ಬೆಂಗಳೂರು: ಸ್ಯಾಂಡಲ್‍ವುಡ್ ಹೆಸರಾಂತ ಹಾಸ್ಯ ಕಲಾವಿದ ಮೋಹನ್ ಜೂನೇಜ(54) ಇಂದು ನಿಧನರಾಗಿದ್ದಾರೆ.

ಕೆಲವು ದಿನಗಳಿಂದ ಅನಾರೋಗ್ಯದ ತೊಂದರೆಯಿಂದ ಬಳಲುತ್ತಿದ್ದ ಮೋಹನ್ ಜೂನೇಜ ಅವರು ಬೆಂಗಳೂರಿನ ಹೆಸರಘಟ್ಟ ಮುಖ್ಯರಸ್ತೆಯಲ್ಲಿರುವ ಸಪ್ತಗಿರಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಶನಿವಾರ ಕೊನೆಯುಸಿರೆಳೆದಿದ್ದಾರೆ.

ಮೋಹನ್ ಜೂನೇಜ ಕನ್ನಡ ಚಿತ್ರರಂಗ ಮತ್ತು ಕಿರುತೆರೆಯಲ್ಲಿ ಸಕ್ರಿಯರಾಗಿದ್ದರು. ಕಿರುತೆರೆಯ ‘ವಠಾರ’ ಸೀರಿಯಲ್‍ನಿಂದ ಜನಪ್ರಿಯತೆ ಗಳಿಸಿದ್ದರು. ಹಲವಾರು ಚಿತ್ರಗಳಲ್ಲಿ ಪೋಷಕ ನಟನಾಗಿ ಮತ್ತು ಹಾಸ್ಯನಟನಾಗಿ ರಂಜಿಸಿದ್ದ ಮೋಹನ್ ಜೂನೇಜ ಅವರಿಗೆ `ಚೆಲ್ಲಾಟ’ ಚಿತ್ರದ ಮಧುಮಗನ ಪಾತ್ರ ತುಂಬಾ ಖ್ಯಾತಿ ತಂದುಕೊಟ್ಟಿತ್ತು. ಇತ್ತೀಚೆಗಷ್ಟೇ ಬಿಡುಗಡೆಯಾದ ಕೆಜಿಎಫ್ ಭಾಗ ಒಂದು ಮತ್ತು ಎರಡರಲ್ಲೂ ಪೋಷಕ ನಟನಾಗಿ ಮೋಹನ್ ಜೂನೇಜ ಅವರು ಅಭಿನಯಿಸಿದ್ದರು.

ಸ್ಯಾಂಡಲ್‍ವುಡ್‍ನ ಪ್ರಮುಖ ನಾಯಕ ನಟರ ಜೊತೆ ತೆರೆ ಹಂಚಿಕೊಂಡಿರುವ ಮೋಹನ್ ಜೂನೇಜ ಅವರು ನವಗ್ರಹ, ಗಣೇಶನ ಗಲಾಟೆ, ಜೋಗಿ ಸೇರಿದಂತೆ 100ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಇದೀಗ ಪತ್ನಿ ಕುಸುಮಾ, ಇಬ್ಬರು ಪುತ್ರರು ಅಕ್ಷಯ್, ಅಶ್ವಿನ್‌ರನ್ನು ಅಗಲಿದ್ದಾರೆ

ಬೆಂಗಳೂರಿನ ಉತ್ತರ ತಾಲೂಕಿನ ತಮ್ಮೇನಹಳ್ಳಿಯಲ್ಲಿ ವಾಸಿಸುತ್ತಿದ್ದ ಮೋಹನ್ ಜುನೇಜ ಮೃತದೇಹವನ್ನು ಅವರ ನಿವಾಸಕ್ಕೆ ಕೊಂಡೊಯ್ಯಲಾಗಿದ್ದು, ಕುಟುಂಬಸ್ಥರು, ಬಂಧುಗಳು, ಕಲಾವಿದರು ಅವರ ಅಂತಿಮ ದರ್ಶನ ಪಡೆಯುತ್ತಿದ್ದಾರೆ.

By suddi9

Leave a Reply

Your email address will not be published. Required fields are marked *