ಮಂಗಳೂರು: ನಗರದ ಹೊರವಲಯದ ನಂತೂರು ಜಂಕ್ಷನ್ ಸಮೀಪ ಮಂಗಳೂರು-ಮೂಡಬಿದ್ರೆ ಮಧ್ಯೆ ಸಂಚರಿಸುವ ಖಾಸಗಿ `ನಿಶ್ಮಿತಾ’ ಬಸ್ಸನ್ನು ಅದರ ಚಾಲಕ ಅತೀವೇಗ ಹಾಗೂ ನಿರ್ಲಕ್ಷ್ಯದಿಂದ ಚಲಾಯಿಸಿ ಮೀನಿನ ಲಾರಿಗೆ ಡಿಕ್ಕಿ ಹೊಡೆದು ಮಗುಚಿಬಿದ್ದ ಘಟನೆ ಬುಧವಾರ ಮುಂಜಾನೆ ಸಂಭವಿಸಿದೆ. ಘಟನೆಯಲ್ಲಿ ನಗರದ ಕೆಪಿಟಿ ಶಿಕ್ಷಣ ಸಂಸ್ಥೆಯ ಐಟಿಐ ವಿದ್ಯಾರ್ಥಿ ಸಹಿತ ಇಬ್ಬರು ಯುವಕರು ದಾರುಣವಾಗಿ ಪ್ರಾಣ ಕಳೆದುಕೊಂಡರೆ ಐದು ಮಂದಿ ಗಂಭೀರ ಗಾಯಗೊಂಡಿದ್ದಾರೆ. ಹತ್ತಕ್ಕೂ ಅಧಿಕ ಪ್ರಯಾಣಿಕರಿಗೆ ಗಾಯಗಳಾಗಿದ್ದು, ಅವರನ್ನು ನಗರದ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.
ಘಟನೆಯ ವಿವರ: ನಿಶ್ಮಿತಾ ಬಸ್ ಮೂಡಬಿದ್ರೆಯಿಂದ ಮಂಗಳೂರಿಗೆ ಬರುತ್ತಿದ್ದು, ಮುಂಜಾನೆ 9 ಗಂಟೆಯ ಸುಮಾರಿಗೆ ಘಟನೆ ಸಂಭವಿಸಿದೆ. ಈ ವೇಳೆ ಬಸ್ ನಲ್ಲಿ ಪ್ರಯಾಣಿಕರು ಕಿಕ್ಕಿರಿದು ತುಂಬಿದ್ದರು. ನಂತೂರು ಜಂಕ್ಷನ್ ಸಮೀಪ ಬಸ್ ಬರುತ್ತಲೇ ಮೀನಿಗೆ ಲಾರಿಗೆ ಡಿಕ್ಕಿ ಹೊಡೆದು ಬಸ್ ರಸ್ತೆ ಬದಿಯ ಕಮರಿಗೆ ಪಲ್ಟಿ ಹೊಡೆದಿದೆ. ಘಟನೆಯಲ್ಲಿ ಮೂಡಬಿದ್ರೆ ನಿವಾಸಿ ಐಟಿಐ ವಿದ್ಯಾರ್ಥಿ ಉಮಾನಾಥ(18) ಹಾಗೂ ಗುರುಪುರ ನಿವಾಸಿ ಗಣೇಶ್(27) ಎದೆ, ಮುಖದ ಭಾಗಕ್ಕೆ ಗಂಭೀರ ಗಾಯಗಳಾಗಿದ್ದು, ಕೂಡಲೇ ಆಸ್ಪತ್ರೆಗೆ ಕೊಂಡೊಯ್ದರೂ ಚಿಕಿತ್ಸೆ ಫಲಕಾರಿಯಾಗದೆ ಪ್ರಾಣ ಕಳೆದುಕೊಂಡಿದ್ದಾರೆ. ಇನ್ನುಳಿದ ಐದು ಮಂದಿಯ ಸ್ಥಿತಿ ಚಿಂತಾಜನಕವಾಗಿದ್ದು, ಅವರನ್ನು ಎಜೆ ಆಸ್ಪತ್ರೆಗೆ ತೀವ್ರನಿಗಾ ಘಟಕದಲ್ಲಿ ಚಿಕಿತ್ಸೆಗೆ ಒಳಪಡಿಸಲಾಗಿದೆ. ಬಸ್ ಚಾಲಕ ಸಮೇತ ಹತ್ತಾರು ಮಂದಿಗೆ ಗಾಯಗಳಾಗಿದ್ದು, ಅವರನ್ನು ಸ್ಥಳೀಯರು ತಕ್ಷಣವೇ ಹೊರಕ್ಕೆಳೆದು ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಸ್ಸಿನಲ್ಲಿದ್ದ ಮಹಿಳೆಯರು, ಗಂಡಸರು ಹಾಗೂ ವಿದ್ಯಾರ್ಥಿಗಳಿಗೆ ಗಾಯಗಳಾಗಿವೆ ಎಂದು ತಿಳಿದುಬಂದಿದ್ದು, ಗಾಯಾಳುಗಳನ್ನು ನಗರದ ಎಜೆ ಆಸ್ಪ್ರತ್ರೆಗೆ ದಾಖಲಿಸಲಾಗಿದೆ. ಕುಟುಂಬಿಕರ ರೋಧನ ಮುಗಿಲುಮುಟ್ಟಿದೆ.





