ಕೋಲಾರ : ಪ್ರಪಂಚದಲ್ಲೇ ಅತಿ ಹೆಚ್ಚು ಯುವ ಜನತೆಯನ್ನು ಹೊಂದಿರುವ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದ್ದು ದೇಶದ ಅಭಿವೃದ್ಧಿಗೆ ಇವರ ಸೇವೆ ಅಮೂಲ್ಯವಾದುದು ಎಂದು ಜಿಲ್ಲಾಧಿಕಾರಿಗಳಾದ ಜೆ.ಮಂಜುನಾಥ್ ಅವರು ತಿಳಿಸಿದರು. ನಗರದ ನ್ಯಾಯಾಂಗ ಕಟ್ಟಡಗಳ ಸಂಕೀರ್ಣದಲ್ಲಿನ ನೆಹರು ಯುವಕೇಂದ್ರದಲ್ಲಿ, ಭಾರತ ಸರ್ಕಾರ ಯುವಜನ ವ್ಯವಹಾರ ಹಾಗೂ ಕ್ರೀಡಾ ಸಚಿವಾಲಯ ಹಾಗೂ ನೆಹರು ಯುವಕೇಂದ್ರದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ವಿಷಯಾಧಾರಿತ ಜಾಗೃತಿ ಹಾಗೂ ಶಿಕ್ಷಣ ಕಾರ್ಯಕ್ರಮ ಮತ್ತು ನೂತನ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಇಂದಿನ 21 ನೇ ಶತಮಾನದಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಇವುಗಳನ್ನು ನಿವಾರಿಸಲು ಯುವ ಸಮುದಾಯ ಎಚ್ಚೆತ್ತುಕೊಂಡು ಕೆಲಸ ಮಾಡಬೇಕು. ಇವರಲ್ಲಿ ಅರಿವು ಮೂಡಿಸಿ ದೇಶದ ಏಳಿಗೆಯಲ್ಲಿ ಯುವಕರ ಜವಾಬ್ದಾರಿಯ ಬಗ್ಗೆ ಮನದಟ್ಟು ಮಾಡುವ ಕೆಲಸವನ್ನು ಮಾಡಬೇಕು. ಜೊತೆಗೆ ಯುವಕರು ಇತರರ ಸಮಸ್ಯೆಗಳಿಗೆ ಸ್ಪಂದಿಸುವಂತಾಗಬೇಕು ಎಂದು ಹೇಳಿದರು. 

ಯುವ ಜನತೆಯು ಸಮಾಜದಲ್ಲಿ ಮುಂದೆ ಬರಲು ಶಿಕ್ಷಣ, ತರಬೇತಿಗಳನ್ನು ಪಡೆದುಕೊಳ್ಳಬೇಕು. ಇದರ ಜೊತೆಗೆ ಕೌಶಲ್ಯಗಳನ್ನು ಅಭಿವೃದ್ಧಿ ಪಡಿಸಿಕೊಂಡಿದ್ದೇ ಆದಲ್ಲಿ, ರಾಯಬಾರಿಗಳು, ಅಂಬಾಜೆಟರ್ಗಳಾಗಿ ಕಾರ್ಯ ನಿರ್ವಹಿಸಲು ಅನುಕೂಲವಾಗುತ್ತದೆ. ಅಷ್ಟೇ ಅಲ್ಲದೆ ಯುವಕರು ಕೌಶಲ್ಯಗಳನ್ನು ಹೊಂದಿದ್ದರೆ ಕೇವಲ ನಮ್ಮ ದೇಶದಲ್ಲೇ ಅಲ್ಲದೆ ವಿದೇಶಗಳಲ್ಲಿಯೂ ಉನ್ನತ ಹುದ್ದೆಯ ಕೆಲಸಗಳನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ರಾಜ್ಯದಲ್ಲಿ 623 ಜಿಲ್ಲೆಗಳಲ್ಲಿ ನೆಹರು ಯುವ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ. ಇವುಗಳ ಮೂಲಕ 18 ರಿಂದ 29 ವರ್ಷದೊಳಗಿನ ಯುವ ಜನತೆಗೆ ಅರಿವು ಮೂಡಿಸುವ ಕಾರ್ಯವನ್ನು ಮಾಡಲಾಗುತ್ತಿದೆ. ಇದರ ಜೊತೆಗೆ ಕಲೆ, ಇತಿಹಾಸ, ಸಾಹಿತ್ಯ ಮತ್ತು ಪರಂಪರೆಯ ಬಗ್ಗೆ ಹೆಚ್ಚು ಜಾಗೃತಿ ಮೂಡಿಸುವಂತಾಗಬೇಕು ಎಂದ ಅವರು, ಕೋಲಾರ-ಚಿಕ್ಕಬಳ್ಳಾಪುರದ ನೆಹರು ಯುವ ಕೇಂದ್ರ ಕಚೇರಿಯು ರಾಜ್ಯದ ಇತರೆ ಜಿಲ್ಲೆಗಳಿಗೆ ಮಾದರಿಯಾಗುವಂತೆ ಕಾರ್ಯ ನಿರ್ವಹಿಸಬೇಕು ಎಂದರು. 

ಕೇಂದ್ರ ಸರ್ಕಾರವು ಬರ ನಿರ್ವಹಣೆಗಾಗಿ ಜಲಶಕ್ತಿ ಅಭಿಯಾನವನ್ನು ನಡೆಸುತ್ತಿದ್ದು ಇದರಲ್ಲಿ ಕೋಲಾರ ಜಿಲ್ಲೆಯೂ ಸಹ ಸೇರಿದೆ. ಈ ಜಲಶಕ್ತಿ ಅಭಿಯಾನದಡಿ ಕೆರೆಗಳ ಪುನಶ್ಚೇತನ, ಮಳೆ ನೀರಿನ ಕೊಯ್ಲು, ಅಂತರ್ಜಲ ಅಭಿವೃದ್ಧಿಗೆ ಮಳೆ ನೀರನ್ನು ಇಂಗಿಸುವ ಕೆಲಸ ಮಾಡಬೇಕು. ಇದರ ಯಶಸ್ವಿಗೆ ಎಲ್ಲರೂ ಕೈ ಜೋಡಿಸಬೇಕಲ್ಲದೆ ಯುವ ಸಮುದಾಯ ಇದರ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದು ಹೇಳಿದರು. ನೆಹರು ಯುವಕೇಂದ್ರದ ರಾಜ್ಯ ನಿರ್ದೇಶಕರಾದ ಅಥುಲ್ ಜೆ ನಿಕಮ್ ಅವರು ಮಾತನಾಡಿ, ನೆಹರು ಯುವ ಕೇಂದ್ರಕ್ಕೆ ಕೋಲಾರ ಜಿಲ್ಲೆಯಲ್ಲಿ ಈ ಹಿಂದೆ ಸ್ವಂತ ಕಟ್ಟಡವಿಲ್ಲದೆ ಖಾಸಗಿ ಕಟ್ಟಡದಲ್ಲಿ ಕಾರ್ಯ ನಿರ್ವಹಿಸಲಾಗುತ್ತಿತ್ತು. ಇದೀಗ ಸರ್ಕಾರಿ ಕಟ್ಟಡವನ್ನು ಜಿಲ್ಲಾಧಿಕಾರಿಗಳು ನೀಡಿದ್ದು ಉತ್ತಮವಾಗಿ ಕೆಲಸ ಮಾಡಿಕೊಂಡು ಹೋಗಲು ಅನುಕೂಲವಾಗಿದೆ. ಚಿಕ್ಕಬಳ್ಳಾಪುರದಲ್ಲಿ ನೆಹರು ಯುವ ಕೇಂದ್ರವನ್ನು ನೂತನವಾಗಿ ನಿರ್ಮಾಣ ಮಾಡುವ ಬಗ್ಗೆ ಕೇಂದ್ರ ಸರ್ಕಾರದೊಂದಿಗೆ ಚರ್ಚಿಸಲಾಗುವುದು ಎಂದು ತಿಳಿಸಿದರು. 
ನೆಹರು ಯುವಕೇಂದ್ರದ ಜಿಲ್ಲಾ ಯುವ ಜನ ಸಮನ್ವಯಾಧಿಕಾರಿಯಾದ ಎಸ್.ಸಿದ್ದರಾಮಪ್ಪ, ರಾಜ್ಯ ಸಲಹಾ ಸಮಿತಿಯ ಸದಸ್ಯರಾದ ಲಕ್ಷ್ಮೀಶ್ಗೌಡ, ನಿವೃತ್ತ ಜಿಲ್ಲಾ ಯುವಜನ ಸಮನ್ವಯಾಧಿಕಾರಿಯಾದ ಜಿ.ಇ. ನಾರಾಯಣಗೌಡ, ಸಂಪನ್ಮೂಲ ವ್ಯಕ್ತಿ ವರ್ಷ, ವಕೀಲರಾದ ಶಂಕರ್ನಾಗ್, ಲೆಕ್ಕಾಧಿಕಾರಿಯಾದ ನರಸಮ್ಮ, ಎನ್.ವೈ.ಕೆ.ಗಳಾದ ಎಸ್.ಪ್ರವೀಣ್ ಕುಮಾರ್, ಮಂಜುನಾಥ್, ಎನ್.ವೈ.ವಿಗಳಾದ ಗಣೇಶ್, ದೀಪಕ್, ಮುನೇಶ್, ವಿಜಯ್, ಶಿವಕುಮಾರ್, ದೇವೇಂದ್ರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
