ಮಂಗಳೂರು: ಮಂಗಳೂರು ನಗರದ ವೆಲೆನ್ಸಿಯಾ ಗೋರಿಗುಡ್ಡೆ ರಸ್ತೆಯಲ್ಲಿ ದಿನಾಂಕ 22-09-2014 ರಂದು ಮಧ್ಯಾಹ್ನ ಎರಡರ ವೇಳೆ ಬಡಗ ಎಡಪದವು-ಕುಂದೊಟ್ಟು ನಿವಾಸಿ ದುರ್ಗಾ ಪ್ರಸಾದ್ ಶೆಟ್ಟಿ ಎಂಬವರನ್ನು ಮಾರಕಾಯುಧಗಳಿಂದ ಹೊಡೆದು ಕೊಲ್ಲಲಾದ ಘಟನೆಗೆ ಸಂಬಂಧಿಸಿದಂತೆ ಪಾಂಡೇಶ್ವರ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ಆರೋಪಿಗಳನ್ನು ಜಪ್ಪಿನಮೊಗರುವಿನ ಪಾಂಚಜನ್ಯ ತಂದೊಳಿಕೆ ನಿವಾಸಿ ಸಂತೋಷ್ ಶೆಟ್ಟಿಗಾರ್(38), ಎಕ್ಕೂರಿನ ಪೆಗಸಿಸ್ ನಿವಾಸಿ ಸಂದೇಶ್ ಕೋಟ್ಯಾನ್(21), ಶಕ್ತಿನಗರದ ಮುಗರೋಡಿ ನಿವಾಸಿ ಪವನ್ ಶೆಟ್ಟಿ(20), ಗೋಕರ್ಣ- ಮರೋಳಿ ನಿವಾಸಿ ಹರ್ಷಿತ್ ಶೆಟ್ಟಿ(21) ಎಂದು ಗರುತಿಸಲಾಗಿದೆ.


ದುರ್ಗಾ ಪ್ರಸಾದ್ ಎಂಬವರನ್ನು ಮಂಗಳೂರಿನ ವೆಲೆನ್ಷಿಯಾ-ಗೋರಿಗುಡ್ಡೆ ಎಂಬಲ್ಲಿನ ರಸ್ತೆ ಬದಿಯಲ್ಲಿ ಮಾರಕಾಯುಧಗಳಿಂದ ಹೊಟ್ಟೆಗೆ ತಿವಿದು ಗಂಭೀರವಾಗಿ ಗಾಯಗೊಳಿಸಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ನಗರದ ಯುನಿಟಿ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು.
ಈ ಬಗ್ಗೆ ಮೃತರ ಸಂಬಂಧಿ ಜೀವನ್ ಶೆಟ್ಟಿ ಎಂಬವರು ಪಾಂಡೇಶ್ವರ ಠಾಣೆಗೆ ದೂರು ನೀಡಿದ್ದರು. ಫೈನಾನ್ಸ್ ವಿಚಾರದಲ್ಲಿ ಆರೋಪಿಗಳಿಗೂ ಹಾಗೂ ದುರ್ಗಾ ಪ್ರಸಾದ್ ಮಧ್ಯೆ ವೈಮನಸ್ಸು ಮೂಡಿ ಕೊಲೆ ಮಾಡುವಷ್ಟು ಮಟ್ಟಿಗೆ ಬೆಳೆದಿತ್ತು ಎಂದು ಆರೋಪಿಗಳು ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾರೆ ಪೊಲೀಸರು ತಿಳಿಸಿದ್ದಾರೆ. ಆರೋಪಿಗಳ ವಿರುದ್ಧ ಈ ಹಿಂದೆಯೂ ಹಲವಾರು ಪ್ರಕರಣಗಳು ದಾಖಲಾಗಿತ್ತು. ಪಾಂಡೇಶ್ವರ ಇನ್ಸ್ಪೆಕ್ಟರ್ ದಿನಕರ ಶೆಟ್ಟಿ ನೇತೃತ್ವದಲ್ಲಿ ತನಿಖೆ ಮುಂದುವರಿದಿದೆ.


