ಬಂಟ್ವಾಳ: ತುಳುನಾಡಿನ ಕೃಷಿಕರು ಆಟಿ ತಿಂಗಳ ಮಳೆಯ ನಡುವೆ ಆಹಾರ ಕೊರತೆ ನಿವಾರಿಸಲು ಕಂಡುಕೊಂಡ ಕಾಡಿನ ಗೆಡ್ಡೆ ಗೆಣಸು ಸೇರಿದಂತೆ ವಿವಿಧ ಸೊಪ್ಪು ಮತ್ತು ಹಣ್ಣು ಹಂಪಲು ಸೇವನೆ ಮತ್ತಿತರ ಆಹಾರ ಪದ್ಧತಿಯು ವೈಜ್ಞಾನಿಕವಾಗಿಯೂ ಆರೋಗ್ಯಪೂರ್ಣವಾಗಿದೆ ಎಂದು ಬಂಟ್ವಾಳತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ, ಪತ್ರಕರ್ತ ಜಯಾನಂದ ಪೆರಾಜೆ ಹೇಳಿದ್ದಾರೆ.

ಇಲ್ಲಿನ ಲೊರೆಟ್ಟೊ ಹಿಲ್ಸ್ ರೋಟರಿ ಕ್ಲಬ್ ವತಿಯಿಂದ ಬುಧವಾರ ಸಂಜೆ ನಡೆದ ‘ಆಟಿದ ಕೂಟ’ ಕಾರ್ಯಕ್ರಮದಲ್ಲಿ ಅವರು ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು. ರೋಟರಿ ಸಹಾಯಕ ಗವರ್ನರ್ ಉಮೇಶ್ ರಾವ್ ಮಿಜಾರು ಕಾರ್ಯಕ್ರಮ ಉದ್ಘಾಟಿಸಿ ಶುಭಹಾರೈಸಿದರು.
ಕ್ಲಬ್ಬಿನ ವಲಯ ಸೇನಾನಿ ರಾಮಚಂದ್ರ ಶೆಟ್ಟಿಗಾರ್ ಅಣ್ಣಳಿಕೆ, ಸ್ಥಾಪಕಾಧ್ಯಕ್ಷ ಅವಿಲ್ ಮಿನೇಜಸ್, ಮಾಜಿ ಅಧ್ಯಕ್ಷ ಎಂ.ಪದ್ಮರಾಜ ಬಲ್ಲಾಳ್ ವೇದಿಕೆಯಲ್ಲಿದ್ದರು.
ಇದೇ ವೇಳೆ ನೂತನ ಸದಸ್ಯರಾಗಿ ಕ್ಲಾರೆಟ್ ಡಿಸೋಜ ಇವರು ಕ್ಲಬ್ಬಿಗೆ ಸೇರ್ಪಡೆಗೊಂಡರು. ಕ್ಲಬ್ಬಿನ ಸದಸ್ಯ ಉಜಿರೆ ಪ್ರವೀಣ್ ಹಳ್ಳಿಮನೆ ಇವರು ತುಳುನಾಡಿನ ಕೃಷಿ ಪರಿಕರಗಳನ್ನು ಪ್ರದರ್ಶಿಸಿದರು. ಕ್ಲಬ್ಬಿನ ಮಾಜಿ ಅಧ್ಯಕ್ಷರಾದ ಸುರೇಶ ಶೆಟ್ಟಿ ಸಿದ್ಧಕಟ್ಟೆ, ಆಂಟೊನಿ ಸಿಕ್ವೇರ, ರಾಘವೇಂದ್ರ ಬಲ್ಲಾಳ್, ಶ್ರುತಿ ಮಾಡ್ತಾ ಮತ್ತಿತರರಿದ್ದರು.
ಕ್ಲಬ್ಬಿನ ಅಧ್ಯಕ್ಷ ವಿಜಯ ಫೆರ್ನಾಂಡಿಸ್ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಕಾರ್ಯದರ್ಶಿ ಮೋಹನ್ ಕೆ.ಶ್ರೀಯಾನ್ ರಾಯಿ ವಂದಿಸಿದರು. ಸದಸ್ಯರಾದ ನೆಲ್ಸನ್ ಮೋನಿಸ್ ಮತ್ತು ಕೆ.ರಮೇಶ ನಾಯಕ್ ಕಾರ್ಯಕ್ರಮ ನಿರೂಪಿಸಿದರು.
