ಬೆಂಗಳೂರು: ಅತ್ಯಾಚಾರ ಆರೋಪ ಎದುರಿಸುತ್ತಿರುವ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮೀಜಿಗಳಿಗೆ 13 ಪರೀಕ್ಷೆಗಳನ್ನು ನಡೆಸಲಾಗಿದ್ದು, ಅವರು ಆಸ್ಪತ್ರೆಯಿಂದ ಆಶ್ರಮಕ್ಕೆ ತೆರಳಿದ್ದಾರೆ. ಮೂರು ಪರೀಕ್ಷೆಗಳನ್ನು ಮಾಡಲು ಶ್ರೀಗಳು ಒಪ್ಪಿಗೆ ನೀಡಿಲ್ಲ ಎಂದು ಡಾ.ದುಗ್ಗಪ್ಪ ಹೇಳಿದ್ದಾರೆ.
ಶುಕ್ರವಾರ ಬೆಳಗ್ಗೆ 8 ಗಂಟೆಗೆ ರಾಘವೇಶ್ವರ ಶ್ರೀಗಳು ಸುಮಾರು 10 ಶಿಷ್ಯರೊಂದಿಗೆ ವೈದ್ಯಕೀಯ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ಆಗಮಿಸಿದ್ದರು. ಮಧ್ಯಾಹ್ನ 12.45ರ ಸುಮಾರಿಗೆ ಅವರು ಪರೀಕ್ಷೆಗಳನ್ನು ಮುಗಿಸಿ ಆಸ್ಪತ್ರೆಯಿಂದ ಆಶ್ರಮಕ್ಕೆ ಮರಳಿದ್ದಾರೆ. ಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ವಿಕ್ಟೋರಿಯಾ ಆಸ್ಪತ್ರೆ ಅಧೀಕ್ಷಕರಾದ ಡಾ.ದುಗ್ಗಪ್ಪ ಅವರು, ಶ್ರೀಗಳಿಗೆ ಒಟ್ಟು 16 ವಿವಿಧ ಪರೀಕ್ಷೆಗಳನ್ನು ಮಾಡಬೇಕಾಗಿತ್ತು. ಶ್ರೀಗಳು ಒಪ್ಪಿಗೆ ನೀಡದ ಕಾರಣ 13 ಪರೀಕ್ಷೆಗಳನ್ನು ನಡೆಸಲಾಗಿದೆ ಎಂದರು.
ಶ್ರೀಗಳ ಡಿಎನ್ಎ ಪರೀಕ್ಷೆ ಮಾಡಲು ಸಿಐಡಿ ಮನವಿ ಮಾಡಿತ್ತು. ಇದಕ್ಕಾಗಿ 16 ಬಗೆಯ ಪರೀಕ್ಷೆಗಳನ್ನು ಮಾಡಬೇಕಾಗಿತ್ತು. ಆದರೆ, ಶ್ರೀಗಳು 13 ಪರೀಕ್ಷೆಗಳಿಗೆ ಮಾತ್ರ ಒಪ್ಪಿಕೊಂಡರು. ಬಲವಂತವಾಗಿ ಉಳಿದ ಪರೀಕ್ಷೆಗಳನ್ನು ಮಾಡಲು ಸಾಧ್ಯವಿಲ್ಲ. ಆದ್ದರಿಂದ ಹದಿಮೂರು ಪರೀಕ್ಷೆಗಳನ್ನು ನಡೆಸಲಾಗಿದೆ ಎಂದು ದುಗ್ಗಪ್ಪ ಅವರು ಹೇಳಿದರು.
ಡಾ.ದುಗ್ಗಪ್ಪ, ಡಾ.ವೆಂಕಟರಾಘವ್, ಡಾ.ಚಂದ್ರಶೇಖರ್, ಡಾ.ಚಂದ್ರಶೇಖರ್ ಪಿಳ್ಳೈ, ಡಾ.ವೀರಣ್ಣಗೌಡ ಅವರ ಐದು ಜನರ ತಂಡ ಪರೀಕ್ಷೆಗಳನ್ನು ನಡೆಸಿದ್ದು, ವರದಿಯನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಅಲ್ಲಿಂದ ವರದಿ ಬಂದ ನಂತರ ಸಿಐಡಿಗೆ ಹಸ್ತಾಂತರಿಸಲಾಗುತ್ತದೆ ಎಂದು ದುಗ್ಗಪ್ಪ ಅವರು ಮಾಹಿತಿ ನೀಡಿದರು.
ತೀರ್ಪಿನ ಪ್ರತಿ ಸಿಕ್ಕಿರಲಿಲ್ಲ : ವೈದ್ಯಕೀಯ ಪರೀಕ್ಷೆ ನಡೆಸುವ ಬಗ್ಗೆ ಬುಧವಾರ ಹೈಕೋರ್ಟ್ ನೀಡಿದ ತೀರ್ಪಿನ ಪ್ರತಿ ನಮಗೆ ಸಿಕ್ಕಿರಲಿಲ್ಲ. ಆದ್ದರಿಂದ ಗುರುವಾರ ವೈದ್ಯಕೀಯ ಪರೀಕ್ಷೆಗೆ ಹಾಜರಾಗಲಿಲ್ಲ ಎಂದು ಶ್ರೀಗಳ ಪರ ವಕೀಲರಾದ ಶಂಭುಶರ್ಮಾ ಅವರು ತಿಳಿಸಿದ್ದಾರೆ. ಶ್ರೀಗಳು ಪರೀಕ್ಷೆ ಮುಗಿಸಿ ಗಿರಿನಗರದಲ್ಲಿರುವ ಮಠಕ್ಕೆ ತೆರಳಿದ್ದಾರೆ.

