ಬಂಟ್ವಾಳ: ತಾಲೂಕಿನ ಸಜೀಪ ಮಾಗಣೆಯ ಶ್ರೀ ವಿನಾಯಕ ಶಂಕರ ನಾರಾಯಣ ದುರ್ಗಾಂಬಾ ಕ್ಷೇತ್ರದ ನೂತನ ವ್ಯವಸ್ಥಾಪನಾ ಸಮಿತಿಯನ್ನು ಕ್ಷೇತ್ರದ ಆಡಳಿತಾಧಿಕಾರಿಯಾಗಿರುವ ತಾರಾನಾಥ್ ಸಾಲ್ಯಾನ್ ಮತ್ತು ಕಾರ್ಯನಿರ್ವಹಣಾಧಿಕಾರಿ ಪಿ.ಜಯಮ್ಮ ಅವರ ಸಮ್ಮುಖದಲ್ಲಿ ರಾಜ್ಯ ಸರ್ಕಾರದ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿ ಇಲಾಖೆಯ ಆದೇಶದಂತೆ ಶುಕ್ರವಾರ ರಚನೆಗೊಂಡಿದೆ.
ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾಗಿ ಅರವಿಂದ್ ಭಟ್ ಆಲಾಡಿ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಕ್ಷೇತ್ರದ ಪ್ರಧಾನ ಅರ್ಚಕರಾದ ವೇದಮೂರ್ತಿ ಮಹೇಶ್ ಭಟ್, ಯಶವಂತ ದೇರಾಜೆ, ಅರುಣ್ ಕುಮಾರ್ ಕುಕ್ಕುದಕಟ್ಟೆ, ಮೋಹನ್ ದಾಸ್ ಹೆಗ್ಡೆ ನಗ್ರಿ, ದೇವಪ್ಪ ನಾಯ್ಕ ದಾಸರಗುಡ್ಡೆ, ಜಯಶ್ರೀ ಅಶೋಕ್ ಗಟ್ಟಿ ನಂದಾವರ, ಕವಿತಾ ವಸಂತ ಪೆರಾಜೆ ಸಜೀಪ ನಡು, ಗಣೇಶ್ ಕಾರಾಜೆ ಇವರುಗಳು ವ್ಯವಸ್ಥಾಪನಾ ಸಮಿತಿಯ ನೂತನ ಸದಸ್ಯರುಗಳಾಗಿ ಆಯ್ಕೆಯಾಗಿದ್ದಾರೆ.
ಕ್ಷೇತ್ರದ ವ್ಯವಸ್ಥಾಪನಾ ಸಮಿತಿಯ ನಿಕಟಪೂರ್ವ ಅಧ್ಯಕ್ಷರಾಗಿದ್ದ ಎ.ಸಿ ಭಂಡಾರಿ ಮತ್ತು ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮತ್ತು ಮಾಗಣೆಯ ತಂತ್ರಿಗಳಾದ ಸುಬ್ರಹ್ಮಣ್ಯ ಭಟ್ ಮಂಜಿನಡ್ಕ ಇವರನ್ನು ನೂತನ ಸಮಿತಿಯ ವತಿಯಿಂದ ಸನ್ಮಾನಿಸಲಾಯಿತು.

