವ ಯೋಗ್ಯತೆ ಇಲ್ಲ, ಅರಾಜಕತೆ ಮೂಡಿಸುವ ಸಲುವಾಗಿ ಈ ರೀತಿ ಮಾಡುತ್ತಿದೆ,
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ರಾಕೇಶ್ ರೈ ಕಡೆಂಜಿ, ಜಿಲ್ಲಾ ಕಾರ್ಯದರ್ಶಿ ದೇವಪ್ಪ ಪೂಜಾರಿ, ಕ್ಷೇತ್ರ ಪ್ರಧಾನ ಕಾರ್ಯದರ್ಶಿಗಳಾದ ಶಿವಪ್ರಸಾದ್ ಶೆಟ್ಟಿ, ಸುದರ್ಶನ ಬಜ ಮೊದಲಾದವರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

