ಬಂಟ್ವಾಳ: ಕಳೆದ ಎರಡುದಿನಗಳಿಂದ ಸುರಿಯುತ್ತಿರುವ ಮಳೆಗೆ ಬಂಟ್ವಾಳ ತಾಲೂಕಿನ ಇರ್ವತ್ತೂರು ಗ್ರಾಮದ ಮೇಲ್ಪತ್ತರ ಸ.ಕಿ.ಪ್ರಾ.ಶಾಲೆಯ ಮೈದಾನದಲ್ಲಿದ್ದ ಸುಮಾರು ೬೦ ವರ್ಷ ಹಳೆಯ ಬಾವಿಯೊಂದು ಸಂಪೂರ್ಣ ಕುಸಿದ ಘಟನೆ ಬುಧವಾರ ಸುಮಾರು ೧೧ ಗಂಟೆಯ ಹೊತ್ತಿಗೆ ಬಾವಿ ದಿಢೀರನೆ ಕುಸಿದಿದೆ. ಅದೃಷ್ಟವಶಾತ್ ಈ ಹೊತ್ತಿಗೆ ವಿದ್ಯಾರ್ಥಿಗಳು, ಶಿಕ್ಷಕರು ಶಾಲೆಯ ಒಳಗಿದ್ದುದರಿಂದ ಯಾವುದೇ ಅಪಾಯ ಸಂಭವಿಸಿಲ್ಲ.

ಬಾವಿ ಸುಮಾರು ೬೦ ವರ್ಷ ಹಳೆಯದಾಗಿದ್ದು, ಸುಮಾರು ೭೫ ಅಡಿ ಆಳವಿತ್ತು. ೪೦ ಅಡಿಗಳಷ್ಟು ಕಪ್ಪು ಕಲ್ಲಿನ ಒಳ ಆವರಣವಿದ್ದು, ಇದನ್ನು ನವೀಕರಣಗೊಳಿಸಿ ಸುಮಾರು ಮೂವತ್ತು ಅಡಿಗಳಷ್ಟು ಕೆಂಪು ಕಲ್ಲಿನ ಆವರಣ ಕಟ್ಟಲಾಗಿತ್ತು. ಹಿಂದೆ ಊರವರೆಲ್ಲರೂ ಈ ಬಾವಿಯನ್ನು ಆಶ್ರಯಿಸಿದ್ದರು.

ಇದೀಗ ಬಾವಿ ಕುಸಿತದಿಂದ ಕಲ್ಲುಗಳ ಸಹಿತ ಪಂಪುಸೆಟ್ ಕೂಡಾ ಭೂ ಗರ್ಭ ಸೇರಿದೆ. ಕುಡಿಯುವ ನೀರು, ಅನ್ನದಾಸೋಹದ ಅಡುಗೆಗೆ, ತರಕಾರಿ ಕೈ ತೋಟಕ್ಕೆ, ಅಡಿಕೆ ತೋಟ, ಶೌಚಾಲಯ ಸಹಿತ ಶಾಲೆಯ ಎಲ್ಲ ಕಾರ್ಯಗಳಿಗೆ ಈ ಬಾವಿಯ ನೀರು ಉಪಯೋಗಿಸುತ್ತಿದ್ದು, ಇದೀಗ ನೀರಿನ ಬಗ್ಗೆ ಆತಂಕವಾಗಿದೆ ಎಂದು ಶಾಲಾ ಮುಖ್ಯ ಶಿಕ್ಷಕ ಸೀತಾರಾಮ ಬಿ.ಕೆ. ಅವರು ತಿಳಿಸಿದ್ದಾರೆ.
ಕೆಲ ದಿನಗಳ ಹಿಂದೆ ಈ ಪ್ರದೇಶದಲ್ಲಿ ಬಿರುಗಾಳಿ ಸಹಿತ ಸಿಡಿಲು ಬಂದಿದ್ದು, ಹತ್ತಿರದ ತೋಟಕ್ಕೆ ಸಿಡಿಲು ಬಡಿದಿತ್ತು. ಇದರಿಂದ ಬಾವಿಯ ಅಡಿ ಭಾಗದ ಕಲ್ಲು ಸಡಿಲಗೊಂಡಿದ್ದು, ಕಲ್ಲುಗಳು ಕದಲಿದ ರೀತಿ ಕಾಣುತ್ತಿತ್ತು. ಘಟನೆ ನಡೆಯುವ ಕೆಲವೇ ನಿಮಿಷಗಳ ಹಿಂದೆ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಸುಚಿತ್ ಶರ್ಮ ಹಾಗೂ ತಾನು ಬಾವಿಯೊಳಗೆ ಇಣುಕಿ ಬಂದಿದ್ದು, ಬಳಿಕ ಬಾವಿ ಕುಸಿದಿತ್ತು ಎನ್ನುತ್ತಾರೆ ಸೀತಾರಾಮ ಅವರು.ಘಟನೆ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಹಾಗೂ ಕಂದಾಯ ಇಲಾಖೆಗೆ ಮಾಹಿತಿ ನೀಡಲಾಗಿದೆ.
ಅದೇ ರೀತಿ ಬಂಗೇರಕೆರೆ- ಕಾವಳಕಟ್ಟೆ ರಸ್ತೆ , ಬಂಗೇರ ಕೆರೆ ಎಂಬಲ್ಲಿ, ಮರ ರಸ್ತೆಗೆ ಉರುಳಿದೆ, 4 ವಿದ್ಯುತ್ ಕಂಬಗಳಿಗೆ ಹಾನಿ
