ಶಿವಮೋಗ್ಗ: ಮಾನವ ಈಗಾಗಲೆ ಆಸೆಗಳ ಬೆನ್ನತ್ತಿ ದುರ್ಮಾಗದಲ್ಲಿ ನಡೆದು ಪ್ರಕೃತಿ ಮುನಿಸಿಗೆ ಆಗಾಗ ಕಾರಣವಾಗುತ್ತಲೇ ಇರುತ್ತಾನೆ. ಆದರೆ ಪಾಠ ಮಾತ್ರ ಕಲಿತ್ತಿಲ್ಲ ಎಂಬುದಕ್ಕೆ ಸಾಕ್ಷಿಯಾಗಿ ಆಘಾತಕಾರಿ ಅಂಶವೊಂದನ್ನ ಭಾರತೀಯ ಅರಣ್ಯ ಸಮೀಕ್ಷೆಯಲ್ಲಿ ಬೆಳಕಿಗೆ ಬಂದಿದೆ.
ಕರ್ನಾಟಕ ದೇಶದಲ್ಲೇ ಅತಿ ಹೆಚ್ಚು ಅರಣ್ಯವನ್ನು ಹೊಂದಿರುವ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವು ಎಲ್ಲರಿಗು ತಿಳಿದಿರುವ ವಿಷಯ. ಆದರೆ ಶಿವಮೊಗ್ಗದಲ್ಲಿ ಕಳೆದ ಎರಡು ವರ್ಷಗಳಲ್ಲಿ ಅತಿ ಹೆಚ್ಚು ಅರಣ್ಯ ಭೂಮಿ ನಾಶವಾಗಿ ಅರಣ್ಯ ವ್ಯಾಪ್ತಿ ಕ್ಷೀಣಿಸುತ್ತಿದ್ದು, ಪರಿಸರವಾದಿಗಳಲ್ಲಿ ಆತಂಕಕ್ಕೆ ಕಾರಣವಾಗಿದೆ.ಶಿವಮೊಗ್ಗ ಜಿಲ್ಲೆಯಲ್ಲಿ ಒಟ್ಟು 6631.44 ಚ.ಕಿ.ಮೀ. ಅರಣ್ಯ ಪ್ರದೇಶವಿದ್ದು, ಅದು ಪ್ರತಿ ವರ್ಷವೂ ಕುಸಿಯುತ್ತಿದೆ. ಕಳೆದ ಎರಡು ವರ್ಷಗಳಲ್ಲಿ ಒಟ್ಟು 50 ಚದರ ಕಿಲೋಮೀಟರ್ ಕಡಿತಗೊಂಡಿರುವುದರ ಮೂಲಕ ರಾಜ್ಯದಲ್ಲೇ ಶಿವಮೋಗ್ಗ ನಂ ೧ ಸ್ಥಾನ ಪಡೆದಿರುವುದು ವಿಪರ್ಯಾಸವಾಗಿದೆ.
ಅರಣ್ಯ ಕುಸಿತದ ಹಿಂದಿದೆ ರಾಜಕಾರಣಿಗಳ ಕೈವಾಡ…!?
ಶಿವಮೋಗ್ಗದಲ್ಲಿ ಇಷ್ಟೋಂದು ಭೂಕುಸಿತವಾಗಲು ಕಾರಣ ಇಲ್ಲಿನ ಸ್ಥಳೀಯ ರಾಜಕಾರಣಿಗಳು ಹಾಗೂ ಅಧಿಕಾರಿಗಳ ಎಂದು ಇಲ್ಲಿನ ಸ್ಥಳೀಯರು ಆರೋಪಿಸುತ್ತಿದ್ದಾರೆ. ಸ್ಥಳೀಯ ರಾಜಕಾರಣಿಗಳು ತಮ್ಮ ಸಂಬಂಧಿಕರಿಗೆ ಹಾಗು ಬೆಂಬಲಿಗರಿಗೆ ಅರಣ್ಯ ಭೂಮಿ ಒತ್ತುವರಿಗೆ ಒಪ್ಪಿಗೆ ನೀಡುತ್ತಾರಲ್ಲದೆ, ಒತ್ತುವರಿ ಮಾಡಿಕೊಂಡವರ ಪರವಾಗಿ ಅರಣ್ಯ ಇಲಾಖೆಯಲ್ಲಿ ವಕಾಲತ್ತು ವಹಿಸುತ್ತಾರೆ. ಇದರಿಂದ ಸ್ವಲ್ಪ ಜಮೀನು ಹೊಂದಿದ್ದವರು, ಎರಡು ವರ್ಷ ಕಳೆಯುವಷ್ಟರಲ್ಲಿ ಎಕರೆಗಟ್ಟಲೆ ಅರಣ್ಯ ಜಮೀನನ್ನು ಒತ್ತುವರಿ ಮಾಡಿಕೊಳ್ಳುತ್ತಾರೆ. ಇದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲದಂತಾಗಿದೆ.
ಅಲ್ಲದೆ, ಪ್ರಶ್ನೆ ಮಾಡುವ ಅರಣ್ಯ ಅಧಿಕಾರಿಗಳಿಗೆ ಧಮಕಿ ಹಾಕುತ್ತಾರೆ. ಇದಕ್ಕೆ ಒಪ್ಪದಿದ್ದಲ್ಲಿ ತಮ್ಮ ಪ್ರಭಾವ ಬಳಸಿ ಅಧಿಕಾರಿಗಳನ್ನೇ ವರ್ಗಾವಣೆ ಮಾಡಿಸುತ್ತಾರೆ. ಈಗಾಗಲೆ ಕಳೆದ ಮೂರು ವರ್ಷದಲ್ಲಿ ಶಿವಮೊಗ್ಗದ ನಾಲ್ಕು ಜನ ಉಪ ವಲಯ ಅರಣ್ಯಾಧಿಕಾರಿಗಳು ಬದಲಾಗಿದ್ದಾರೆ. ಅರಣ್ಯ ಭಾಗದಲ್ಲಿನ ಅಕ್ರಮಗಳನ್ನು ಪ್ರಶ್ನೆ ಮಾಡುತ್ತಿದ್ದಂತೆ ಅಧಿಕಾರಿಗಳು ವರ್ಗಾವಣೆಯಾಗುತ್ತಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಜಿಲ್ಲೆಯಲ್ಲಿ ಅನಗತ್ಯವಾಗಿ ಬಡಾವಣೆಗಳು ನಿರ್ಮಾಣ, ಸರ್ಕಾರಿ ಪ್ರಾಯೋಜಿತ ಕಾರ್ಯಕ್ರಮಗಳ ಯೋಜನೆಗಳ ಅನುಷ್ಠಾನಕ್ಕೆ ಅರಣ್ಯ ಭೂಮಿಯನ್ನು ಬಳಕೆ ಹಾಗು ವಿನಾಕಾರಣ ರಸ್ತೆಗಳ ವಿಸ್ತರಣೆ ಮಾಡಲಾಗುತ್ತಿರುವುದೇ ಅರಣ್ಯ ಅರಣ್ಯ ನಶಿಸಲು ಕಾರಣ ಎಂಬ ಆರೋಪ ಕೇಳಿ ಬರುತ್ತಿದೆ.
ಇತ್ತೀಚೆಗೆ ಫಾರೆಸ್ಟ್ ಸರ್ವೇ ಆಫ್ ಇಂಡಿಯಾ ಬಿಡುಗಡೆ ಮಾಡಿದ ವರದಿ ಪ್ರಕಾರ, ರಾಜ್ಯದ 25 ಜಿಲ್ಲೆಗಳಲ್ಲಿ ಅರಣ್ಯ ವಿಸ್ತರಣೆಯಾಗಿದ್ದು ಐದು ಜಿಲ್ಲೆಗಳಲ್ಲಿ ಅರಣ್ಯ ವ್ಯಾಪ್ತಿ ಕ್ಷೀಣಿಸಿದೆ. ಇದರಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಅತಿ ಹೆಚ್ಚು ಅರಣ್ಯ ಕುಸಿದರೆ ಗದಗ, ಧಾರವಾಡ, ಹಾವೇರಿ, ಹಾಗೂ ಬಾಗಲಕೋಟೆ ಜಿಲ್ಲೆಗಳಲ್ಲಿ ಅಲ್ಪ ಪ್ರಮಾಣದಲ್ಲಿ ಕುಸಿತ ಕಂಡು ಬಂದಿದೆ. ರಾಜ್ಯದಲ್ಲಿ ಒಟ್ಟು 1025 ಚದರ ಕಿಲೋಮೀಟರ್ ಅರಣ್ಯ ವಿಸ್ತರಣೆಯಾಗಿದೆ ಎಂದು ಈ ಸಮೀಕ್ಷೆ ತಿಳಿಸಿದ್ದು ಇನ್ನು ಎಚ್ಚೆತ್ತುಕೊಳ್ಳದಲ್ಲಿ ಸಮಸ್ಯೆ ತಪ್ಪಿದಲ್ಲ ಎಂದು ಎಚ್ಚರಿಸಿದ್ದಾರೆ.



