ಬಂಟ್ವಾಳ: ಸಾರ್ವಜನಿಕ ಶ್ರೀ ಗಣೇಶೋತ್ಸವ ಆಚರಣಾ ಸಮಿತಿ ಜಕ್ರಿಬೆಟ್ಟು ಇದರ ವತಿಯಿಂದ ಬಂಟ್ವಾಳದ ಜಕ್ರಿಬೆಟ್ಟುವಿನಲ್ಲಿ ಆರಾಧಿಸಲ್ಪಟ್ಟ 22 ನೇ ವರ್ಷದ  ಶ್ರೀಗಣೇಶೋತ್ಸವ ಸಂಭ್ರಮಕ್ಕೆ ಭಾನುವಾರ ರಾತ್ರಿ ತೆರೆ ಬಿದ್ದಿದೆ.
ಐದುದಿನಗಳ ಕಾಲ ವಿವಿಧ ವೈಧಿಕ,ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಎಲ್ಲಾ ವರ್ಗದ ಜನರ ಕೂಡುವಿಕೆಯಲ್ಲಿ “ಬಂಟ್ವಾಳ ಹಬ್ಬ” ವಾಗಿ ಆಚರಿಸಲ್ಪಟ್ಟಿತು.


ಸಂಜೆ ನಿಗದಿತ ಸಮಯಕ್ಕೆ ಶ್ರೀಗಣೇಶ ವಿಗ್ರಹಕ್ಕೆ  ವಿಸರ್ಜನಾ ಪೂಜೆ ನೆರವೇರಿದ ಬಳಿಕ ಸಭಾಮಂಟಪದಿಂದ ವೈಭವಪೂರ್ಣವಾದ ಶೋಭಾಯಾತ್ರೆಗೆ ಚಾಲನೆ ನೀಡಲಾಯಿತು.ಶ್ರೀಗಣೇಶನ ಮೆರವಣಿಗೆಯು ಜಕ್ರಿಬೆಟ್ಟುವಿನಿಂದ ನೇರವಾಗಿ ಬಂಟ್ವಾಳ ಬೈಪಾಸ್ ಜಂಕ್ಷನ್ ವರೆಗೆ ಸಾಗಿ ಬಂದು,ಅಲ್ಲಿಂದ ಎಡಕ್ಕೆ ತಿರುಗಿ ಬಂಟ್ವಾಳ ಪೇಟೆಯನ್ನು ಪ್ರವೇಶಿಸಿ ತ್ಯಾಗರಾಜರಸ್ತೆಯ ಮೂಲಕ ಶ್ರೀ ತಿರುಮಲ ವೆಂಕಟರಮಣ ದೇವಾಲಯದ ಮುಂಭಾಗದಲ್ಲಿ ಹರಿಯುವ ನೇತ್ರಾವತಿ ನದಿಯಲ್ಲಿ ಜಲಸ್ತಂಭನಗೊಳಿಸಲಾಯಿತು.


ವಿವಿಧ ಸಂಘಸಂಸ್ಥೆಗಳ ಟ್ಯಾಬ್ಲೋ,ಸ್ತಬ್ದಚಿತ್ರ,ಕಲ್ಲಡ್ಕ ಶಿಲ್ಪಾಬಳಗ ಗೊಂಬೆಕುಣಿತ,ಹುಲಿ ವೇಷದ ಅಬ್ಬರ,ಮಕ್ಕಳ ಕುಣಿತ ಭಜನೆ, ತಾಲೀಮು ಪ್ರದರ್ಶನ ,ನಾಸಿಕ್ ಬ್ಯಾಂಡ್,ಪ್ರೇತ ನೃತ್ಯ ಶೋಭಾಯಾತ್ರೆಗೆ ವಿಶೇಷ ಮೆರಗು ನೀಡಿತು.ದಾರಿಯುದ್ದಕ್ಕು ಭಕ್ತರು ಶ್ರೀಗಣೇಶನಿಗೆ ಹಣ್ಣುಕಾಯಿ,ಆರತಿ ಸಮರ್ಪಿಸಿ  ಪುನೀತರಾದರು.


ತಡರಾತ್ರಿವರೆಗೂ ವೈಭವಯುತವಾಗಿ ಮತ್ತು ಭಕ್ತ ಸಮೂಹ ಸಂಭ್ರಮದಿಂದ ಪಾಲ್ಗೊಳ್ಳುತ್ತಿದ್ದ  ಜಕ್ರಿಬೆಟ್ಟು ಶ್ರೀಗಣೇಶೋತ್ಸವದ ಶೋಭಾಯಾತ್ರೆ ಪೊಲೀಸರ ಸೂಚನೆಯ ಹಿನ್ನಲೆಯಲ್ಲಿ ಇದೇ ಮೊದಲಬಾರಿಗೆ ಕತ್ತಲಾಗುತಿದ್ದಂತೆ ಆರಂಭಗೊಂಡಿತ್ತು.


ಗಣೇಶೋತ್ಸವದ ಪ್ರತಿದಿನ ಮಧ್ಯಾಹ್ನ ಮಹಾಪೂಜೆಯ ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ರಾತ್ರಿವರೆಗೂ ನಿರಂತರವಾಗಿ ನಡೆಯುತ್ತಿರುವುದು ಇಲ್ಲಿನ ವಿಶೇಷತೆಯಾಗಿದೆ.ವಿಗ್ರಹ ರಚನೆಗಾರ ಬಿ. ಸದಾಶಿವ ಶೆಣೈ ಮತ್ತವರ ಬಳಗ ಶ್ರೀಗಣೇಶನ ವಿಗ್ರಹಕ್ಜೆ ಹೂವಿನಾಲಂಕಾರದ ಅಂತಿಮ ಸ್ಪರ್ಶ ನೀಡಿದರು.ವೇ.ಮೂ.ಸುದರ್ಶನ್ ಬಲ್ಲಾಳ್ ಪೌರೋಹಿತ್ಯ ನೆರವೇರಿಸಿದರು.


ಸಮಿತಿಯ ಗೌರಾವಾಧ್ಯಕ್ಷ,ಮಾಜಿ ಸಚಿವ ಬಿ.ರಮಾನಾಥ ರೈ, ಅಧ್ಯಕ್ಷ ಪದ್ಮಶೇಖರ ಜೈನ್ ,ಪದಾಧಿಕಾರಿಗಳಾದ ರಾಜೀವ ಶೆಟ್ಟಿ ಎಡ್ತೂರು,ಚಂದ್ರಪ್ರಕಾಶ್ ಶೆಟ್ಟಿ,ಬೇಬಿಕುಂದರ್,ಮಹಾಬಲ ಬಂಗೇರ, ಪ್ರಕಾಶ್ ಜೈನ್ ಪಂಜಿಕಲ್ಲು,ಸುದೀಪ್ ಕುಮಾರ್ ಶೆಟ್ಟಿ,ಪಿ.ಪ್ರವೀಣ್ ಕಿಣಿ,ಚಂದ್ರಶೇಖರ ಭಂಡಾರಿ, ಬಾಲಕೃಷ್ಣ ಆರ್.ಅಂಚನ್,ದೇವಪ್ಪಕುಲಾಲ್,ವೆಂಕಪ್ಪಪೂಜಾರಿ ಬಂಟ್ವಾಳ ಮೊದಲಾದವರು ಮೆರವಣಿಗೆಯ ನೇತೃತ್ವ ವಹಿಸಿದ್ದರು.ಅಲ್ಲಲ್ಲಿ ಸುಡುಮದ್ದಿನ ಪ್ರದರ್ಶನವು ನಡೆಯಿತು.ಸಾವಿರಾರು ಭಕ್ತರು ರಸ್ತೆಯ ಇಕ್ಕೆಲಗಳಲ್ಲಿ ನಿಂತು ಶೊಇಭಾಯಾತ್ರೆಯನ್ನು‌ ಕಣ್ತುಂಬಿಕೊಂಡರು.

By suddi9

Leave a Reply

Your email address will not be published. Required fields are marked *