ಬಂಟ್ವಾಳ: ಕಾಂಕ್ರೇಟ್ ಕಾಮಗಾರಿಯ ಹಿನ್ನಲೆಯಲ್ಲಿ ವಾಹನ ಸಂಚಾರ ನಿಷೇಧಿಸಲ್ಲಟ್ಟಿರುವ ಬಿ.ಸಿ.ರೋಡ್ ನಿಂದ ಜಕ್ರಿಬೆಟ್ಟು ರಸ್ತೆಯಲ್ಲಿ ವಾಹನ ಸಂಚಾರ ಆರಂಭಗೊಂಡಿದ್ದು, ಸೋಮವಾರ ಲಾಕ್ ಡೌನ್ ನಿಂದಾಗಿ ಬೆರಳೆಣಿಕೆಯ ಘನವಾಹನಗಳಷ್ಟೆ ಸಂಚರಿಸಿದೆ. ಕಾಂಕ್ರೆಟ್ ರಸ್ತೆ ಕಾಮಗಾರಿಯ ಹಿನ್ನಲೆಯಲ್ಲಿ ಜೂ.26ರಿಂದ ಜು.18 ರವರೆಗೆ ಬಿ.ಸಿ.ರೋಡ್ ನಿಂದ ಜಕ್ರಿಬೆಟ್ಟು ವರೆಗೆ ವಾಹನ ಸಂಚಾರವನ್ನು ನಿಷೇಧಿಸಿ ಜಿಲ್ಲಾಧಿಕಾರಿಯವರು ಆದೇಶಿಸಿದ್ದರು..ಇದೀಗ ಈ ರಸ್ತೆಯ ಚತುಷ್ಪಥ ಹೆದ್ದಾರಿಯ ಒಂದು ಬದಿಯಲ್ಲಿ 7 ಮೀ.ನಷ್ಟು ಕಾಂಕ್ರೇಟ್ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಜಕ್ರಿಬೆಟ್ಟು ಹಾಗೂ ಗಾಣದಪಡ್ಪಬಳಿ ಹೆದ್ದಾರಿಯನ್ನು ಪ್ರವೇಶಿಸಲು ಅನುಕೂಲ ಮಾಡಿಕೊಡಲಾಗಿದೆ.ಹೆದ್ದಾರಿಗೆ ತಡೆಹಾಕಲಾಗಿದ್ದ ಬ್ಯಾರಿಕೇಡನ್ನು ತೆರವುಗೊಳಿಸಲಾಗಿದೆ.
ಪೇಟೆಯಲ್ಲಿ ದಟ್ಟಣೆ ಕಡಿಮೆ:
ಅಗಲಕಿರಿದಾದ ಬಂಟ್ವಾಳ ಪೇಟೆಯಲ್ಲಿ ಇನ್ನು ವಾಹನಸಂಚಾರದ ದಟ್ಟಣೆ ಕಡಿಮೆಯಾಗುವ ಸಾಧ್ಯತೆ ಇದೆ.ಹೆದ್ದಾರಿಯಲ್ಲಿ ಸಂಚಾರ ನಿಷೇಧಿಸಿದರಿಂದ ಘನವಾಹನಗಳ ಸಹಿತ ಎಲ್ಲಾ ವಾಹನಗಳು ಬಂಟ್ವಾಳ ಪೇಟೆಯ ಮೂಲಕ ಸಂಚಾರಿಸುತ್ತಿದ್ದರಿಂದ ವಾಹನದಟ್ಟಣೆ ಯಿಂದ ಟ್ರಾಫಿಕ್ ಜಾಮ್ ಉಂಟಾಗುತಿತ್ತು.ಇದೀಗ ಘನವಾಹನಗಳು ಹೆದ್ದಾರಿ ಮೂಲಕ ಸಂಚರಿಸಿದರೆ ಪೇಟೆಯಲ್ಲಿ ಸಂಚಾರ ದಟ್ಟಣೆ ಕಡಿಮೆಯಾಗುವ ನಿರೀಕ್ಷೆ ಇದೆ.
ಈ ನಡುವೆ ಜಕ್ರಿಬೆಟ್ಟುವಿನಿಂದ ಪುಂಜಾಲಕಟ್ಟೆ ವರೆಗಿನ ಕೆಲವೆಡೆ ರಸ್ತೆ ಅಗಲೀಕರಣಕ್ಕಾಗಿ ರಸ್ತೆ ಬದಿಯ ಗುಡ್ಡವನ್ನು ಅಗೆಯಲಾಗಿದ್ದು,ಈ ಭಾಗದಲ್ಲಿ ನಿರಂತರ ಮಳೆಗೆ ಗುಡ್ಡೆಯ ಮಣ್ಣು ಜರಿದು ರಸ್ತೆಗೆ ಬೀಳುವ ಆತಂಕವನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ.ಬಡಗುಂಡಿ ಸಹಿತ ಕೆಲವೆಡೆಯಲ್ಲಿ ಗುಡ್ಡವನ್ನು ಅಗೆಯಲಾಗಿದ್ದು,ಈ ಗುಡ್ಡದಲ್ಲಿದ್ದ ಬೃಹತ್ ಮರಗಳು,ವಿದ್ಯುತ್ ತಂತಿಗಳು ಕೂಡ ಅಪಾಯಕಾರಿ ಸ್ಥಿತಿಯಲ್ಲಿದೆ ಎಂದು ಸ್ಥಳೀಯರು ದೂರಿದ್ದಾರೆ. ರಾ.ಹೆ.ಕಾಯ್ದಿರಿಸಿದನ್ವಯ ರಸ್ತೆಗೆ ಅಗತ್ಯವಿದ್ದಷ್ಟು ಸ್ಥಳವನ್ನು ಬಳಸಿಕೊಳ್ಳಲಾಗಿದೆ ಎಂದು ಕಾಮಗಾರಿಯ ಗುತ್ತಿಗೆಯ ಸಿಬ್ಬಂದಿ ತಿಳಿಸಿದ್ದಾರೆ.
