ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಟಿ ಅಮಾವಾಸ್ಯೆಗೆ ವಿಶೇಷವಾದ ಮಹತ್ವವಿದ್ದು, ಈ ದಿನದಂದು ಪುಣ್ಯ ಕ್ಷೇತ್ರಗಳಲ್ಲಿ ತೀರ್ಥ ಸ್ನಾನ ಮಾಡಿದರೆ ವಿಶೇಷ ಫಲ ಲಭಿಸಲಿದೆ ಎಂಬುದು ನಂಬಿಕೆ. ಆದರೆ ಬಂಟ್ವಾಳ ತಾಲೂಕಿನ ಕಾರಿಂಜ ಕ್ಷೇತ್ರ , ನರಹರಿ ಪರ್ವತ ಹಾಗೂ ವಾಮದಪದವಿನ ನೀಲಿ ಕ್ಷೇತ್ರದಲ್ಲಿ ಸೋಮವಾರ ಆಟಿ ಅಮಾವಸ್ಯೆಯ ತೀರ್ಥಸ್ನಾನಕ್ಕೆ ಬ್ರೇಕ್ ಹಾಕಲಾಗಿತ್ತು. ತಾಲೂಕಿನ ಈ ಮೂರು ಕ್ಷೇತ್ರದಲ್ಲಿ ಪ್ರತಿ ವರ್ಷ ಆಟಿ ಅಮಾವಾಸ್ಯೆಯ ತೀರ್ಥ ಸ್ನಾನದಲ್ಲಿ ಸಾವಿರಾರು ಭಕ್ತರು ಪಾಲ್ಗೊಳ್ಳುತ್ತಿದ್ದರು. ಈ ಬಾರಿ ಕೊರೊನಾ ಮಹಾಮಾರಿಯ ಹಿನ್ನೆಲೆಯಲ್ಲಿ ದೇವಸ್ಥಾನಗಳಿಗೆ ಭಕ್ತರಿಗೆ ಪ್ರವೇಶವನ್ನು ನಿರ್ಬಂಧಿಸಲಾಗಿದೆಯಲ್ಲದೆ ತೀರ್ಥಸ್ನಾನ ಸಹಿತ ಎಲ್ಲಾ ಸೇವೆಗಳನ್ನು ರದ್ದು ಪಡಿಸಲಾಗಿತ್ತು.
ಈ ಕ್ಷೇತ್ರಗಳಲ್ಲಿ ತೀರ್ಥ ಸ್ನಾನಕ್ಕೆ ಜಿಲ್ಲೆಯ ಮೂಲೆ ಮೂಲೆಗಳಿಂದಲೂ ಭಕ್ತರು ಆಗಮಿಸುತ್ತಿದ್ದರು.ಮುಂಜಾನೆಯೇ ನೂತನ ವಧು-ವರರ ಸಹಿತ ಮಕ್ಕಳು,ವೃದ್ದರೆನ್ನದೆ ಸರತಿ ಸಾಲಲ್ಲಿ ನಿಂತು ತೀರ್ಥಸ್ನಾನಗೈದು ಪುನೀತರಾಗುತ್ತಿದ್ದರು. ಈ ಬಾರಿ ಕೊರೊನಾ ಹಿನ್ನೆಲೆ ದೇವಸ್ಥಾನಕ್ಕೆ ಭಕ್ತರಿಗೆ ಪ್ರವೇಶವಿಲ್ಲ ಮತ್ತು ಆಟಿ ಅಮಾವಾಸ್ಯೆಯ ತೀರ್ಥಸ್ನಾನ ರದ್ದು ಪಡಿಸಿರುವುದನ್ನು ಕ್ಷೇತ್ರಗಳ ಆಡಳಿತ ಮಂಡಳಿಗಳು ಸ್ಪಷ್ಟಪಡಿಸಿತ್ತು. ಕೇವಲ ಪುರೋಹಿತರು ದೇವಳದಲ್ಲಿ ಸರಳ ರೀತಿಯಲ್ಲಿ ಆಟಿ ಅಮಾವಾಸ್ಯೆ ಆಚರಣೆ ನಡೆಸಿದರು.ಜನರು ಮುಂಜಾನೆ ಮನೆಯಲ್ಲೆ ಹಾಳೆ ಮರದ ಕಷಾಯ ಸೇವಿಸಿ,ಕೊರೋನ ಮುಕ್ತವಾಗಲೆಂದು ದೇವರಲ್ಲಿ ಪ್ರಾರ್ಥಿಸಿದರು.
ಹೆದ್ದಾರಿಯಲ್ಲಿಯೇ ತಡೆ:
ಕಾರಿಂಜಕ್ಷೇತ್ರ ಮತ್ತು ನರಹರಿ ಪರ್ವತದಲ್ಲಿ ಆಟಿ ಅಮಾವಾಸ್ಯೆಯ ತೀರ್ಥಸ್ನಾನಕ್ಕೆ ವಿಶೇಷತೆ ಯಿರುವುದರಿಂದ ಗಮನಕ್ಕೆ ಬಾರದೆ ಅಪ್ಪಿತಪ್ಪಿ ಭಕ್ತರು ಕ್ಷೇತ್ರಕ್ಕೆ ಅಗಮಿಸಬಹುದೆಂಬ ಹಿನ್ನಲೆಯಲ್ಲಿ ದೇವಳವನ್ನು ಪ್ರವೇಶಿಸುವ ದ್ವಾರದಲ್ಲೆ ಹೆದ್ದಾರಿಯಲ್ಲಿ ತಾಲೂಕಾಡಳಿತದ ನಿರ್ದೇಶನದಂತೆ ಪೊಲೀಸರು ಬ್ಯಾರಿಕೇಡ್ ಹಾಕಿ ತಡೆಹಾಕಿದ್ದರಲ್ಲದೆ ಎಚ್ಚರಿಕೆಯ ಬ್ಯಾನರ್ ಅಳವಡಿಸಲಾಗಿತ್ತು.

