ಬಂಟ್ವಾಳ:ತುಂಬೆ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿ ಪಾರ್ಲಿಮೆಂಟ್ ಉದ್ಘಾಟನೆ ನಾಯಕ,ನಾಯಕಿಯರು ಮತ್ತು ಮಂತ್ರಿ ಮಂಡಲದ ಸದಸ್ಯರಿಗೆ ಬ್ಯಾಡ್ಜ್ ವಿತರಣಾ ಸಮಾರಂಭ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.
ಮೆಲ್ಕಾರ್ ಮಹಿಳಾ ಕಾಲೇಜಿನ ಪ್ರಾಂಶುಪಾಲರು,ಸಮನ್ವಯ ಸಂಸ್ಥೆಯ ಜಿಲ್ಲಾಧ್ಯಕ್ಷರಾದ ಅಬ್ದುಲ್ ಮಜೀದ್ ಎಸ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ,ಶ್ರದ್ಧೆ ಮತ್ತು ನಿಷ್ಠೆಯಿಂದ ನಿತ್ಯದ ಕರ್ತವ್ಯಗಳನ್ನು ನಿಭಾಯಿಸಿ ಮುನ್ನಡೆದಾಗ ಗುರಿ ತಲುಪಿ ಸಾಧಕನಾಗಲು ಸಾಧ್ಯ ಎಂದರು.

ಶಾಲಾ ನೂತನ ನಾಯಕ ನಾಯಕಿಯರನ್ನು ಅಭಿನಂದಿಸಿದ ಅವರು ವಿದ್ಯಾರ್ಥಿಗಳು ವಿಪರೀತವಾದ ಮೊಬೈಲ್ ಬಳಕೆ,ವಿನಾಕಾರಣ ಸುತ್ತಾಟ,ಅಪ್ರಾಪ್ತ ವಯಸ್ಸಿನಲ್ಲಿ ವಾಹನ ಚಲಾವಣೆ,ದುಶ್ಚಟಗಳ ದಾಸರಾಗುವುದು ಇತ್ಯಾದಿಗಳಿಂದ ಮೊದಲು ದೂರವಿರಬೇಕು ಎಂದು ಕಿವಿಮಾತು ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜು ಪ್ರಾಂಶುಪಾಲ ವಿ.ಎಸ್.ಭಟ್ ಮಾತನಾಡಿ ಗುರು ಹಿರಿಯರ ಮಾರ್ಗದರ್ಶನದಲ್ಲಿ ಏನನ್ನು ಬೇಕಿದ್ದರೂ ಸಾಧಿಸಬಹುದು.ಈ ನಿಟ್ಟಿನಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯೂ ಯೋಚನೆ ಮಾಡಿ ಮುನ್ನಡೆದರೆ ನಾವು ಸುಸ್ಥಿರ ಮತ್ತು ಒಳ್ಳೆಯ ಸಮಾಜವನ್ನು ನಿರ್ಮಾಣ ಮಾಡಲು ಸಾಧ್ಯ ಎಂದರು.
ಉಪನ್ಯಾಸಕ,ವಿದ್ಯಾರ್ಥಿ ಪಾರ್ಲಿಮೆಂಟ್ ನಿರ್ದೇಶಕ ದಿನೇಶ ಶೆಟ್ಟಿ ಅಳಿಕೆ ಸ್ವಾಗತಿಸಿ ಪ್ರಸ್ತಾವನೆ ಗೈದರು.
ವಿದ್ಯಾರ್ಥಿ ನಾಯಕ ಮೊಹಮ್ಮದ್ ಮಿಶಾಲ್,ವಿದ್ಯಾರ್ಥಿ ನಾಯಕಿ ಸೆಕ್ರೆಟರಿ ಆಝ್ಮೀ ಸನೋಬರ್,ವಿದ್ಯಾರ್ಥಿ ಮಂತ್ರಿ ಮಂಡಲ,ವಿರೋಧ ಪಕ್ಷದ ಸದಸ್ಯರು ಉಪಸ್ಥಿತರಿದ್ದರು.
ಪಾರ್ಲಿಮೆಂಟ್ ನ ಸಹನಿರ್ದೇಶಕ, ಉಪನ್ಯಾಸಕ ಚೇತನ್ ಕುಮಾರ್ ಕದ್ರಿ ಕಾರ್ಯಕ್ರಮ ನಿರೂಪಿಸಿದರು, ಉಪನ್ಯಾಸಕಿ ಕವಿತಾ ಕೆ ವಂದಿಸಿದರು.
