ಶ್ರೀನಿವಾಸಪುರ: ಪ್ರಧಾನಿ ಮೋದಿ, ಜನರ ಗಮನವನ್ನು ಬೇರೆಡೆ ಸೆಳೆಯಲು ಪೌರತ್ವ ತಿದ್ದುಪಡಿ ಮಸೂದೆ ಮೂಲಕ ಸಮಾಜವನ್ನು ಒಡೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ಶಾಸಕ ಕೆ.ಆರ್.ರಮೇಶ್ ಕುಮಾರ್ ಹೇಳಿದರು.
ಪಟ್ಟಣದ ತಾಲ್ಲೂಕು ಕಚೇರಿ ಎದರು ಮುಸ್ಲಿಮರು ಹಾಗೂ ಹಾಗೂ ವಿವಿಧ ರಾಜಕೀಯ ಪಕ್ಷಗಳ ಕಾರ್ಯಕರ್ತರಿಂದ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಬುಧವಾರ ಏರ್ಪಡಿಸಿದ್ದ ಪ್ರತಿಭಟನಾ ಸಮಾವೇಶದಲ್ಲಿ ಮಾತನಾಡಿ, ಕೇಂದ್ರದಲ್ಲಿ ಗದ್ದುಗೆ ಹಿಡಿದಿರುವವರಿಗೆ ಅಧಿಕಾರದ ಅಮಲೇರಿದೆ. ಜನರ ಸಮಸ್ಯೆಗಳಿಗೆ ಸ್ಪಂದಿಸದೆ ಸಂವಿಧಾನ ವಿರೋಧಿ ಕೃತ್ಯ ನಡೆಸುತ್ತಿದ್ದಾರೆ ಎಂದು ಟೀಕಿಸಿದರು.
ಜನರು ದೇಶಕ್ಕಾಗಿ ತ್ಯಾಗ ಮಾಡಿದ ವ್ಯಕ್ತಿಗಳ ಜತೆ ಹೋಗುತ್ತಾರೆಯೇ ಹೊರತು, ಮಹಾತ್ಮಾಗಾಂಧೀಜಿ ಅವರನ್ನು ಕೊಂದವರ ಜತೆ ಹೋಗುವುದಿಲ್ಲ. ಗಬ್ಬರ್ಸಿಂಗ್ ದರ್ಬಾರ್ ಹೆಚ್ಚು ಕಾಲ ನಡೆಯುವುದಿಲ್ಲ. ರಾಷ್ಟ್ರ ಧ್ವಜ, ರಾಷ್ಟ್ರಗೀತೆ, ಸಂವಿಧಾನಕ್ಕೆ ನಾವು ಗೌರವ ನೀಡಬೇಕು. ಗಾಂಧೀಜಿ, ಅಂಬೇಡ್ಕರ್ ಅವರ ಆಶಯದಂತೆ ನಡೆಯಬೇಕು. ಅಧಿಕಾರದ ನಶೆಯಲ್ಲಿ ತೇಲುತ್ತಿರುವ ಮೋದಿ ಹಾಗೂ ಅಮಿತ್ ಷಾ ಸ್ವಾರ್ಥಕ್ಕಾಗಿ ದೇಶದ ಭಾವೈಕ್ಯತೆಯನ್ನು ಬಲಿಗೊಡುತ್ತಿದ್ದಾರೆ ಎಂದು ಹೇಳಿದರು.
ದೇಶ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ. ಉದ್ಯೋಗಾವಕಾಶ ಇಲ್ಲದಾಗಿದೆ, ವಿದೇಶದಿಂದ ಹಣ ತಂದು ಬಡವರಿಗೆ ಕೊಡುವ ಮಾತು ನಿಜವಾಗಿಲ್ಲ. ಜನರು ಸಂಕಷ್ಟ ಎದುರಿಸುತ್ತಿದ್ದಾರೆ. ದೇಶದ ಜನರಿಗೆ ಬೇಕಿಲ್ಲದ ಪೌರತ್ವ ದಿದ್ದುಪಡಿ ಕಾಯ್ದೆ ತರುವ ಅಗತ್ಯವೇನಿತ್ತು. ತಲಾಖ್ಗೆ ಸಂಬಂಧಿಸಿದಂತೆ ಮುಸ್ಲಿಂ ಧರ್ಮದಲ್ಲಿ ಮೂಗು ತೂರಿಸುವ ಅಗತ್ಯವೇನಿತ್ತು. ದೇಶ ಪ್ರೇಮಿಯಾದ ಟಿಪ್ಪು ಜಯಂತಿಯನ್ನು ನಿಷೇಧಿಸಿದ್ದಾದರೂ ಏಕೆ. ಟಿಪ್ಪು ಸುಲ್ತಾನ್ ದೇಶ ದ್ರೋಹಿ ಎಂದು ಹೇಳಲು ಬಿಜೆಇ ಮುಖಂಡರಿಗೆ ನಾಚಿಕೆಯಾಗುವುದಿಲ್ಲವೆ ಎಂದು ಪ್ರಶ್ನಿಸಿದರು.
ಮಾಜಿ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಮಾತನಾಡಿ, ಕೇಂದ್ರ ಸರ್ಕಾರ ದೇಶದ ಅಭಿವೃದ್ಧಿಗೆ ಒತ್ತು ನೀಡುವುದನ್ನು ಬಿಟ್ಟು ಧರ್ಮದ ಹೆಸರಲ್ಲಿ ದೇಶ ಒಡಯುತ್ತಿದೆ. ಪ್ರತಿಭಟನೆಗಳಲ್ಲಿ ಅಮಾಯಕರು ಜೀವ ಕಳೆದುಕೊಳ್ಳುತ್ತಿದ್ದಾರೆ. ಸಂವಿಧಾನ ಈ ದೇಶದ ಆಧಾರ ಸ್ತಂಭ. ಸಂವಿಧಾನ ಬರೆದ ಡಾ. ಬಿ.ಆರ್.ಅಂಬೇಡ್ಕರ್ ಸಮಾಜದ ಎಲ್ಲ ವರ್ಗದ ಜನರಿಗೆ ಸಮಾನ ಅವಕಾಶಗಳನ್ನು ನೀಡಿದ್ದಾರೆ. ಆದರೆ ಅದನ್ನು ತಲೆಕೆಳಗೆ ಮಾಡುವ ಕೆಲಸ ಬಿಜೆಪಿ ಸರ್ಕಾರದಿಂದ ನಡೆಯುತ್ತಿದೆ. ಜನರು ಇದಕ್ಕೆ ಅವಕಾಶ ನೀಡುವುದಿಲ್ಲ ಎಂದು ಹೇಳಿದರು. ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಂ.ಶ್ರೀನಿವಾಸನ್, ಸದಸ್ಯ ತೂಪಲ್ಲಿ ನಾರಾಯಣಸ್ವಾಮಿ, ಕಾಂಗ್ರೆಸ್ ಮುಖಂಡ ಬಿ.ಜಿ.ಸೈಯದ್ ಖಾದರ್, ಕೆಪಿಆರ್ಎಸ್ ತಾಲ್ಲೂಕು ಅಧ್ಯಕ್ಷ ಪಾತಕೋಟ ನವೀನ್ ಕುಮಾರ್, ಮುಖಂಡರಾದ ಹಬೀಬ್ ಅನ್ಸಾರಿ, ಜಾಹಿದ್ ಅನ್ಸಾರಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಮಾತನಾಡಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸಂಜಯ್ ರೆಡ್ಡಿ, ಅಕ್ಬರ್ ಷರೀಫ್, ಮುಖಂಡರಾದ ಮುನಿರಾಜು, ಇಪ್ತಿಕಾರ್ ಅಹಮದ್, ಕೆ.ಅನ್ನೀಸ್ ಅಹ್ಮದ್ ಇದ್ದರು.



