ಬಂಟ್ವಾಳ : ಬಿ.ಸಿ.ರೋಡಿನಲ್ಲಿರುವ ಬಂಟ್ವಾಳ ತಾಲೂಕು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನಿ.ದ ( ಬಂಟ್ವಾಳ ಭೂ ಅಭಿವೃದ್ದಿ ಬ್ಯಾಂಕ್)2024-25 ನೇ ಸಾಲಿನಲ್ಲಿ 98 ಕೋಟಿ ವ್ಯವಹಾರವನ್ನು ನಡೆಸಿ,40.06 ಲಕ್ಷ ರೂ.ನಿವ್ವಳ ಲಾಭಗಳಿಸಿದೆ ಎಂದು ಬ್ಯಾಂಕಿನ ಆಡಳಿತಾಧಿಕಾರಿ ತ್ರಿವೇಣಿ ರಾವ್ ತಿಳಿಸಿದ್ದಾರೆ.
ಬುಧವಾರ ಬಿ.ಸಿ.ರೋಡಿನ “ಗೀತಾಂಜಲಿ ಕಲ್ಯಾಣ ಮಂಟಪ”ದಲ್ಲಿ ನಡೆದ 2024-25ನೇ ಸಾಲಿನ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು,ಬ್ಯಾಂಕಿನ ಸದಸ್ಯರಿಗೆ ಶೇ. 7.50 ಡಿವಿಡೆಂಡ್ನ್ನು ಘೋಷಿಸಿದರು.

ಬ್ಯಾಂಕ್ 2025 ರ ಮಾಚ್೯ ಅಂತ್ಯಕ್ಕೆ 53.59 ಲಕ್ಷ ರೂ.ಕ್ಷೇಮ ನಿಧಿ, 177.89 ಲಕ್ಷ ರೂ. ಇತರ ನಿಧಿ ಹಾಗೂ 1902.52 ಲಕ್ಷ ರೂ. ಠೇವಣೆಯನ್ನು ಹೊಂದಿರುತ್ತದೆ.ಕ ರಾ. ಸ. ಕೃ ಮತ್ತು ಗ್ರಾ. ಅ. ಬ್ಯಾಂಕ್ ನಿಂದ ಪಡೆದ 1181.32 ಲಕ್ಷರೂ.
ಸಾಲ ಹೊರಬಾಕಿ ಇದ್ದು,2025 ಮಾಚ್೯ ಅಂತ್ಯಕ್ಕೆ ಸಂದಾಯವಾಗಬೇಕಿದ್ದ ಕ.ನಾ.ಸ.ಕೃ ಮತ್ತು ಗ್ರಾ.ಆ.ಬ್ಯಾಂಕಿನ ತಗಾದೆಯನ್ನು ಸಂಪೂರ್ಣ ಮರುಪಾವತಿಸಲಾಗಿದೆ ಎಂದರು.
ಪ್ರಸ್ತುತ ಸಾಲಿನಲ್ಲಿ 425.12 ಲಕ್ಷ ರೂ.ವಸೂಲಿ ತಗಾದೆ ಹೊಂದಿದ್ದು, ಈ ಪೈಕಿ 385.75 ಲಕ್ಷ ರೂ. ವಸೂಲಿ ಮಾಡಿ ಶೇ.90.74 ವಸೂಲಾತಿ ಸಾಧನೆ ಮಾಡಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾಲ ವಸೂಲಾತಿಯಲ್ಲಿ ಪ್ರಥಮ ಸ್ಥಾನ ಪಡೆದಿದೆ ಎಂದು ಆಡಳಿತಾಧಿಕಾರಿ ತ್ರಿವೇಣಿರಾವ್ ಹೇಳಿದರು.
ಬ್ಯಾಂಕಿನ ವ್ಯವಸ್ಥಾಪಕ ಕುಮಾರ ಮುಟಗಾರ್ ಅವರು ಗತವರ್ಷದ ವರದಿಯನ್ನು ವಾಚಿಸಿದರು.
