ಬಂಟ್ವಾಳ: ಬಾಯಿಹುಣ್ಣಿಗೆ ದಿನಾ ತೆಗೆದುಕೊಳ್ಳುತ್ತಿದ್ದ ಔಷಧಿಯ ಬದಲು ಹುಲ್ಲಿಗೆ ಸಿಂಪಡಿಸುವ ಕಳೆನಾಶಕ ಔಷಧವನ್ನು ತಪ್ಪಾಗಿ ಸೇವಿಸಿದ್ದ ಬಂಟ್ವಾಳ ತಾ.ನ ಕಾವಳಮೂಡೂರು ಗ್ರಾಪಂ ನ ನಿಕಟಪೂರ್ವ ಸದಸ್ಯ,ಹಾಲಿ ಅಭ್ಯರ್ಥಿ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ಘಟನೆ ಸೋಮವಾರ ನಡೆದಿದೆ. ತಾಲೂಕಿನ ಕಾವಳ ಮುಡೂರು ಗ್ರಾಮದ, ಅರ್ಗತ್ಯಾರು ನಿವಾಸಿ ಜಯಂತ ಪ್ರಭು(58 ) ಮೃತಪಟ್ಟವರಾಗಿದ್ದಾರೆ.
ದಶಂಬರ್ 21 ರಂದು ರಾತ್ರಿ 11:00 ಗಂಟೆಯ ವೇಳೆ ತನ್ನ ಬಾಯಿ ಹುಣ್ಣಿಗೆ ದಿನಾ ತೆಗೆದುಕೊಳ್ಳುತ್ತಿದ್ದ ಔಷಧಿಯ ಬದಲಾಗಿ ಖಾಲಿಯಾಗಿದ್ದ ಔಷಧಿ ಬಾಟಲಿಯಲ್ಲಿ ಶೇಖರಿಸಿಟ್ಟಿದ್ದ ‘ಟ್ರೈಕಾಟ್’ ಎಂಬ ಹುಲ್ಲಿಗೆ ಸಿಂಪಡಣೆ ಮಾಡುವ ಕಳೆ ನಾಶಕ ಔಷಧಿಯನ್ನು ಸಿರಪ್ ಎಂದು ತಪ್ಪಾಗಿ ಭಾವಿಸಿ ಅಲ್ಪ ಪ್ರಮಾಣದಲ್ಲಿ ಸೇವಿಸಿದ್ದರು.ಮರುದಿನ ಗ್ರಾಪಂ ಚುನಾವಣೆಯಲ್ಲಿ ಮತದಾನವನ್ನು ಮಾಡಿದ್ದರಲ್ಲದೆ ಮತಗಟ್ಟೆಯಲ್ಲು ಒಂದಷ್ಟು ಹೊತ್ತು ಕಳಿತು ಕೊನೆಕ್ಷಣದ ಮತದಾರನ ಮನವೊಲಿಸುವಲ್ಲು ತೊಡಗಿದ್ದರು. ರಾತ್ರಿ ವೇಳೆಗೆ ಹಠಾತ್ ಅಸ್ವಸ್ಥಗೊಂಡಿದ್ದರು. ಕೂಡಲೇ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ವೆನ್ಲಾಕ್ ಆಸ್ಪತ್ರೆಯಲ್ಲಿ ದಾಖಲಿಸಲಾಯಿತು. ಚಿಕಿತ್ಸೆ ಫಲಕಾರಿಯಾಗದೇ ಅವರು ಸೋಮವಾರ ಮಧ್ಯಾಹ್ನದ ಹೊತ್ತಿಗೆ ಕೊನೆಯುಸಿರೆಳೆದಿದ್ದಾರೆ.
ಈ ಬಗ್ಗೆ ಅವರ ಪುತ್ರ ನೀಡಿರುವ ದೂರಿನಂತೆ ಪುಂಜಾಲಕಟ್ಟೆ ಪೊಲೀಸರು ಕೇಸು ದಾಖಲಿಸಿದ್ದಾರೆ. ಅಭ್ಯರ್ಥಿ ಯಾಗಿದ್ದರು; ಮೃತ ಜಯಂತ ಪ್ರಭು ಅವರು ದ.22 ರಂದು ನಡೆದ ಗ್ರಾಪಂ ಚುನಾವಣೆಗೆ ಕಾವಳಮೂಡೂರು ಪಂಚಾಯತ್ ನ ವಾಡ್೯3 – ರಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿದ್ದರು. ಇವರು ಈ ಹಿಂದೆ ಎರಡು ಬಾರಿ ಸದಸ್ಯರಾಗಿದ್ದು,ಒಂದು ಬಾರಿ ಗ್ರಾಪಂ ನ ಉಪಾಧ್ಯಕ್ಷರಾಗಿಯು ಕಾರ್ಯನಿರ್ವಹಿಸಿದ್ದರು.
ಸಾಮಾಜಿಕ ಮಾತ್ರವಲ್ಲ ಧಾರ್ಮಿಕ,ಸಹಕಾರಿ ಚಟುವಟಿಯಲ್ಲು ತೊಡಗಿಸಿಕೊಂಡಿದ್ದರು. ಪ್ರಗತಿಪರ ಕೃಷಿಕರಾಗಿದ್ದ ಅವರು ನೆಲ್ಲಿಗುಡ್ಡೆ ಶ್ರೀಕೃಷ್ಣ ಜನ್ಮಾಷ್ಠಮಿ ಸಮಿತಿ,ನೆಲ್ಲಿಗುಡ್ಡೆ ಹಾಲು ಉತ್ಪಾದಕರ ಸಹಕಾರಿ ಸಂಘದ ನಿರ್ದೇಶಕರು ಆಗಿದ್ದಾರೆ.ಮೃತರು ಪತ್ನಿ, ಒರ್ವ ಪುತ್ರ ಹಾಗೂ ಬಂಧುಗಳನ್ನು ಅಗಲಿದ್ದಾರೆ.
ಅಂತಿಮ ನಮನ : ಮಾಜಿ ಸಚಿವ ರಮಾನಾಥ ರೈ,ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿಕುಂದರ್,ಜಿಪಂ ಸದಸ್ಯ ಪದ್ಮಶೇಖರ ಜೈನ್ ಮೊದಲಾದವರು ಅಂತಿಮ ನಮನ ಸಲ್ಲಿಸಿದರು.
