ಪಡುಬಿದ್ರಿ: ಬಸ್ಸಿನಲ್ಲಿ ಪ್ರಯಾಣಿಸುವ ಸಂದರ್ಭ ಅಪ್ರಾಪ್ತ ಬಾಲಕಿಯ ಹಿಂದೆ ನಿಂತು ಆಕೆಗೆ ಲೈಂಗಿಕ ಕಿರುಕುಳ ನೀಡಿದ ವಿಕೃತಕಾಮಿಯನ್ನು ಪಡುಬಿದ್ರಿ ಠಾಣಾ ಪೊಲೀಸರು ಶುಕ್ರವಾರ ಸಂಜೆ ವಶಕ್ಕೆ ಪಡೆದುಕೊಂಡು ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ. ಮಂಗಳೂರು-ಮಾರ್ಗನ್ಸ್ಗೇಟ್ ನಿವಾಸಿ ನೂರ್ ಮುಹಮ್ಮದ್(30) ಪೊಲೀಸರ ಅತಿಥಿಯಾದವನು.

ಘಟನೆಯ ವಿವರ:
ನೂರ್ ಮುಹಮ್ಮದ್ ಉಡುಪಿಯ ಮೊಬೈಲ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದು ಪ್ರತಿನಿತ್ಯ ಸಂಜೆ ಕೆಲಸ ಮುಗಿಸಿ ಬಸ್ಸಿನಲ್ಲಿ ಮಂಗಳೂರಿಗೆ ಪ್ರಯಾಣಿಸುತ್ತಿದ್ದ. ಶುಕ್ರವಾರ ಸಂಜೆಯೂ ಇದೇ ರೀತಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಈತ ಕಾಪು ಸಮೀಪ ತನ್ನ ಪಕ್ಕ ನಿಂತಿದ್ದ ಪಡುಬಿದ್ರಿ ನಿವಾಸಿ ಅಪ್ರಾಪ್ತ ಬಾಲಕಿಯ ಖಾಸಗಿ ಭಾಗವನ್ನು ಸ್ಪಶರ್ಿಸಿ ತೀಟೆ ತೀರಿಸಿಕೊಳ್ಳುತ್ತಿದ್ದ. ಬಾಲಕಿ ಕಾಮುಕನ ಕಾಟದಿಂದ ಬೆದರಿದ್ದರೂ ಈತ ತನ್ನ ವಿಕೃತ ಚೇಷ್ಟೆಯನ್ನು ಮುಂದುವರಿಸಿದ್ದ. ಇದನ್ನು ಬಸ್ಸಿನಲ್ಲಿದ್ದ ಕೆಲವರು ಗಮನಿಸಿದ್ದರು.
ಬಸ್ ಪಡುಬಿದ್ರಿ ತಲುಪುತ್ತಿದ್ದಂತೆ ಬಸ್ಸಿನಿಂದ ಕಾಮುಕ ನೂರ್ ಮುಹಮ್ಮದ್ನನ್ನು ಕೆಳಕ್ಕೆ ಎಳೆದು ಹಿಗ್ಗಾಮುಗ್ಗಾ ಥಳಿಸಿ ಮೈಚಳಿ ಬಿಡಿಸಿದ್ದಾರೆ. ಬಳಿಕ ಪಡುಬಿದ್ರಿ ಠಾಣಾ ಪೊಲೀಸರಿಗೆ ಆರೋಪಿಯನ್ನು ಒಪ್ಪಿಸಿದ್ದಾರೆ. ಬಾಲಕಿಯ ತಂದೆ ನೀಡಿದ ದೂರಿನಂತೆ ಆರೋಪಿ ವಿರುದ್ಧ ಪ್ರಕರಣ ದಾಖಲಾಗಿದೆ. ಆರೋಪಿ ಈ ಹಿಂದೆಯೂ ಇಂಥದ್ದೇ ವಿಕೃತ ಚೇಷ್ಟೆ ಮಾಡಿಕೊಂಡಿದ್ದ ಎಂದು ಹೇಳಲಾಗಿದೆ.
