ಕೋಲಾರ: ಸೋನಿಯಾಗಾಂಧಿ ವಿರುದ್ಧ ದಾಖಲು ಮಾಡಿರುವ ಎಫ್ಐಆರ್ ರದ್ದುಗೊಳಿಸದಿದ್ದರೆ ಬೂತ್ ಮಟ್ಟದಿಂದ ಕಾರ್ಯಕರ್ತರನ್ನು ಸಂಘಟಿಸಿ ಬೃಹತ್ ಹೋರಾಟ ನಡೆಸಲಾಗುವುದು ಎಂದು ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ಎಚ್ಚರಿಕೆ ನೀಡಿದರು.ನಗರದ ತಮ್ಮ ನಿವಾಸದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಲೋಪದೋಷಗಳನ್ನು ಎತ್ತಿ ತೋರಿಸುವುದೇ ವಿರೋಧ ಪಕ್ಷದ ಕೆಲಸವಾಗುತ್ತದೆ, ಬಿ.ಎಸ್.ಯಡಿಯೂರಪ್ಪ ಅವರು ಬಹಳ ಅನುಭವಿ ರಾಜಕಾರಣಿ, ಕೊರೊನಾ ವೈರಸ್ ನಿಯಂತ್ರಣದಲ್ಲಿ ಮಹತ್ತರ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬ ನಂಬಿಕೆಯಿತ್ತು, ಬಿಜೆಪಿ ಕಾರ್ಯಕರ್ತ ಸೋನಿಯಾಗಾಂಧಿ ಅವರು ವಿರುದ್ಧ ಎಫ್ಐಆರ್ ದಾಖಲಿಸುವ ಕೆಲಸ ಮಾಡಿದ್ದಾನೆ ಎಂದು ಅಸಮಾಧಾನ ವ್ಯಕ್ತಡಿಸಿದರು.
ಮಾಧುಸ್ವಾಮಿ ವರ್ತನೆಗೆ ಕೆ.ಎಚ್.ಎಂ ಟೀಕೆ
ಸಣ್ಣ ನೀರಾವರಿ ಇಲಾಖೆ ಸಚಿವ ಮಾಧುಸ್ವಾಮಿ ಜಿಲ್ಲೆಗೆ ಆಗಮಿಸಿದ್ದಾಗ ಸ್ಥಳೀಯ ರೈತ ಮಹಿಳೆಯರು ಸಮಸ್ಯೆಗಳನ್ನು ಹೇಳಿಕೊಳ್ಳಲು ಮುಂದಾದಾಗ ಅವಾಚ್ಯ ಶಬ್ಧಗಳಿಂದ ನಿಂಧನೆ ಮಾಡಿರುವುದು ರಾಜ್ಯ ತಲೆ ತಗ್ಗಿಸುವಂತ ವಿಚಾರ ಎಂದು ಟೀಕಿಸಿದರು.ಸಚಿವರು ಜಿಲ್ಲೆಗೆ ಬಂದಾಗ ಸ್ಥಳೀಯರು ಸಮಸ್ಯೆಗಳಿಗೆ ಪರಿಹಾರ ಕೊಂಡುಕೊಳ್ಳಲು ಮುಂದಾಗುತ್ತಾರೆ, ಜವಾಬ್ದಾರಿ ಸ್ಥಾನದಲ್ಲಿ ಇದ್ದುಕೊಂಡು ಈ ರೀತಿ ಹೇಳಿಕೆ ನೀಡಿರುವುದು ಶೋಚನೀಯ ಸಂಗತಿ, ಕ್ಷಮೆಯಾಚಿಸಬೇಕು ಎಂದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಧಿಕಾರ ನಡೆಸುತ್ತಿರುವ ಪಕ್ಷದ ಕಣ್ಣು ತೆರೆಸುವುದು ವಿರೋಧ ಪಕ್ಷದ ಕೆಲಸ, ತಪ್ಪು ಕಂಡು ಹಿಡಿದರೆ ಅದಕ್ಕೆ ರಾಜಕೀಯ ಬಣ್ಣ ಕಟ್ಟುವುದೆ ಬಿಜೆಪಿ ನಾಯಕರ ಕೆಲಸ ಎಂದು ಆರೋಪಿಸಿದರು.
