ಮಂಗಳೂರು: ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದಲ್ಲಿ ಪರಿಶಿಷ್ಟ ಜಾತಿಯ ದಲಿತ ಮಹಿಳೆಯರಿಬ್ಬರನ್ನು ಅರ್ಚಕರನ್ನಾಗಿ ನೇಮಿಸಲಾಗಿದೆ ಎಂದು ಮಾಜಿ ಕೇಂದ್ರ ಸಚಿವ ಬಿ.ಜನಾರ್ದನ ಪೂಜಾರಿ ತಿಳಿಸಿದರು.
ನಿನ್ನೆ ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನದಲ್ಲಿ ಪರಿಶಿಷ್ಟ ಜಾತಿಯ ಮಹಿಳೆಯರಿಬ್ಬರ ಪಾದಪೂಜೆ ಮಾಡಿ ನಂತರ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿಯ ತತ್ವದ ಪ್ರಕಾರ ದೇವಸ್ಥಾನದಲ್ಲಿ ದೇವರ ಪೂಜೆ ಮಾಡಲು ಅವಕಾಶ ಕಲ್ಪಿಸಲಾಯಿತು.
ಉವರ್ಾ ಚಿಲಿಂಬಿಯ ನಿವಾಸಿ ಲಕ್ಷ್ಮೀ (65) ಮತ್ತು ಕುತ್ತಾರ್ ನಿವಾಸಿ ಚಂದ್ರಾವತಿ (46) ಎಂಬವರನ್ನು ದೇವಸ್ಥಾನದಲ್ಲಿ ಅರ್ಚಕರನ್ನಾಗಿ ನಿಯೋಜಿಸಲಾಗಿದೆ ಎಂದು ಪೂಜಾರಿ ತಿಳಿಸಿದರು.
ನಾವೆಲ್ಲ ದೇವರ ಮಕ್ಕಳು. ಜಾತಿ ಮತವನ್ನು ನೋಡದೆ ಪರಮಾತ್ಮನ ಪೂಜೆ ಮಾಡಲು ಅರ್ಹರು. ಹೀಗಾಗಿ ಗಂಡನನ್ನು ಕಳೆದುಕೊಂಡ ವಿಧವೆಯರಿಬ್ಬರು ದೇವರ ಸೇವೆ ಮಾಡಲು ಮುಂದೆ ಬಂದಿದ್ದಾರೆ. ಗುರುಸ್ವಾಮಿಯ ತತ್ವದ ಪ್ರಕಾರ ನಾವಿಲ್ಲ್ಲಿ ಸ್ವಚ್ಛ ನೆಲದಲ್ಲಿ ನಿರ್ಮಲತೆಯನ್ನು ಕಾಪಾಡಿಕೊಂಡು ಭಕ್ತಿಯಿಂದ ದೇವಸ್ಥಾನದಲ್ಲಿ ಪೂಜೆಗೈಯಲು ಈ ಮಹಿಳೆಯರಿಗೆ ಅವಕಾಶ ಒದಗಿಸಲಾಗಿದೆ ಎಂದರು. ನಾವು ಇದನ್ನು ನಾರಾಯಣ ಗುರುಸ್ವಾಮಿಗಳ ಆದೇಶದಂತೆ ಮಾಡುತ್ತಿದ್ದೇವೆ.
ಇದಕ್ಕೆ ಸಮುದಾಯದಿಂದ ವಿರೋಧ ಇಲ್ಲವೇ ಎಂದು ಪತ್ರಕರ್ತರೊಬ್ಬರು ಕೇಳಿದ ಪ್ರಶ್ನೆಗೆ ವಿರೋಧ ವ್ಯಕ್ತಪಡಿಸುವವರಿಗೆ ಗುರುಗಳನ್ನು ಆರಾಧಿಸುವ ಅಥವಾ ಕೈ ಮುಗಿಯುವ ಅರ್ಹತೆಯೂ ಇಲ್ಲ ಎಂದರು.
ಈ ಹಿಂದೆ ಬಿಲ್ಲವರಿಗೆ ದೇವಸ್ಥಾನಗಳಿಗೆ ಪ್ರವೇಶ ಇರಲಿಲ್ಲ. ಬಾವಿಯಿಂದ ನೀರು ಸೇದುವಂತಿರಲಿಲ್ಲ. ಅಸ್ವ್ರಸ್ಯರಂತೆ ಕಾಣುತ್ತಿದ್ದರು ಎಂದು ಪೂಜಾರಿ ನುಡಿದರು. ಪತ್ರಿಕಾಗೋಷ್ಠಿಯಲ್ಲಿ ಜಯಸುವರ್ಣ, ಸಾಯಿರಾಂ, ಹರಿಕೃಷ್ಣ ಬಂಟ್ವಾಳ ಉಪಸ್ಥಿತರಿದ್ದರು.


